ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿರುವ ಬ್ಯಾಟರಾಯನಪುರ ಗ್ರಾಮದ 7 ಬೂತ್ಗಳನ್ನು ಒಳಗೊಂಡಿರುವ ಮತಗಟ್ಟೆ ಕೇಂದ್ರವನ್ನು ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಥಾಪಿಸುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಎಡವಟ್ಟು ಸೃಷ್ಟಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಮತಗಟ್ಟೆ ಕೇಂದ್ರಗಳನ್ನು ಅಂತಿಮಗೊಳಿಸಿ ಸಜ್ಜುಗೊಳಿಸಲಾಗುತ್ತಿದೆ. ಆದರೆ, ಬ್ಯಾಟರಾಯನಪುರದಲ್ಲಿ ನಿಗದಿಪಡಿಸಿರುವ ಮತಗಟ್ಟೆ ಕೇಂದ್ರವು ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಶಾಲಾ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಕಾಮಗಾರಿ ಪ್ರಗತಿಯಲ್ಲಿರುವುದನ್ನು ಗಮನಿಸಿಯೂ ಪಾಲಿಕೆ ಅಧಿಕಾರಿಗಳು ಸಮರ್ಪಕವಾದ ಮೂಲಸೌಕರ್ಯ ಹೊಂದಿರುವ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆ.
ಇದನ್ನೂ ಓದಿ: ಸ್ಮಶಾನದಲ್ಲಿ ಹುಡುಗಿಯರ ಫೋಟೋಗಳಿಗೆ ಮಾಟ-ಮಂತ್ರ; ಮಧ್ಯರಾತ್ರಿ ಬೆತ್ತಲೆಯಾಗಿ ವಾಮಾಚಾರ; ಮಹಿಳೆಯೂ ಭಾಗಿ!
ಬ್ಯಾಟರಾಯನಪುರ ಗ್ರಾಮದ ಮತದಾರರ ಸಂಖ್ಯೆಗೆ ಅನುಗುಣವಾಗಿ ಏಳು ಬೂತ್ಗಳುಳ್ಳ ಮತಗಟ್ಟೆ ಕೇಂದ್ರವನ್ನು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ 3 ಕೊಠಡಿ ಹಾಗೂ ಹಳೆಯ ಕಟ್ಟಡದಲ್ಲಿ 4 ಕೊಠಡಿಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿರುವ ಕಾರಣ ಹಳೆಯ ಕಟ್ಟಡಕ್ಕೆ ತೆರಳಲು ಇಕ್ಕಟ್ಟಾದ ಜಾಗದಲ್ಲೇ ನುಸುಳಿ ಹೋಗಬೇಕಿದೆ. ಜತೆಗೆ ಅಂಗವಿಕಲ ಮತದಾರರು ತ್ರಿಚಕ್ರ ವಾಹನದಲ್ಲಿ ತೆರಳಲು ಸ್ಥಳಾವಕಾಶ ಇಲ್ಲ. ಸದ್ಯಕ್ಕಂತೂ ಮೂಲಸೌಕರ್ಯ ಅಷ್ಟಕಷ್ಟೇ. ಇಂತಹ ಜಾಗದಲ್ಲಿ ಬೂತ್ ಸ್ಥಾಪಿಸಿದರೆ ಮತಗಟ್ಟೆ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುವುದಾದರೂ ಹೇಗೆ ಎಂಬ ಸಾಮಾನ್ಯ ಜ್ಞಾನವೂ ಬಿಬಿಎಂಪಿ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದನ್ನೂ ಓದಿ: ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ತಲೆಗೆ ಗಂಭೀರ ಗಾಯ; ಗುಂಪಲ್ಲಿದ್ದ ಕಿಡಿಗೇಡಿಯಿಂದ ಕಲ್ಲೆಸೆತ!
ಗುತ್ತಿಗೆದಾರರ ಮೇಲೆ ಒತ್ತಡ ತಂತ್ರ
ವರ್ಷದ ಹಿಂದೆ ಇಲ್ಲಿನ ಸರ್ಕಾರಿ ಶಾಲೆಯ ಹಳೆಯ ಕಟ್ಟಡವನ್ನು ಕೆಡವಿ ಮೂರಂತಸ್ತಿನ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಉದ್ದೇಶಿತ ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸದ್ಯ ಕಟ್ಟಡದ ಮುಂದೆ ಕಟ್ಟಡ ಸಾಮಗ್ರಿಗಳನ್ನು ರಾಶಿ ಹಾಕಲಾಗಿದೆ. ಕಬ್ಬಿಣದ ತಂತಿಗಳು, ಮರದ ಸಾಮಗ್ರಿ, ಹಾಲೋಬ್ರಿಕ್ಸ್, ಮರಳು ರಾಶಿ ಹಾಕಲಾಗಿದೆ. ಕೊಠಡಿಗಳಿಗೆ ಸಿಮೆಂಟ್ ಗಾರೆ, ನೆಲಹಾಸು ಹಾಕುವ ಕೆಲಸ ಇನ್ನೂ ಪ್ರಗತಿಯಲ್ಲಿದೆ. ವಿಶೇಷವೆಂದರೆ ಕಟ್ಟಡದಲ್ಲಿ ವಿದ್ಯುತ್ ಸೌಲಭ್ಯ ಕೂಡ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತದಾನಕ್ಕೆ ಇನ್ನು 10 ದಿನಗಳು ಬಾಕಿ ಇರುವಾಗ ಈ ಶಾಲಾ ಕಟ್ಟಡದಲ್ಲೇ ಮತಗಟ್ಟೆ ಕೇಂದ್ರವಾಗಿ ಪರಿವರ್ತಿಸಲು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಇದಕ್ಕಾಗಿ ಕಟ್ಟಡದ ಗುತ್ತಿಗೆದಾರರ ಮೇಲೆ ಒತ್ತಡ ಹೇರಿ 3 ಕೊಠಡಿಗಳನ್ನು ತ್ವರಿತವಾಗಿ ನಿರ್ಮಿಸಿ ಬಿಟ್ಟುಕೊಡುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶೆಟ್ಟರ್ ಅವರ 27 ಬೆಂಬಲಿಗರನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ
ನಿಯಮ ಪಾಲಿಸದ ಅಧಿಕಾರಿ ವರ್ಗ
ಕಳೆದ ಒಂದು ವರ್ಷದ ಹಿಂದೆ ಶಾಲಾ ಕಟ್ಟಡವನ್ನು ಕೆಡವಿ ಹೊಸದಾಗಿ ನಿರ್ಮಿಸಲು ಅನುಮತಿ ನೀಡುವಾಗ ಚುನಾವಣೆ ನೆಪ ಮಾಡಿ ಒಪ್ಪಿಗೆ ನೀಡಿರಲಿಲ್ಲ. ಸರ್ಕಾರಿ ಶಾಲೆಯಿಂದ 400 ಮೀ. ಅಂತರದಲ್ಲಿ ಖಾಸಗಿ ಶಾಲೆ ಇದ್ದು ಅದನ್ನು ಬಳಸಿಕೊಳ್ಳುವುದಾಗಿ ನಗರ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಕೂಡ ಬರೆದು ಅನುಮೋದಿಸಿದ್ದರು. ವಿಶೇಷವೆಂದರೆ ಯಲಹಂಕ ವಲಯದ ಉಪ ಆಯುಕ್ತರ ಕಚೇರಿ ಎದುರೇ ಸರ್ಕಾರಿ ಶಾಲಾ ಕಟ್ಟಡವಿದೆ. ಈಗ ಪಾಲಿಕೆಯ ಕಂದಾಯ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕೈಗೊಳ್ಳದೆ ನಿರ್ಮಾಣ ಹಂತದ ಸರ್ಕಾರಿ ಶಾಲಾ ಕಟ್ಟಡದ ಅಪೂರ್ಣ ಕೊಠಡಿಗಳನ್ನು ಮತದಾನಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಮೂಲಸೌಕರ್ಯ ಹಾಗೂ ಭದ್ರತೆಗೆ ತೊಂದರೆ ಆಗಬಾರದೆಂಬ ನಿಯಮವನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಭ್ರಷ್ಟ ಅಧಿಕಾರಿಗೆ 15 ವರ್ಷಗಳ ಬಳಿಕ 2 ವರ್ಷ ಸಜೆ, 60 ಲಕ್ಷ ರೂ. ದಂಡ!