More

    ಅಗ್ನಿಪಥ ಯೋಜನೆಗೆ ಯುವಕರ ಆಕ್ರೋಶ: ಬಿಹಾರದ ಬಳಿಕ ವಿವಿಧ ರಾಜ್ಯಗಳಿಗೂ ಹಬ್ಬಿದ ಪ್ರತಿಭಟನೆಯ ಕಾವು

    ಪಟನಾ: ವಾಯು ಪಡೆ, ನೌಕಾ ಪಡೆ ಹಾಗೂ ಭೂಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಅಗ್ನಿಪಥ’ ಯೋಜನೆಯನ್ನು ವಿರೋಧಿಸಿ ಬಿಹಾರದಲ್ಲಿ ಸೇನಾ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

    ಇಂದು ಬೆಳಗ್ಗೆ ಉದ್ರಿಕ್ತ ಪ್ರತಿಭಟನಾಕಾರರ ಗುಂಪೊಂದು ಹಾಜಿಪುರ-ಬರೌನಿ ರೈಲು ಮಾರ್ಗದ ಮೊಹಿಯುದ್ದಿನಗರ ನಿಲ್ದಾಣದಲ್ಲಿ ಪ್ಯಾಸೆಂಜರ್​ ರೈಲಿನ ಎರಡು ಕೋಚ್​ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ನಿಪಥ್​ ಯೋಜನೆ ವಿರುದ್ಧ ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಿಜೆಪಿ ಆಡಳಿತವಿರುವ ಹರಿಯಾಣ ಮತ್ತು ಮಧ್ಯಪ್ರದೇಶಕ್ಕೂ ಪ್ರತಿಭಟನೆ ವ್ಯಾಪಿಸಿದೆ.

    ಬಿಹಾರದ ಆರಾದಿಂದ ಹರಿಯಾಣದ ಪಲ್ವಾಲ್‌ವರೆಗೆ, ಉತ್ತರ ಪ್ರದೇಶದ ಆಗ್ರಾದಿಂದ ಗ್ವಾಲಿಯರ್ ಮತ್ತು ಮಧ್ಯಪ್ರದೇಶದ ಬಿಜೆಪಿ ಆಡಳಿತದ ಇಂದೋರ್‌ವರೆಗೆ, ನೂರಾರು ಯುವ ಸೇನಾ ಆಕಾಂಕ್ಷಿಗಳು ಬೀದಿಗಿಳಿದು ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡುವ ಮೂಲಕ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂದು ಬೆಳಗ್ಗೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರೈಲು ನಿಲ್ದಾಣಕ್ಕೆ ನುಗ್ಗಿದ ಗುಂಪೊಂದು ರೈಲನ್ನು ಧ್ವಂಸ ಮಾಡಿತು ಮತ್ತು ರೈಲ್ವೆ ನಿಲ್ದಾಣದ ಆಸ್ತಿಯನ್ನು ಹಾನಿಗೊಳಿಸಿತು. ಪೊಲೀಸರು ಉದ್ರಿಕ್ತ ಗುಂಪನ್ನು ಚದುರಿಸಲು ಬಲಪ್ರಯೋಗ ಮಾಡಿದರು.

    ಮೋದಿ ನೇತೃತ್ವದ ಆರ್ಥಿಕ ವ್ಯವಹಾರ ಕುರಿತ ಸಂಪುಟ ಉಪಸಮಿತಿ ಅಗ್ನಿಪಥ ಯೋಜನೆಗೆ ಅನುಮೋದನೆ ನೀಡಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನ 46 ಸಾವಿರ ಜನರನ್ನು 4 ವರ್ಷಗಳ ಅಲ್ಪಾವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷದಲ್ಲಿ ಆರು ತಿಂಗಳ ತರಬೇತಿ ಅವಧಿಯೂ ಸೇರಿದೆ. ನೇಮಕಾತಿ ಪ್ರಕ್ರಿಯು ಇಂದಿನಿಂದ ಮೂರು ತಿಂಗಳಲ್ಲಿ ಮುಗಿಯಲಿದ್ದು, 2023ರ ಜುಲೈನಲ್ಲಿ ಮೊದಲ ಬ್ಯಾಚ್ ಸೇವೆಗೆ ಸಿದ್ಧವಾಗಲಿದೆ ಎಂದು ಸಿಂಗ್ ಹೇಳಿದರು. ಅರ್ಹತೆ ಆಧಾರದಲ್ಲಿ ಪ್ರತಿ ಬ್ಯಾಚ್​ನಲ್ಲಿ ಶೇ.25ರಷ್ಟು ಯೋಧರಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶ ದೊರೆಯಲಿದೆ ಮತ್ತು ಇಂಥವರು ಅಧಿಕಾರೇತರ ಶ್ರೇಣಿಯಲ್ಲಿ 15 ವರ್ಷ ಸೇವೆ ಸಲ್ಲಿಸಬಹುದು ಎಂದರು. ಪಿಂಚಣಿಯಾಗಲಿ ಅಥವಾ ಗ್ರಾಚ್ಯುಟಿ ಹಣವನ್ನು ಸರ್ಕಾರ ನೀಡುವುದಿಲ್ಲ.

    ಈ ನೇಮಕಾತಿಯಿಂದ ಸೇನೆಯ ವಾರ್ಷಿಕ ವೆಚ್ಚದಲ್ಲಿ ದೊಡ್ಡ ಉಳಿತಾಯ ಆಗಲಿದೆ. ಸೇನೆಗೆ ಸರ್ಕಾರ ನೀಡುವ ಬಜೆಟ್​ನಲ್ಲಿ ಅರ್ಧದಷ್ಟು ಭಾಗ ವೇತನ ಮತ್ತು ಪಿಂಚಣಿಗೆ ಖರ್ಚಾಗುತ್ತದೆ. ‘ಅಗ್ನಿಪಥ’ ಯೋಜನೆಯಿಂದ ದೊಡ್ಡ ಮಟ್ಟದ ಉಳಿತಾಯ ಸಾಧ್ಯವಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಆದರೆ, ಈ ಯೋಜನೆಯು ಬಿಹಾರದ ಸೇನಾ ಆಕಾಂಕ್ಷಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಯೋಜನೆ ಕೈಬಿಡಬೇಕೆಂದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಕೇಂದ್ರದ ಅಗ್ನಿಪಥ ಯೋಜನೆ ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನೆ: ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ

    ಅಗ್ನಿಪಥಕ್ಕೆ ಅಗ್ನಿಪರೀಕ್ಷೆ; ಯೋಜನೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ

    ವಿಮಾನ ಪ್ರಯಾಣ ಇನ್ನಷ್ಟು ದುಬಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts