ಚೆನ್ನೈ: ನಟ ಹಾಗೂ ಪತ್ರಕರ್ತ ಬೈಲ್ವಾನ್ ರಂಗನಾಥನ್ ಕಳೆದ ಕೆಲ ವರ್ಷಗಳಿಂದ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನಟ ಹಾಗೂ ನಟಿಯರನ್ನು ಗುರಿಯಾಗಿರಿಸಿಕೊಂಡು ಅವರ ವಿರುದ್ಧ ಗಾಸಿಪ್ಗಳನ್ನು ಸೃಷ್ಟಿ ಮಾಡುವ ಮೂಲಕ ಭಾರೀ ಸುದ್ದಿಯಾಗುತ್ತಿರುವುದಲ್ಲದೆ, ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅನೇಕ ಕಲಾವಿದರು ರಂಗನಾಥನ್ ವಿರುದ್ಧ ತಮ್ಮ ಧ್ವನಿ ಕೂಡ ಎತ್ತಿದ್ದಾರೆ.
ಕೆಲ ತಿಂಗಳ ಹಿಂದೆ ನಟಿ ರಾಧಿಕಾ ಶರತ್ಕುಮಾರ್ ಅವರು ಬೆಸಂತ್ ನಗರದ ಕಡಲ ತೀರದಲ್ಲಿ ವಾಕಿಂಗ್ ಮಾಡುವಾಗ ಅವಹೇಳಕಾರಿ ಕಾಮೆಂಟ್ ಮಾಡಿದ ರಂಗನಾಥನ್ಗೆ ಸ್ಥಳದಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಮತ್ತೊಬ್ಬ ನಟಿ ನಡು ರಸ್ತೆಯಲ್ಲೇ ರಂಗನಾಥನ್ಗೆ ಬೆವರಿಳಿಸಿದ್ದಾರೆ.
ಕಳೆದ ಗುರುವಾರ ನಟಿ ರೇಖಾ ನಾಯರ್ ಮತ್ತು ರಂಗನಾಥನ್ ವಾಕಿಂಗ್ ಮಾಡುವಾಗ ರಸ್ತೆಯಲ್ಲಿ ಮುಖಾಮುಖಿಯಾದರು. ತಮ್ಮ ಕುರಿತಾದ ಹಿಂದಿನ ಯೂಟ್ಯೂಬ್ ವಿಡಿಯೋವೊಂದರಲ್ಲಿ ಅಶ್ಲೀಲವಾಗಿ ಮಾತನಾಡಿದ್ದನ್ನು ಪ್ರಶ್ನಿಸಿ, ರಂಗನಾಥನ್ರನ್ನು ತರಾಟೆಗೆ ತೆಗೆದುಕೊಂಡರು. ನನ್ನ ವಿರುದ್ಧ ಕೆಟ್ಟದಾಗಿ ಮಾತನಾಡುವುದಕ್ಕೆ ನಾನೇನು ನಿನ್ನ ಹೆಂಡತಿಯೇ? ಅಥವಾ ಮಗಳಾ? ಎಂದು ಪ್ರಶ್ನೆ ಮಾಡಿದರು.
ವಿವರಣೆಗೆ ಬರುವುದಾದರೆ, ರಂಗನಾಥನ್ ತನ್ನ ‘ಥಿರೈ ಕೂತು’ ಯೂಟ್ಯೂಬ್ ಚಾನೆಲ್ನಲ್ಲಿ ರೇಖಾ ನಾಯರ್ ಬಗ್ಗೆ ಮತ್ತು ಇರವಿನ್ ನಿಹಾಲ್ ಸಿನಿಮಾದಲ್ಲಿ ಆಕೆಯ ಪಾತ್ರದ ಬಗ್ಗೆ 10 ನಿಮಿಷದ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಪೂನಮಲ್ಲೆ ಹೋಟೆಲ್ ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಚಿತ್ರಾ ಮತ್ತು ರೇಖಾ ನಡುವಿನ ಸಂಬಂಧದ ಬಗ್ಗೆಯೂ ರಂಗನಾಥನ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಇರವಿನ್ ನಿಹಾಲ್ ಸಿನಿಮಾದಲ್ಲಿ ರೇಖಾ ತಾಯಿಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ದೃಶ್ಯ ಒಂದರಲ್ಲಿ ರೇಖಾ ಅವರು ಯುವ ವಯಸ್ಸಿನಲ್ಲೇ ನಿಧನರಾಗುವ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಸಿನಿಮಾದಲ್ಲಿ ಅವರ ಮಗು ಅವರ ಎದೆಯಿಂದ ಹಾಲು ಕುಡಿಯುವುದು ಆ ದೃಶ್ಯದಲ್ಲಿದೆ. ಈ ಬಗ್ಗೆ ಮಾತನಾಡಿದ್ದ ರಂಗನಾಥನ್, ರೇಖಾ ಅವರು ಆ ದೃಶ್ಯಕ್ಕಾಗಿ ತನ್ನ ದೇಹದ ಮೇಲಿನ ಸಂಪೂರ್ಣ ಭಾಗವನ್ನು ತೋರಿಸಲು ಸಿದ್ಧರಾಗಿದ್ದರು ಎಂದಿದ್ದರು.
ಈ ವಿಡಿಯೋ ಬಗ್ಗೆ ರೇಖಾ ತೀವ್ರ ಅಸಮಾಧಾನ ಹೊಂದಿದ್ದರು. ರೇಖಾಗೆ ಗುರುವಾರ ಆಕಸ್ಮಿಕವಾಗಿ ರಂಗನಾಥನ್ ಅವರು ತಿರುವಣಮಯುರ್ ಬೀಚ್ನಲ್ಲಿ ಸಿಕ್ಕಿದ್ದಾರೆ. ಈ ವೇಳೆ ಕ್ಲಾಸ್ ತೆಗೆದುಕೊಂಡ ರೇಖಾ, ವಿಡಿಯೋ ಸಂಬಂಧ ಪ್ರಶ್ನೆಗಳನ್ನು ಕೇಳಿದ್ದಾರೆ. ತನ್ನನ್ನು ಪ್ರಶ್ನಿಸಲು ನೀವೇನು ನನ್ನ ಪತಿಯೇ ಅಥವಾ ತಂದೆಯೇ ಎಂದು ಪ್ರಶ್ನಿಸಿದ ರೇಖಾ, ತನ್ನ ಮತ್ತು ಚಿತ್ರಾ ನಡುವಿನ ಸಂಬಂಧದ ಬಗ್ಗೆ ಅನಗತ್ಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದು ಮುಂದುವರಿದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಈ ಬಗ್ಗೆ ಮಾತನಾಡಿರುವ ರೇಖಾ ನಾಯರ್ಮ, ನಾನು ಸಾಮಾನ್ಯವಾಗಿ ವಾರಾಂತ್ಯದಲ್ಲಿ ಮಾತ್ರ ಬೀಚ್ಗೆ ವಾಕಿಂಗ್ಗೆ ಹೋಗುತ್ತೇನೆ ಮತ್ತು ವಾರದ ದಿನದಂದು ಆಕಸ್ಮಿಕವಾಗಿ ಹೋದಾಗ ಅಲ್ಲಿ ರಂಗನಾಥನ್ನನ್ನು ನೋಡಿದೆ ಮತ್ತು ವೀಡಿಯೊದ ಬಗ್ಗೆ ಪ್ರಶ್ನೆ ಮಾಡಿದೆ. ಎಲ್ಲರೂ ನಿರ್ಲಕ್ಷಿಸಿ ದೂರ ಹೋಗಲು ಸಾಧ್ಯವಿಲ್ಲ. ಯಾರಾದರೂ ಸರಿ ಕೊಳೆಯನ್ನು ಸ್ವಚ್ಛಗೊಳಿಸಬೇಕು ಎಂದು ನಟಿ ಹೇಳಿದರು. ಆದರೆ, ತಾನು ನಟಿಯನ್ನು ಪೊಲೀಸ್ ಠಾಣೆಗೆ ಕರೆದೆ ಆದರೆ, ಆಕೆ ಭಯದಿಂದ ಸ್ಥಳದಿಂದ ತೆರಳಿದ್ದಾಳೆ ಎಂದು ರಂಗನಾಥನ್ ಹೇಳಿದ್ದಾರೆ. (ಏಜೆನ್ಸೀಸ್)
ಇಡಿ ಅಧಿಕಾರಿಗಳ ಮಹಾ ಬೇಟೆ: ಸಚಿವರ ಆಪ್ತಳ ಮನೆಯಲ್ಲಿ 20 ಕೋಟಿ ರೂ. ನಗದು ಪತ್ತೆ!
ಮತ್ತೆ ಗೂಡು ಸೇರಿದ ಕಾಣೆಯಾಗಿದ್ದ ಗಿಣಿ! ಕೊಟ್ಟ ಮಾತಂತೆ 85 ಸಾವಿರ ರೂ. ಬಹುಮಾನ ನೀಡಿದ ಕುಟುಂಬ