ಕಾಬುಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ತ ಚರಿತ್ರೆ ಆರಂಭವಾಗಿದೆ. ಅಮೆರಿಕ ಸೇನಾ ಹಿಂತೆಗೆತ ಬಳಿಕ ಆಫ್ಘಾನ್ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್ ಬಂಡುಕೋರರು ರಕ್ತದೋಕುಳಿ ಬರೆದು ಇಡೀ ಆಫ್ಘಾನ್ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಅಫ್ಘಾನಿಸ್ತಾನದಲ್ಲಿ ದಿನೇದಿನೆ ಹೆಚ್ಚುತ್ತಿರುವ ಮಾನವೀಯ ಬಿಕ್ಕಟ್ಟಿನ ನಡುವೆ ಭಾರತ ಆಫ್ಘಾನ್ನ ರಾಯಭಾರ ಕಚೇರಿಯಲ್ಲಿರುವ ತನ್ನ ಸಿಬ್ಬಂದಿಯನ್ನು ವಾಯುಪಡೆಯ ವಿಶೇಷ ವಿಮಾನದಿಂದ ಆಫ್ಘಾನ್ ರಾಜಧಾನಿ ಕಾಬುಲ್ನಿಂದ ವಾಪಸ್ ತವರಿಗೆ ಇಂದು ಕರೆಸಿಕೊಂಡಿದೆ. ಭಾರತೀಯ ಸ್ಥಳಾಂತರ ಅಷ್ಟು ಸುಲಭವಾಗಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಭಾರತೀಯ ಸುರಕ್ಷಿತ ಸ್ಥಳಾಂತರಕ್ಕಾಗಿ ಆಗಸ್ಟ್ 15 ರಂದು ವಾಯುಸೇನೆಯ ಎರಡು ವಿಮಾನಗಳು ಕಾಬುಲ್ ಕಡೆಗೆ ಹಾರಿದವು. ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯ ಸಹ ಈ ಮಿಷನ್ಗೆ ಬಲ ನೀಡಿದರು. ಕಾಬುಲ್ನ ರಾಯಭಾರ ಕಚೇರಿಯಲ್ಲಿ ಸಿಲುಕ್ಕಿದ್ದ ಭಾರತೀಯರ ರಕ್ಷಣೆ ತುಂಬಾ ಕಷ್ಟಕರವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 15-16 ರ ಮಧ್ಯರಾತ್ರಿಯ ಭದ್ರತಾ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿತು ಮತ್ತು ಆ ನಂತರ ಯಾವುದೇ ಸ್ಥಳಾಂತರಗಳು ಸಾಧ್ಯವಾಗಲಿಲ್ಲ ಎಂಬ ಮಾಹಿತಿ ಇದೆ. ಅಲ್ಲದೆ, ಭಾರತದ ರಾಯಭಾರ ಕಚೇರಿ ತಾಲಿಬಾನ್ ಕಣ್ಗಾವಲಿನಲ್ಲಿತ್ತು. ಹೆಚ್ಚಿನ ಭದ್ರತೆ ಹೊಂದಿರುವ ಹಸಿರು ವಲಯ, ರಾಯಭಾರ ಕಚೇರಿಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳನ್ನು ಹೊಂದಿರುವ ಜಿಲ್ಲೆಯಲ್ಲಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಆಫ್ಘಾನ್ನರು ಭಾರತಕ್ಕೆ ಪ್ರವಾಸ ಬೆಳೆಸಲು ವೀಸಾ ಸೌಲಭ್ಯ ಒದಗಿಸಿಕೊಡುವ ಶಾಹಿರ್ ವೀಸಾ ಏಜೆನ್ಸಿ ಮೇಲೆಯೂ ತಾಲಿಬಾನ್ ದಾಳಿ ಮಾಡಿದೆ. ನಿನ್ನೆ ಐಎಎಫ್ ವಿಮಾನದಲ್ಲಿ ಸ್ಥಳಾಂತರಿಸಲಾದ 45 ಭಾರತೀಯ ಸಿಬ್ಬಂದಿಯ ಮೊದಲ ತಂಡವನ್ನು ಆರಂಭದಲ್ಲಿ ತಾಲಿಬಾನ್ ಸೇನಾಪಡೆಗಳು ವಿಮಾನ ನಿಲ್ದಾಣಕ್ಕೆ ಹೋಗುವಾಗ ತಡೆದವು ಎಂದು ಮೂಲಗಳು ತಿಳಿಸಿವೆ. ಕೆಲ ಭಾರತೀಯ ಸಿಬ್ಬಂದಿಗೆ ಸಂಬಂಧಿಸಿದ ವೈಯಕ್ತಿಕ ವಸ್ತುಗಳನ್ನು ತಾಲಿಬಾನಿಗಳು ಬಲವಂತವಾಗಿ ಕಸಿದುಕೊಂಡಿದ್ದಾರೆಂಬ ಮಾಹಿತಿ ಇದೆ.
ಸಾಕಷ್ಟು ಸವಾಲುಗಳ ನಡುವೆ ಮೊದಲ ಸೇನಾ ವಿಮಾನ ನಿನ್ನೆ ಕಾಬುಲ್ನಿಂದ ಟೇಕಾಫ್ ಆಗಿದ್ದೆ ಅಚ್ಚರಿಯ ಸಂಗತಿಯಾಗಿದೆ. ಹತಾಶೆಗೆ ಒಳಗಾದ ಅಥವಾ ಜೀವ ಭಯದಿಂದ ಅನೇಕ ಅಫ್ಘಾನ್ನರು ದೇಶ ತೊರೆಯುವುದಕ್ಕಾಗಿ ವಿಮಾನ ನಿಲ್ದಾಣಕ್ಕೆ ತಂಡೋಪತಂಡವಾಗಿ ಬರುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಅದೆಲ್ಲವನ್ನು ದಾಟಿ ಭಾರತೀಯರನ್ನು ಸ್ಥಳಾಂತರಿಸಿರುವುದು ನಮ್ಮ ಸೇನಾ ಪಡೆಗಳ ಸಾಮರ್ಥ್ಯ ಪ್ರದರ್ಶಿಸುತ್ತದೆ.
#WATCH | Indian Air Force C-17 aircraft that took off from Kabul, Afghanistan with Indian officials, lands in Jamnagar, Gujarat. pic.twitter.com/1w3HFYef6b
— ANI (@ANI) August 17, 2021
ವಿಮಾನ ನಿಲ್ದಾಣದ ಮಾರ್ಗವನ್ನು ಮುಚ್ಚಿದ್ದರಿಂದ ಮತ್ತು ವಿಮಾನ ನಿಲ್ದಾಣದಲ್ಲಿ ಜನಸಮೂಹವಿತ್ತು ಇದ್ದಿದ್ದರಿಂದ ನಿನ್ನೆ ಭಾರತೀಯ ರಾಜತಾಂತ್ರಿಕ ಮತ್ತು ಭದ್ರತಾ ದಳದ ಉಳಿದ ಸದಸ್ಯರನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ನಡುವಿನ ರಾತ್ರಿಯ ಸಂಭಾಷಣೆಯು ಇಂದು ಬೆಳಿಗ್ಗೆ ಭಾರತೀಯ ಸಿಬ್ಬಂದಿಯನ್ನು ಕಾಬೂಲ್ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಸಹಾಯ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ.
ಅಫ್ಘಾನ್ನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಸೇರಿದಂತೆ, ಉಳಿದ 120ಕ್ಕೂ ಹೆಚ್ಚು ಭಾರತೀಯ ಸಿಬ್ಬಂದಿ ಎರಡನೇ ಐಎಎಫ್ ಸಿ -17 ಅನ್ನು ಏರಿ, ಇಂದು ಬೆಳಿಗ್ಗೆ ಸುರಕ್ಷಿತವಾಗಿ ಆಫ್ಘಾನ್ ವಾಯುಪ್ರದೇಶದಿಂದ ಹೊರಟು ಗುಜರಾತ್ನ ಜಾಮ್ ನಗರಕ್ಕೆ ಬಂದಿಳಿದರು. ಸಾಮಾನ್ಯವಲ್ಲದ ಪರಿಸ್ಥಿತಿಗಳಲ್ಲಿ ನಮ್ಮನ್ನು ಹೊರಗೆ ಕರೆದೊಯ್ದ ಭಾರತೀಯ ವಾಯುಪಡೆಗೆ ಧನ್ಯವಾದಗಳು ಎಂದು ರುದ್ರೇಂದ್ರ ಟಂಡನ್ ಅವರು ಜಾಮ್ನಗರಕ್ಕೆ ಬಂದಿಳಿದ ನಂತರ ಹೇಳಿದರು. (ಏಜೆನ್ಸೀಸ್)
ಕೆಲವೇ ದಿನಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ತೆಕ್ಕೆಗೆ ಹಾಕಿಕೊಂಡಿದ್ಹೇಗೆ!?