ಮುಂಬೈ: ಪ್ರಸ್ತುತ ಬಾಲಿವುಡ್ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಬಾಲಿವುಡ್ನಲ್ಲಿ ಬಿಡುಗಡೆಯಾಗುತ್ತಿರುವ ಸಾಲು ಸಾಲು ಚಿತ್ರಗಳೆಲ್ಲ, ಬಾಕ್ಸ್ಆಫೀಸ್ನಲ್ಲಿ ಮಕಾಡೆ ಮಲಗುತ್ತಿವೆ. ಈ ವರ್ಷ ಬಿಡುಗಡೆಯಾದ ಕಂಗನಾ ರಣಾವತ್ ಅಭಿನಯದ ಧಾಕಡ್, ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಚೌಹಾಣ್, ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ, ರಣಬೀರ್ ಕಪೂರ್ ಅವರ ಶಂಶೇರಾ, ರಣವೀರ್ ಸಿಂಗ್ ಅವರ 83 ಸೇರಿದಂತೆ ಸಾಕಷ್ಟು ಸ್ಟಾರ್ ನಟರ ಸಿನಿಮಾ ನಷ್ಟ ಅನುಭವಿಸಿವೆ.
ಬಾಯ್ಕಾಟ್ ಅಭಿಯಾನವೂ ಕೂಡ ಬಾಲಿವುಡ್ ಮಂದಿಗೆ ಬಿಸಿ ತುಪ್ಪವಾಗಿದೆ. ಬಾಲಿವುಡ್ ಕಡೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಅನೇಕ ಕಲಾವಿದರು ಈಗಾಗಲೇ ತಮ್ಮ ಧ್ವನಿಯೆತ್ತಿದ್ದಾರೆ. ಇದೀಗ ಆ ಸಾಲಿಗೆ ವಿವಾದಿತ ನಟಿ ಎಂದೇ ಖ್ಯಾತರಾಗಿರುವ ಸ್ವರಾ ಭಾಸ್ಕರ್ ಸಹ ಸೇರಿಕೊಂಡಿದ್ದಾರೆ. ಬಾಲಿವುಡ್ ಎದುರಾಗಿರುವ ಸಂಕಷ್ಟಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಸ್ವರಾ, ಈಗ ಏನು ಬಾಲಿವುಡ್ ವಿರೋಧಿಸುವ ಟ್ರೆಂಡ್ ಶುರುವಾಗಿದೆಯೋ, ಅದು ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಹೆಚ್ಚಾಗಿದೆ. ಸುಶಾಂತ್ ಸಾವಿನ ಬಳಿಕ ಎಲ್ಲರು ಬಾಲಿವುಡ್ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆತನ ಸಾವಿಗೆ ಬಾಲಿವುಡ್ ಹೊಣೆ, ಬಾಲಿವುಡ್ನಲ್ಲಿರುವ ನೆಪೋಟಿಸಂ ಕಾರಣ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಹೀಗಾಗಿ ಬಾಲಿವುಡ್ ಕಡೆ ದ್ವೇಷದ ಭಾವನೆ ಹೆಚ್ಚಾಗುತ್ತಿರುವ ಪರಿಣಾಮ ಬಾಲಿವುಡ್ನ ಸಿನಿಮಾಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಆದರೆ, ಬಾಲಿವುಡ್ ಮತ್ತೆ ತನ್ನ ಹಾದಿಗೆ ಮರಳಿದೆ ಎಂದು ಸ್ವರಾ ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಾವಿನ ಬಳಿಕವೂ ಮಾತನಾಡಿದ್ದ ಸ್ವರಾ, ಸುಶಾಂತ್ಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರೇ ಹೇಳಿದ್ದಾರೆ. ಅವರಿಗೆ ಬೈಪೋಲಾರ್ ಸಮಸ್ಯೆ ಇತ್ತು ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿಷಯವನ್ನು ಕೆಲವರು ನಂಬುವ ಸ್ಥಿತಿಯಲ್ಲಿಲ್ಲ. ಸುಶಾಂತ್ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂಬ ಅನುಮಾನವನ್ನು ಪದೇಪದೇ ವ್ಯಕ್ತಪಡಿಸುತ್ತಲೇ ಇದ್ದಾರೆ. ಸುಶಾಂತ್ಗೆ ಮಾನಸಿಕ ಸಮಸ್ಯೆಗಳಿದ್ದವು ಮತ್ತು ಅವರು ಬೈಪೋಲಾರ್ನಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಇಷ್ಟಕ್ಕೂ ಜನ ಯಾಕೆ ನಂಬುತ್ತಿಲ್ಲ ಎಂಬುದು ತನಗೆ ಅರ್ಥವೇ ಆಗುತ್ತಿಲ್ಲ ಎಂದು ನಟಿ ಸ್ವರಾ ಭಾಸ್ಕರ್ ಹೆಳಿಕೊಂಡಿದ್ದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೊನೆಯದಾಗಿ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸ್ವರಾ ಅವರ ಸಿನಿಮಾ ವೀರ್ ದಿ ವೆಡ್ಡಿಂಗ್. ತುಂಬಾ ದಿನಗಳ ಬಳಿಕ ಅವರ ಹೊಸ ಸಿನಿಮಾ “ಜಹಾನ್ ಚಾರ್ ಯಾರ್” ಸೆಪ್ಟೆಂಬರ್ 16ಕ್ಕೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಗಸ್ಟ್ 22ರಂದು ಟ್ರೈಲರ್ ಬಿಡುಗಡೆಯಾಗಿದ್ದು, ತಕ್ಕಮಟ್ಟಿಗೆ ಗಮನ ಸೆಳೆಯುತ್ತಿದೆ. (ಏಜೆನ್ಸೀಸ್)
ಗೋವಾ ಪ್ರವಾಸದಲ್ಲಿದ್ದ ಬಿಜೆಪಿ ನಾಯಕಿ, ಟಿಕ್ಟಾಕ್ ಸ್ಟಾರ್ ಸೊನಾಲಿ ಪೋಗಟ್ ಹೃದಯಾಘಾತದಿಂದ ನಿಧನ
ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?