ಲಖನೌ: ಸಾಮಾನ್ಯವಾಗಿ ಭಕ್ತರು ಕೆಲ ದೇವರಿಗೆ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಆದರೆ, ಇಲ್ಲೊಬ್ಬ ಯುವ ಭಕ್ತೆ ತನ್ನ ಪ್ರಿಯವಾದ ದೇವರಿಗೆ ತನ್ನ ಜೀವವನ್ನೇ ತ್ಯಾಗ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಜನರನ್ನು ದಿಗ್ಭ್ರಮೆಗೊಳಿಸಿದೆ.
ಮೀರತ್ನ ಖರ್ಖೊಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಕುಡಿ ಗ್ರಾಮದ ಬಳಿಯ ಅರಣ್ಯದ ಪ್ರದೇಶದಲ್ಲಿ ಇರುವ ಮಹಾ ಭದ್ರಕಾಳಿ ದೇವಸ್ಥಾನಕ್ಕೆ ಯುವತಿ ತನ್ನನ್ನು ತಾನೇ ಬಲಿ ಕೊಟ್ಟುಕೊಂಡಿದ್ದಾರೆ. ಕಾಳಿ ಮಾತೆಯನ್ನು ತುಂಬಾ ನಂಬಿದ್ದ ಯುವತಿ ಒಂದು ದಿನವೂ ಪೂಜೆ ಮಾಡದೇ ಇರುತ್ತಿರಲಿಲ್ಲ. ಕಾಳಿ ಮಾತಾ ದೇವಸ್ಥಾನಕ್ಕೆ ಹೋಗುವುದನ್ನು ಸಹ ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ಇಲ್ಲಿಯವರೆಗೂ ಎಲ್ಲವೂ ಸರಿಯಿತ್ತು.
ಆದರೆ, ಯಾವಾಗ ತನ್ನನ್ನು ತಾನೇ ಕಾಳಿ ಮಾತೆಯ ಮಗಳು ಎಂದು ಯೋಚಿಸಲು ಶುರು ಮಾಡಿದಳೋ ಅಲ್ಲಿಂದಾಚೆಗೆ ಎಲ್ಲವೂ ಬದಲಾಗುತ್ತಾ ಸಾಗಿತು. ನಾನು ಮಹಾ ಭದ್ರಕಾಳಿಯ ಮಗಳು. ನನ್ನ ತಾಯಿಗೋಸ್ಕರ ನನ್ನ ಜೀವವನ್ನು ತ್ಯಾಗ ಮಾಡುತ್ತೇನೆ ಅಂದುಕೊಂಡು ಊರಿನ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಯುವತಿ ತೆರಳಿದ್ದಾಳೆ.
ಮೊದಲೇ ಅರಣ್ಯ ಪ್ರದೇಶವಾಗಿದ್ದರಿಂದ ಆ ಸಂದರ್ಭದಲ್ಲಿ ದೇವಸ್ಥಾನದ ಬಳಿ ಯಾರೂ ಇರಲಿಲ್ಲ. ಅಲ್ಲಿದ್ದ ಒಬ್ಬೇ ಒಬ್ಬ ಪೂಜಾರಿ ಮಾತ್ರ ಸಂಜೆ ಬಂದು ಪೂಜೆ ಮಾಡಿ ಮತ್ತೆ ಹಿಂತಿರುಗುತ್ತಿದ್ದ. ಸಾಕಷ್ಟು ದಿನಗಳಿಂದ ಪೂಜೆ ಮಾಡುತ್ತಿದ್ದ ಯುವತಿ ಕೊನೆಗೂ ತಾಯಿ ಮಹಾಕಾಳಿಗೆ ಜೀವ ತ್ಯಾಗ ಮಾಡಬೇಕೆಂದುಕೊಂಡು ಮೊದಲು ತನ್ನ ಕತ್ತನ್ನು ಸೀಳಿ ಮಾತೆಯ ವಿಗ್ರಹಕ್ಕೆ ಅರ್ಪಿಸಿದ್ದಾಳೆ. ಬಳಿಕ ಅತಿಯಾದ ರಕ್ತಸ್ರಾವ ಆಗುತ್ತಿದ್ದರೂ ದೇವಸ್ಥಾನದ ಗಂಟೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಎಂದಿನಂತೆ ಪೂಜೆ ಮಾಡಲು ಸಂಜೆ ಪೂಜಾರಿ ದೇವಸ್ಥಾನಕ್ಕೆ ಬಂದಿದ್ದಾರೆ. ಈ ವೇಳೆ ದೇವಸ್ಥಾನದ ಆವರಣದಲ್ಲಿ ಯುವತಿಯ ಶವ ನೇತಾಡುವುದನ್ನು ನೋಡಿ ಪೂಜಾರಿ ಶಾಕ್ ಆಗಿದ್ದಾರೆ. ಬಳಿಕ ಗ್ರಾಮಸ್ಥರು ಮತ್ತು ಪೊಲೀಸರಿಗೆ ಪೂಜಾರಿ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿತು. ಯುವತಿ ಮೌಢ್ಯಕ್ಕೆ ಕಟ್ಟುಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೂ ಆಕೆಯ ಸಾವಿನ ಕುರಿತು ಅನೇಕ ಅನುಮಾನಗಳು ಸಹ ಹುಟ್ಟಿಕೊಂಡಿವೆ.
ತಾನೇ ಕಾಳಿ ಮಾತೆಗೆ ತನ್ನ ಜೀವವನ್ನು ತ್ಯಾಗ ಮಾಡಿದ್ದಾಳೆಂದು ಗ್ರಾಮಸ್ಥರು ಯೋಚಿಸಿದರೆ, ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಆತ್ಮಹತ್ಯೆ ಹಾದಿ ಹಿಡಿದಿದ್ದಾಳೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ಆಕೆಗೆ ಅತಿಯಾದ ಭಕ್ತಿ ಇದ್ದದ್ದು ಮಾತ್ರ ಸತ್ಯ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)
VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ
ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್ಗೆ ಕನ್ನಡಿಗರ ಸಲಾಂ
ಹಾಟ್ ಫೋಟೋ ಹರಿಬಿಟ್ಟ ಕ್ರಿಕೆಟಿಗ ಮೊಹಮ್ಮದ್ ಶಮಿ ಪತ್ನಿ: ಹಸಿನ್ ಮಾದಕ ನೋಟಕ್ಕೆ ನೆಟ್ಟಿಗರು ಫಿದಾ!