ನವದೆಹಲಿ: ಗುಜರಾತ್ ಗಲಭೆ ಪ್ರಕರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿದ ಸುಳ್ಳು ಆರೋಪಗಳಿಂದ ಅವರೆಷ್ಟು ನೊಂದಿದ್ದಾರೆ ಎಂಬುದನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶನಿವಾರ ಹೇಳಿದರು.
ಪ್ರಧಾನಿ ಮೋದಿ ಅವರು ದೊಡ್ಡ ನಾಯಕರಾಗಿದ್ದರೂ ಈ ಪ್ರಕರಣ ಸಂಬಂಧ ಒಂದೇ ಒಂದೂ ಮಾತನ್ನೂ ಆಡಲಿಲ್ಲ. ಆದರೆ, ಇಂದು ಸತ್ಯ ಏನೆಂಬುದು ಹೊರ ಬಂದಿದೆ. ಈ ಪ್ರಕರಣದಲ್ಲಿ ಕೇಳಿಬಂದ ಸುಳ್ಳು ಆರೋಪಗಳಿಂದ ಪ್ರಧಾನಿ ಮೋದಿ ನೊಂದುಕೊಂಡಿರುವುದನ್ನು ನಾನು ನೋಡಿದ್ದೇನೆ. ತುಂಬಾ ಗಟ್ಟಿಮುಟ್ಟಾದ ವ್ಯಕ್ತಿ ತುಂಬಾ ನೋವನ್ನು ಸಹಿಸಬಲ್ಲ. ಕಾನೂನು ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಪ್ರಧಾನಿ ಮೋದಿ ಒಮ್ಮೆಯೂ ಮಧ್ಯ ಪ್ರವೇಶಿಸಲಿಲ್ಲ ಎಂದು ಹೇಳಿದರು.
ಈ ಪ್ರಕರಣದಿಂದ ಬಿಜೆಪಿಯ ಇಮೇಜ್ಗೆ ಧಕ್ಕೆ ಬಂದಿತ್ತು. ಆದರೆ ಈಗ ಅದನ್ನು ತೆಗೆದುಹಾಕಲಾಗಿದೆ. ಗಲಭೆಗಳ ಸಮಯದಲ್ಲಿ ಗುಜರಾತ್ ಸರ್ಕಾರವು ಕ್ರಮ ತೆಗೆದುಕೊಳ್ಳುವುದರಲ್ಲಿ ವಿಳಂಬ ಮಾಡಲಿಲ್ಲ. ಆದರೆ, ದೆಹಲಿಯಲ್ಲಿ ಹಲವಾರು ಸಿಖ್ರನ್ನು ಕೊಲ್ಲಲಾಯಿತು. ಆದರೂ ಯಾವುದೇ ಬಂಧನಗಳನ್ನು ಮಾಡಲಿಲ್ಲ? ಕೆಲವರು ಹೇಗೆ ಪಕ್ಷಪಾತದ ಆರೋಪ ಮಾಡುತ್ತಿದ್ದಾರೆ ನೋಡಿ ಎಂದು ಅಮಿತ್ ಷಾ ಪರೋಕ್ಷವಾಗಿ ಕಾಂಗ್ರೆಸ್ಗೆ ಮಾತಿನ ಚಾಟಿ ಬೀಸಿದರು.
ಗುಜರಾತ್ ಗಲಭೆ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ಈ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ (ಜೂನ್ 24) ಕ್ಲೀನ್ ಚಿಟ್ ನೀಡಿದೆ.
ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿ ಮತ್ತು ಹಾಲಿ ಪ್ರಧಾನಿ ಮೋದಿ ಸೇರಿದಂತೆ 63 ಮಂದಿಯ ಪಾತ್ರವಿದೆ ಎಂದು ಆರೋಪಿಸಲಾಗಿತ್ತು. ಘಟನೆ ಸಂಬಂಧ ವಿಶೇಷ ತನಿಖಾ ತಂಡವು ತನಿಖೆ ನಡೆಸಿ ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ, ಗಲಭೆಯಲ್ಲಿ ಮೃತಪಟ್ಟಿದ್ದ ಕಾಂಗ್ರೆಸ್ ನಾಯಕ ಎಹ್ಸಾನ್ ಜಾಫ್ರಿ ಪತ್ನಿ ಜಾಕಿಯಾ ಜಫ್ರಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿ, ಎಸ್ಐಟಿ ತನಿಖಾ ವರದಿಯನ್ನು ಎತ್ತಿಹಿಡಿದಿತ್ತು. ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬಳಿಕ ಆದೇಶವನ್ನು ಪ್ರಶ್ನಿಸಿ ಜಾಕಿಯಾ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಜೂನ್ 24ರಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಜಾಕಿಯಾ ಅವರ ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಪ್ರಧಾನಿ ಮೋದಿ ಅವರಿಗೆ ಗುಜರಾತ್ ಗಲಭೆ ಪ್ರಕರಣದಲ್ಲಿ ಕ್ಲೀನ್ ಚಿಟ್ ನೀಡಿದೆ.
2002 ರಲ್ಲಿ ಗುಜರಾತ್ನಲ್ಲಿ ನಡೆದ ಮೂರು ದಿನಗಳ ಹಿಂಸಾಚಾರದಲ್ಲಿ 1,000 ಕ್ಕೂ ಹೆಚ್ಚು ಜನರು ಅದರಲ್ಲೂ ಹೆಚ್ಚಾಗಿ ಮುಸ್ಲಿಮರು ಕೊಲ್ಲಲ್ಪಟ್ಟರು. 2002ರ ಫೆಬ್ರವರಿ 28 ರಂದು ಅಹಮದಾಬಾದ್ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಎಹ್ಸಾನ್ ಜಾಫ್ರಿ ಕೊಲ್ಲಲ್ಪಟ್ಟರು. (ಏಜೆನ್ಸೀಸ್)
ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಹುಟ್ಟೂರಿನ ಸುಧಾರಣೆಗೆ ಮುಂದಾದ ನಟ ಅನಿರುದ್ಧ: ತನ್ನದೇಯಾದ ಕೆಲ ಸುಧಾರಣೆ ಪಟ್ಟಿ ತಯಾರಿ
ಎಸ್ಸೆಸ್ಸೆಲ್ಸಿ ಪಾಸ್ ಆಗಲ್ಲ ಎಂದು ಗೇಲಿ ಮಾಡಿದವರಿಗೆ ಈ ಹುಡುಗ ಕೊಟ್ಟ ತಿರುಗೇಟು ಹೇಗಿದೆ ನೋಡಿ!
VIDEO| ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ: ಮೆಚ್ಚುಗೆಯ ಮಹಾಪೂರ