ಕಾಬುಲ್: ತಾಲಿಬಾನ್ಗೆ ಸವಾಲಾಗಿದ್ದ ಪಂಜ್ಶೀರ್ ಕಣಿವೆಯನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ತಾಲಿಬಾನ್ ಸೋಮವಾರ ವಾದಿಸಿದೆ.
ಪಂಜ್ಶೀರ್ ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಹೊರಡಿಸಿರುವ ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್, ಈ ವಿಜಯದೊಂದಿಗೆ ನಮ್ಮ ದೇಶವು ಯುದ್ಧದ ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಹೊರಬಂದಿದೆ ಎಂದಿದ್ದಾರೆ.
ಪಂಜ್ಶೀರ್ನ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆಯು ತಾಲಿಬಾನ್ಗೆ ಸೆಡ್ಡುಹೊಡೆದು ನಿಂತಿತ್ತು. ಆಫ್ಘಾನ್ ರಾಜಧಾನಿ ಕಾಬುಲ್ ಸೇರಿದಂತೆ ಇಡೀ ಆಫ್ಘಾನ್ ವಶಪಡಿಸಿಕೊಂಡ ತಾಲಿಬಾನ್ಗೆ ಪಂಜ್ಶೀರ್ ಕಣಿವೆ ಮಗ್ಗುಲ ಮುಳ್ಳಾಗಿತ್ತು. ಅನೇಕ ಬಾರಿ ಸಂಘರ್ಷ ನಡೆದರೂ ಪಂಜ್ಶೀರ್ ಅಲುಗಾಡಿರಲಿಲ್ಲ. ಅಲ್ಲದೆ, ತಾಲಿಬಾನ್ನ 1000 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿತ್ತು.
ಆದರೆ, ಅಮೆರಿಕ ಸೇನೆ ಆಫ್ಘಾನ್ ನೆಲವನ್ನು ಸಂಪೂರ್ಣ ತೊರೆಯುತ್ತಿದ್ದಂತೆ ಸರ್ಕಾರ ರಚನೆಯ ಜತೆಗೆ ಪಂಜ್ಶೀರ್ ಮೇಲೆ ದಾಳಿಯನ್ನು ತೀವ್ರಗೊಳಿಸಿದ ತಾಲಿಬಾನ್ ಅದನ್ನು ವಶಕ್ಕೆ ಪಡೆದುಕೊಳ್ಳಲು ಶತಾಯಗತಾಯ ಪ್ರಯತ್ನ ಮಾಡಿತು. ಈ ಮೊದಲು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ತಾಲಿಬಾನ್ ಮುಂದಾಗಿತ್ತು. ಆದರೆ, ತಾಲಿಬಾನ್ ನೀತಿಗೆ ಪಂಜ್ಶೀರ್ ಒಪ್ಪಲಿಲ್ಲ. ಹೀಗಾಗಿ ಸಂಧಾನ ಮುರಿದುಬಿತ್ತು.
ಇದಾದ ಬಳಿಕ ಪಂಜ್ಶೀರ್ ಮೇಲೆ ತಾಲಿಬಾನ್ ದಾಳಿಯನ್ನು ತೀವ್ರಗೊಳಿಸಿತು. ತಾಲಿಬಾನ್ಗೆ ಪಾಕ್ ಕುಮ್ಮಕ್ಕು ನೀಡಿದೆ ಎಂದು ಪ್ರತಿರೋಧ ಪಡೆಯ ನಾಯಕರು ಆರೋಪ ಮಾಡಿದ್ದರು. ಆದರೆ, ಕೊನೆಗೂ ಪಂಜ್ಶೀರ್ ಪ್ರಾಂತ್ಯ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ಪ್ರತಿರೋಧ ಪಡೆಯ ಮುಖ್ಯ ಕಮಾಂಡರ್ ಸಲೇಹ್ ಮೊಹಮ್ಮದ್ ಮತ್ತು ಪಂಜ್ಶೀರ್ ಹೋರಾಟಗಾರರನ್ನು ಹೊಡೆದುಳಿಸಿದ್ದೇವೆಂದು ತಾಲಿಬಾನ್ ವಾದಿಸಿದೆ.
ತಾಲಿಬಾನ್ ದಾಳಿಗೆ ಪಂಜ್ಶೀರ್ ಪ್ರಾಂತ್ಯದ ವಕ್ತಾರ ಫಾಹಿಮ್ ದಾಶ್ತಿ ಕೂಡ ಮೃತಪಟ್ಟಿರುವುದಾಗಿ ಇಂದು ಬೆಳಗ್ಗೆಯಷ್ಟೇ ವರದಿ ಪ್ರಕಟವಾಗಿತ್ತು.
ಪ್ರತಿರೋಧ ಪಡೆಗಳ ನಾಯಕ ಅಹ್ಮದ್ ಮಸೂದ್ ಭಾನುವಾರ ಮಾತನಾಡಿ, ತಾಲಿಬಾನ್ ಪ್ರಾಂತ್ಯವನ್ನು ತೊರೆದರೆ ಹೋರಾಟ ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧ ಎಂದು ಹೇಳಿದ್ದಾರೆಂದು ಸ್ಪುಟ್ನಿಕ್ ವರದಿ ಮಾಡಿದೆ. ತಾಲಿಬಾನ್ ಜತೆಗಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಲು ಮುಂದಾಗಿರುವುದಾಗಿ ಮಸೂದ್ ಹೇಳಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)
ತಾಲಿಬಾನ್ ದಾಳಿಯಲ್ಲಿ ಆಫ್ಘಾನ್ ಪ್ರತಿರೋಧ ಪಡೆಯ ವಕ್ತಾರ ಫಾಹಿಮ್ ದಾಶ್ತಿ ಸಾವು
ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು