ಭೋಪಾಲ್: ವ್ಯಕ್ತಿಯೊಬ್ಬನ್ನು ಕಳ್ಳ ಅಂದುಕೊಂಡ ಗುಂಪೊಂದು ಆತನನ್ನು ಬರ್ಬರವಾಗಿ ಥಳಿಸಿದಲ್ಲದೆ, ಲಾರಿ ಹಿಂಬದಿಗೆ ಕಟ್ಟಿ ದರದರನೇ ಎಳೆಸುವ ಮೂಲಕ ಆತನ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ನಾವು ಕಳ್ಳನೊಬ್ಬನನ್ನು ಹಿಡಿದಿದ್ದೇವೆ ಎಂದು ಕೆಲವು ಮಂದಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡುತ್ತಾರೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ತಲುಪುತ್ತಾರೆ. ಬಳಿಕ ನಿತ್ರಾಣ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಆತನನ್ನು ನಿಮುಚ್ ಜಿಲ್ಲಾಸ್ಪತ್ರಗೆ ಶಿಫಾರಸು ಮಾಡಲಾಗುತ್ತದೆ. ಆದರೆ, ಆತ ಸಾವಿಗೀಡಾಗಿರುವುದಾಗಿ ನಿಮುಚ್ ಆಸ್ಪತ್ರೆಯ ವೈದ್ಯರು ಘೋಷಿಸುತ್ತಾರೆ.
ನಿಮುಚ್ ಜಿಲ್ಲೆಯ ಜೆತಿಯಾ ಗ್ರಾಮದಲ್ಲಿ ಗುರುವಾದ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೃತ ವ್ಯಕ್ತಿ ತನ್ನನ್ನು ಬಿಟ್ಟು ಬಿಡುವಂತೆ ಸಾಕಷ್ಟು ಗೋಗರೆದರೂ ಆ ಗುಂಪು ಆತನನ್ನು ಬಿಡದೆ ಚೆನ್ನಾಗಿ ಥಳಿಸಿದೆ. ಮೃತ ವ್ಯಕ್ತಿಯನ್ನು ಕನ್ಹಾ ಅಲಿಯಾಸ್ ಕನ್ಹಿಯಾ ಭೀಲ್ ಎಂದು ಗುರುತಿಸಲಾಗಿದೆ. ಈತ ಬಾನಾಡಾ ಗ್ರಾಮದ ನಿವಾಸಿ.
ಈ ಪ್ರಕರಣದಲ್ಲಿ 8 ಮಂದಿಯನ್ನು ಗುರುತಿಸಲಾಗಿದೆ. ಅದರಲ್ಲಿ ಐದು ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದವರನ್ನು ಆದಷ್ಟು ಬೇಗ ಬಂಧಿಸಲಾಗುವುದು ಎಂದು ನೀಮುಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ವರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ವೈರಲ್ ವಿಡಿಯೋ ನೆರವಾಯಿತು ಎಂದಿದ್ದಾರೆ.
ಬಂಧಿತರ ಮೇಲೆ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ( ದೌರ್ಜನ್ಯ ತಡೆಯುವಿಕೆ) ಕಾಯ್ದೆ ಅಡಿಯಲ್ಲಿ ಕೊಲೆ ಪ್ರಕರಣ ಮತ್ತು ಭಾರತೀಯ ದಂಡಸಂಹಿತೆಯ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಸೆಪ್ಟೆಂಬರ್ 1 ರಿಂದ 5… ಆಫ್ಘಾನ್ ಬೆಳವಣಿಗೆ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ..!