ಚಿಕ್ಕಬಳ್ಳಾಪುರ: ಇಂದು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಾರಸ್ದಾರರಿಲ್ಲದ ನಾಲ್ಕು ಬ್ಯಾಗ್ಗಳು ಪತ್ತೆಯಾಗಿದ್ದವು. ಪ್ರಯಾಣಿಕರು ಕುಳಿತುಕೊಳ್ಳುವ ಕಲ್ಲುಬೆಂಚಿನ ಕೆಳಗೆ ಬ್ಯಾಗ್ಗಳನ್ನು ಇಡಲಾಗಿತ್ತು. ಒಂದೊಂದು ಬ್ಯಾಗ್ಗಳೂ ಒಂದೊಂದು ಬಣ್ಣದಲ್ಲಿ ಇದ್ದವು.
ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿತ್ತು. ಅಷ್ಟೇ ಅಲ್ಲದೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆ ಬ್ಯಾಗ್ಗಳನ್ನು ಸುತ್ತುವರಿದು ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕದಳದವರೂ ಆಗಮಿಸಿದ್ದರು. ಪರಿಶೀಲನೆ ನಡೆಸುವಷ್ಟು ಹೊತ್ತು ಬಸ್ಗಳನ್ನೂ ನಿಲ್ದಾಣಕ್ಕೆ ಬಾರದಂತೆ ಪೊಲೀಸರು ತಡೆದಿದ್ದರು.
ಸುಮಾರು ಒಂದು ತಾಸುಗಳ ಕಾಲ ತಪಾಸಣೆ ನಡೆಸಿದ ಪೊಲೀಸರು ಬ್ಯಾಗ್ಗಳನ್ನು ಬಸ್ ನಿಲ್ದಾಣದಿಂದ ದೂರದಲ್ಲಿರುವ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದರು. ಅಲ್ಲಿ ಬ್ಯಾಗ್ ತೆರೆದು ನೋಡಿದಾಗ ನಾಲ್ಕೂ ಬ್ಯಾಗ್ಗಳಲ್ಲೂ ಗುಟ್ಕಾ ಪ್ಯಾಕೇಟ್ಗಳೇ ತುಂಬಿದ್ದವು.
ಮಂಗಳೂರು ಬಾಂಬ್ ಪತ್ತೆ ಹಿನ್ನೆಲೆಯಲ್ಲೇ ಹೀಗೆ ನಾಲ್ಕು ಬ್ಯಾಗ್ಗಳು ಸಿಕ್ಕಿದ್ದಕ್ಕೆ ಸಹಜವಾಗಿ ಆತಂಕ ಮೂಡಿತ್ತು. ಆದರೆ ಗುಟ್ಕಾ ಪ್ಯಾಕೇಟ್ಗಳನ್ನು ನೋಡಿ ನಿಟ್ಟುಸಿರು ಬಿಡುವಂತಾಯಿತು. ಆದರೆ ಹೀಗೆ ಬ್ಯಾಗ್ಗಳಲ್ಲಿ ಗುಟ್ಕಾ ಪ್ಯಾಕೇಟ್ ತಂದು ಬಿಟ್ಟು ಹೋದವರು ಯಾರು ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತನಿಖೆ ಬಳಿಕವಷ್ಟೇ ಬ್ಯಾಗ್ ಬಗ್ಗೆ ಸಂಪೂರ್ಣ ಮಾಹಿತಿ ಹೊರಬೀಳಲಿದೆ.