ಕಾಬುಲ್: ಯಾವುದೇ ಕ್ಷಣದಲ್ಲಾದರೂ ಸರಿ ತಾಲಿಬಾನ್ ಜತೆ ಯುದ್ಧಕ್ಕೆ ಸಿದ್ಧರಾಗಿದ್ದೇವೆ ಎಂದು ಅಫ್ಘಾನಿಸ್ತಾನದ ಪಂಜ್ಶೀರ್ ಪ್ರಾಂತ್ಯದ ತಾಲಿಬಾನ್ ವಿರೋಧಿ ಸಂಘಟನೆ ಪಾಫುಲರ್ ರೆಸಿಸ್ಟೆಂನ್ಸ್ ಫ್ರಂಟ್ನ ಕಮಾಂಡರ್ ಅಮೀರ್ ಅಕ್ಮಲ್ ಹೇಳಿದ್ದಾರೆ.
ಯಾವುದೇ ಗೇಟ್ ಆಗಿರಲಿ ನಾವು ತಾಲಿಬಾನ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದೇವೆ. ನಮ್ಮ ಪಾಫುಲರ್ ರೆಸಿಸ್ಟೆಂನ್ಸ್ ಫ್ರಂಟ್ನಲ್ಲಿ ಯುವಕರು, ಯೋಧರು ಮತ್ತು ಮಾಜಿ ಜಿಹಾದಿ ಕಮಾಂಡರ್ಗಳಿದ್ದಾರೆ. ನಾವು ಆಕ್ರಮಣ ನೀತಿಗೆ ವಿರುದ್ಧವಾಗಿದ್ದೇವೆ. ನಮಗೆಲ್ಲ ಸಮಗ್ರ ಮತ್ತು ಸ್ವೀಕಾರಾರ್ಹ ವ್ಯವಸ್ಥೆ ಬೇಕಾಗಿದೆ. ಯುದ್ಧ ಮತ್ತು ಮಿಲಿಟರಿಗೆ ಸಂಬಂಧಿಸಿದ ಎಲ್ಲ ಸೌಲಭ್ಯವನ್ನು ನಾವು ಹೊಂದಿದ್ದು, ಯುದ್ಧಕ್ಕೂ ಅಥವಾ ಶಾಂತಿಗೂ ಸಿದ್ಧರಾಗಿದ್ದೇವೆಂದು ಅಮೀರ್ ಅಕ್ಮಲ್ ತಿಳಿಸಿದ್ದಾರೆ.
ಪ್ರಬಲವಾದ ಹಿಂದುಕುಶ ಪರ್ವತಗಳ ನಡುವೆ ಇರುವ ಪಂಜಶೀರ್ ಕಣಿವೆಯ ಭೂಪ್ರದೇಶವು ವಾಸ್ತವಿಕವಾಗಿ ಒಂದು ಪ್ರಬಲ ಕೋಟೆಯಾಗಿದೆ. ಎತ್ತರದ ಬೆಟ್ಟಗಳು, ಕಡಿದಾದ ಕಣಿವೆಗಳು ಮತ್ತು ಅಲ್ಲಿರುವ ನದಿಗಳಿಂದ ಪಂಜ್ಶೀರ್ಗೆ ಸಹಜವಾಗಿಯೇ ಪ್ರಾಕೃತಿಕ ರಕ್ಷಣೆಯು ಸಿಕ್ಕಿದೆ.
ಪಂಜ್ಶೀರ್ ಕಣಿವೆಗೆ ಹೋಗುವ ಎಲ್ಲಾ ರಸ್ತೆಗಳು ದೇಶಭಕ್ತ ತಾಜಿಕ್ ಹೋರಾಟಗಾರರಿಂದ ಪ್ರಾಬಲ್ಯವನ್ನು ಪಡೆದಿದೆ. 1980ರ ದಶಕದಲ್ಲಿ ಸೋವಿಯತ್ ಮತ್ತು 1996 ಮತ್ತು 2001ರ ನಡುವೆ ತಾಲಿಬಾನಿಗಳ ವಿರುದ್ಧ ಯಶಸ್ವಿಯಾಗಿ ನಿಂತ ಉತ್ತರ ಮೈತ್ರಿ ಕಮಾಂಡರ್ ಅಹ್ಮದ್ ಶಾ ಮಸೂದ್ ಅವರ ದಂತಕಥೆಯನ್ನು ಓದಿ ಬೆಳೆದಿದ್ದು, ತಾಲಿಬಾನಿಗಳ ವಿರುದ್ಧ ಯಾವಾಗಲೂ ಎದೆಯೊಡ್ಡಿ ನಿಲ್ಲುತ್ತಾರೆ.
ತಾಜಿಕ್ ಬೆಂಬಲಿತ ಹೋರಾಟಗಾರರು ಪಾಕಿಸ್ತಾನ ಬೆಂಬಲಿತ ತಾಲಿಬಾನ್ಗೆ ಯಾವುದೇ ಕಾರಣಕ್ಕೂ ಶರಣಾಗಲು ಇಚ್ಛಿಸುವುದಿಲ್ಲ. ಇದರೊಂದಿಗೆ ಅನೇಕ ಆಫ್ಘಾನ್ ರಾಷ್ಟ್ರೀಯ ಸೇನಾ ಯೋಧರು ಕೂಡ ಪಂಜ್ಶಿರ್ ತಲುಪಿದ್ದು, ಪಾಫುಲರ್ ರೆಸಿಸ್ಟೆಂನ್ಸ್ ಫ್ರಂಟ್ ಜತೆ ಸೇರಿಕೊಂಡಿದ್ದಾರೆ.
ಸ್ಥಳೀಯ ಹೋರಾಟಗಾರರು, ಆಫ್ಘಾನ್ ಸೇನಾ ಪಡೆಯಿಂದ ವಿಸರ್ಜಿಸಿದ ಸಿಬ್ಬಂದಿ ಸೇರಿದಂತೆ ಸುಮಾರು 9000 ಹೋರಾಟಗಾರರು ಪಂಜ್ಶೀರ್ನಲ್ಲಿ ಬೀಡುಬಿಟ್ಟಿದ್ದಾರೆ. ಅಹ್ಮದ್ ಮಸೂದ್ ಮತ್ತು ಅಮರುಲ್ಲಾ ಸಲೇಹ್ ನೇತೃತ್ವದಲ್ಲಿ ಪಂಜಶೀರ್ ಕಣಿವೆಯಲ್ಲಿ ಬೀಡುಬಿಟ್ಟಿದ್ದು, ತಾಲಿಬಾನ್ ಉಗ್ರರಿಗೆ ತಕ್ಕ ಉತ್ತರ ನೀಡಲು ತಯಾರಾಗಿದ್ದಾರೆ.
ಆಫ್ಘಾನ್ ಯೋಧನಾಗಿ ನಾವು ನಮ್ಮ ಗುರಿಯನ್ನು ತಲುಪಲು ಆಗಲಿಲ್ಲ. ಇದೀಗ ಪಾಫುಲರ್ ರೆಸಿಸ್ಟೆಂನ್ಸ್ ಫ್ರಂಟ್ ಜತೆ ಕೈಜೋಡಿಸಿ ನಮ್ಮ ತಾಯ್ನಾಡನ್ನು ರಕ್ಷಿಸಲು ಹೋರಾಡಲು ಸಿದ್ಧನಾಗಿದ್ದೇನೆ ಎಂದು ಆಫ್ಘಾನ್ ಸೇನೆಯ ಯೋಧರೊಬ್ಬರು ಧೈರ್ಯದ ಮಾತುಗಳನ್ನಾಡಿದ್ದಾರೆ.
ತಾಲಿಬಾನ್ ಪಂಜ್ಶಿರ್ನ ಒಂದು ಭಾಗವನ್ನು ಆಕ್ರಮಿಸಿದೆ ಎಂಬ ವರದಿಗಳನ್ನು ಅಫ್ಘಾನಿಸ್ತಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ನಿರಾಕರಿಸಿದ್ದಾರೆ. ಅಲ್ಲದೆ, ತಾಲಿಬಾನಿಗಳು ಸಂಧಾನದ ಮಾತುಕತೆಗೆ ಮುಂದಾಗಿದ್ದಾರೆಂದು ತಿಳಿಸಿದ್ದಾರೆ. ಆದರೆ, ಪಾಫುಲರ್ ರೆಸಿಸ್ಟೆಂನ್ಸ್ ಫ್ರಂಟ್ ಆಫ್ಘನ್ನರ ಹಕ್ಕುಗಳನ್ನು ರಕ್ಷಿಸಬೇಕೆಂದು ಬಯಸುತ್ತದೆ ಮತ್ತು ಅಫ್ಘಾನಿಸ್ತಾನದ ತಾಲಿಬಾನೀಕರಣವನ್ನು ತಪ್ಪಿಸುತ್ತದೆ ಎಂದು ಹೇಳುವ ಮೂಲಕ ಸಂಧಾನ ಇಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ. (ಏಜೆನ್ಸೀಸ್)
ಇದೇ ಮೊದಲ ಬಾರಿಗೆ ಮೈಸೂರಲ್ಲಿ ಬಿಜೆಪಿ ದರ್ಬಾರ್! ಮೇಯರ್ ಆಗಿ ಸುನಂದಾ ಪಾಲನೇತ್ರ ಆಯ್ಕೆ
ಹಾಸ್ಟೆಲ್ ಕೋಣೆಯಲ್ಲೇ ನೇಣಿಗೆ ಶರಣಾದ ಎಂಟೆಕ್ ವಿದ್ಯಾರ್ಥಿನಿ: ಡೆತ್ನೋಟ್ನಲ್ಲಿತ್ತು ನೋವಿನ ಮಾತು