ಪಕುರ್: ಗ್ಯಾಸ್ ಸಿಲಿಂಡರ್ ಸಾಗಿಸುವ ಟ್ರಕ್ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 17 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದು, ಇತರೆ 26 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಗ್ಗೆ ಜಾರ್ಖಂಡ್ನ ಪಕುರ್ ಜಿಲ್ಲೆಯಲ್ಲಿ ನಡೆದಿದ್ದು, ಮೃತರ ಸಾವಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ ಪರಿಹಾರ ಘೋಷಿಸಿದ್ದಾರೆ.
ಬುಧವಾರ 8.30ರ ಸುಮಾರಿಗೆ ಗೋವಿಂದ್ಪುರ್-ಸಾಹಿಬ್ಗಂಜ್ ರಾಜ್ಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸುಮಾರು 40 ಪ್ರಯಾಣಿಕರು ಬಸ್ನಲ್ಲಿದ್ದರು. ಸಾಹಿಬ್ಗಂಜ್ನ ಬರ್ಹಾರ್ವಾದಿಂದ ಡಿಯೋಘರ್ ಜಿಲ್ಲೆಯ ಜಾಸಿಧಿಹ್ ಕಡೆಗೆ ಬಸ್ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಗ್ಯಾಸ್ ಸಿಲಿಂಡರ್ ಸಾಗಾಟದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ 17 ಮಂದಿ ಮೃತಪಟ್ಟಿದ್ದು, 26 ಮಂದಿ ಗಾಯಗೊಂಡಿದ್ದಾರೆ. ಗ್ಯಾಸ್ ಕಟರ್ ಸಹಾಯದಿಂದ ಬಸ್ನಲ್ಲಿ ಸಿಲುಕಿದ್ದ ಮೃತದೇಹ ಮತ್ತು ಗಾಯಗೊಂಡವರನ್ನು ರಕ್ಷಣೆ ಮಾಡಲಾಗಿದೆ.
ರಸ್ತೆಯಲ್ಲಿ ತೀವ್ರವಾಗಿ ಮಂಜು ಕವಿದಿದ್ದರಿಂದ ಸ್ಪಷ್ಟವಾಗಿ ಗೋಚರಿಸದೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯಾದರೂ ಯಾವುದೇ ಗ್ಯಾಸ್ ಸಿಲಿಂಡರ್ ಸ್ಫೋಟವಾಗಿಲ್ಲ. ಮೃತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂ. ಪರಿಹಾರವನ್ನು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಘಟನೆಯ ಬಗ್ಗೆ ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, ಜಾರ್ಖಂಡ್ನ ಪಕುರ್ನಲ್ಲಿ ನಡೆದ ಅಪಘಾತದಿಂದ ಆಘಾತಕ್ಕೆ ಒಳಗಾಗಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಸಾಂತ್ವಾನ ಹೇಳಲು ಬಯಸುತ್ತೇನೆ. ಮೃತರ ಸಾವಿಗೆ ಸಂತಾಪ ಸೂಚಿಸುತ್ತೇನೆ ಮತ್ತು ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ. ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲು ಸೂಚನೆ ನೀಡಿದ್ದೇನೆಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)
ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ: ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಕೆಜಿಎಫ್ ನಟಿ
20 ನಿಮಿಷ ಫ್ಲೈಓವರ್ನಲ್ಲಿ ಸಿಲುಕಿದ ಮೋದಿ; ಇತಿಹಾಸದಲ್ಲಿ ಕರಾಳ ದಿನ..
ದಿಢೀರ್ ಮೋಡ ಕಾರಣ ಕಾಪ್ಟರ್ ಪತನ; ರಾವತ್ ಹೆಲಿಕಾಪ್ಟರ್ ದುರಂತ ಕುರಿತ ವರದಿ ಸಲ್ಲಿಕೆ..