ನವದೆಹಲಿ: ಐಪಿಎಲ್ ಟೂರ್ನಿಯ ಮಹತ್ವದ ಘಟ್ಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು ಸೋಲಿಗೆ ಶರಣಾಯಿತು. ಇದರ ಲಾಭವನ್ನು ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೇರಿದೆ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ ಡೆಲ್ಲಿ ತಂಡ ಪಂದ್ಯವನ್ನು ಕೈಚೆಲ್ಲಿದೆ ಎಂಬ ಚರ್ಚೆ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ. ಅದರಲ್ಲೂ ನಿರ್ಣಾಯಕ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಆಟಗಾರ ಟಿಮ್ ಡೇವಿಡ್ ಔಟಾಗಿದ್ದ ಸಂದರ್ಭದಲ್ಲಿ ಡೆಲ್ಲಿ ನಾಯಕ ರಿಷಬ್ ಪಂತ್ ಡಿಆರ್ಎಸ್ ಮನವಿ ಮಾಡದೇ ಇದ್ದದ್ದು ಸೋಲಿಗೆ ಪ್ರಮುಖ ಕಾರಣವಾಯಿತು ಎನ್ನಲಾಗುತ್ತಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಡೆಲ್ಲಿ ತಂಡ ವೇಗಿ ಜಸ್ಪ್ರೀತ್ ಬುಮ್ರಾ (25ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ನಡುವೆಯೂ 7 ವಿಕೆಟ್ಗೆ 159 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮುಂಬೈ 19.1 ಓವರ್ಗಳಲ್ಲಿ 5 ವಿಕೆಟ್ಗೆ 160 ರನ್ ಗಳಿಸಿ ಡೆಲ್ಲಿ ತಂಡವನ್ನು ಟೂರ್ನಿಯಿಂದ ಹೊರದಬ್ಬಿತು.
ಪ್ಲೇಆಫ್ ಹಂತಕ್ಕೇರಲು ಡೆಲ್ಲಿ ತಂಡಕ್ಕೆ ಒಳ್ಳೆಯ ಅವಕಾಶ ಇತ್ತು. ಆದರೆ, ದುರಾದೃಷ್ಟವಶಾತ್ ಅವಕಾಶವನ್ನು ಮುಂಬೈ ಇಂಡಿಯನ್ಸ್ ಕಸಿದುಕೊಂಡರು. ಇತ್ತ ಮುಂಬೈ ಗೆಲುವಿಗೆ ಪ್ರಾರ್ಥಿಸುತ್ತಿದ್ದ ಆರ್ಸಿಬಿ ತಂಡಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿತು. ಡೆಲ್ಲಿ ಸೋಲಿನಿಂದ ಪ್ಲೇಆಫ್ ಹಂತಕ್ಕೇರಿರುವ ಆರ್ಸಿಬಿ ಮೇ 25ರಂದು ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೇಂಟ್ಸ್ ತಂಡವನ್ನು ಎದುರಿಸಲಿದೆ.
ಟಿಮ್ ಡೇವಿಡ್ ಕೀಪರ್ ಕ್ಯಾಚ್ ಆಗಿದ್ದ ಸಂದರ್ಭದಲ್ಲಿ ಡಿಆರ್ಎಸ್ ಯಾಕೆ ತೆಗೆದುಕೊಳ್ಳಲಿಲ್ಲ ಎಂಬ ಪ್ರಶ್ನೆಗೆ ಪಂದ್ಯದ ಬಳಿಕ ಉತ್ತರ ನೀಡಿದ ರಿಷಬ್ ಪಂತ್, ಏನೋ ನಡೆದಿದೆ ಅಂತಾ ನಾನು ಕೂಡ ಭಾವಿಸಿದೆ. ಆದರೆ, ನನ್ನ ಸುತ್ತಲೂ ನಿಂತಿದ್ದ ಯಾರಿಗೂ ಅದರ ಬಗ್ಗೆ ಮನವರಿಕೆಯಾಗಲಿಲ್ಲ. ಹೀಗಾಗಿ ನಾನು ಡಿಆರ್ಎಸ್ ಮೊರೆ ಹೋಗಲಿಲ್ಲ ಎಂದು ಹೇಳಿದ್ದಾರೆ.
ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಪಂತ್, ಬಹುತೇಕ ನಾವು ಅಗ್ರಸ್ಥಾನದಲ್ಲಿದ್ದೆವು. ಕೆಲವು ಸಂದರ್ಭಗಳಲ್ಲಿ ನಾವು ಮೇಲಿರುವಾಗ ಆಟವನ್ನು ನಮ್ಮ ಹಿಡಿತದಿಂದ ದೂರ ಸರಿಯಲು ನಮಗೆ ಗೊತ್ತಿಲ್ಲದಂತೆ ಬಿಟ್ಟು ಬಿಡುತ್ತೇವೆ. ಈ ಋತುವಿನ ಉದ್ದಕ್ಕೂ ನಾವು ಮಾಡಿದ್ದು ಅದನ್ನೇ. ಈ ಪಂದ್ಯವನ್ನು ಗೆಲ್ಲುವಷ್ಟು ನಾವು ಉತ್ತಮವಾಗಿಲ್ಲ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಇಲ್ಲಿ ಒತ್ತಡ ಅಂತಾ ಏನಿಲ್ಲ. ನಾವು ಉತ್ತಮ ಕಾರ್ಯನಿರ್ವಹಣೆ ಮತ್ತು ಯೋಜನೆಯನ್ನು ಮಾಡಬಹುದಿತ್ತು. ಆದರೆ, ಅದನ್ನು ಮಾಡಲಿಲ್ಲ. ನಮ್ಮ ತಪ್ಪುಗಳಿಂದ ಕಲಿತು, ಮುಂದಿನ ವರ್ಷ ಬಲಶಾಲಿಯಾಗಿ ಹಿಂತಿರುಗುತ್ತೇವೆ ಎಂದು ಹೇಳಿದರು. (ಏಜೆನ್ಸೀಸ್)
ಆರ್ಸಿಬಿಗೆ ಪ್ಲೇಆಫ್ ಲಕ್; ಡೆಲ್ಲಿ ತಂಡವನ್ನು ಹೊರದಬ್ಬಿದ ಮುಂಬೈ ಇಂಡಿಯನ್ಸ್
ನಟ ಅಲ್ಲು ಅರ್ಜುನ್ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ