ಮಡಿಕೇರಿ : ಇಲ್ಲಿಗೆ ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಪಕ್ಕದ ಮೋರಿಯನ್ನು ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿ, ದುರಸ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಕಕ್ಕಬೆ ಪಟ್ಟಣದಿಂದ ದೇವಾಲಯಕ್ಕೆ ತೆರಳುವ ರಸ್ತೆಯ ಪಟ್ಟಣದಲ್ಲಿರುವ ಮುಖದ್ವಾರದ ಸಮೀಪ ಸುಮಾರು 200 ಮೀಟರ್ ಉದ್ದದಷ್ಟು ರಸ್ತೆ ತೀವ್ರ ಹದಗೆಟ್ಟಿದೆ. ಜತೆಗೆ ರಸ್ತೆಯಲ್ಲಿರುವ ಹಳೇ ಮೋರಿ ಮಧ್ಯೆ ಕುಸಿದು ಸಂಚಾರಕ್ಕೆ ತೊಂದರೆಯಾಗಿದೆ ಎಂದು ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ ಶಾಸಕರ ಗಮನ ಸೆಳೆದಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ದುರಸ್ತಿಪಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಬಾಚಮಂಡ ಲವ ಚಿನ್ನಪ್ಪ , ನಾಪೋಕ್ಲು ವಲಯ ಕಾಂಗ್ರೆಸ್ ಅಧ್ಯಕ್ಷ ಮಾಚೇಟಿರ ಕುಸು ಕುಶಾಲಪ್ಪ, ಬೋಳ್ಳಂಡ ಶರೀನ್ ಮತ್ತಿತರರಿದ್ದರು.