ವಿಜಯಪುರ: ಇವರಿಬ್ಬರೂ ಸೇರಿಕೊಂಡು ನಿರುದ್ಯೋಗಿಗಳಿಂದ ಕೆಲಸ ಕೊಡಿಸುವ ನೆಪದಲ್ಲಿ ಹಣ ಪೀಕಿದ ಆರೋಪ ಕೇಳಿಬಂದಿದೆ. ಆರೋಪಿಗಳಾದ ಶಶಾಂಕ್ ಹಾಗೂ ಸುಧೀರ್ ಬಾಬು ಅಲಿಯಾಸಸ್ ಸುಧೀರ್ ರೆಡ್ಡಿ, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಹೆಸರಲ್ಲಿ ಒಂದು ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನುವ ಸಂಶಯ ಪೊಲೀಸರಿಗಿದೆ.
ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಮಾಡಿಸಿ ಕೊಡುವ ಹೆಸರಲ್ಲಿ ಇವರಿಬ್ಬರೂ ಮಹಾಮೋಸ ಮಾಡಿದ್ದಾರೆ ಎನ್ನುವ ಆರೋಪವಿದ್ದು ರಾಜ್ಯಾದ್ಯಂತ ಆರು ಸಾವಿರ ನಿರುದ್ಯೋಗಿಗಳಿಗೆ ಟೋಪಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಇವರು ಎನ್ಜಿಓಗಳ ಮೂಲಕ ಉದ್ಯೋಗ ಆಕಾಂಕ್ಷಿಗಳಿಂದ ಹಣ ಕಿತ್ತುಕೊಂಡಿದ್ದರು ಎನ್ನಲಾಗಿದೆ.
ನಿರುದ್ಯೋಗಿಗಳಿಗೆ ಮೋಸ ಮಾಡಿದ್ದು ಹೇಗೆ?
ಒನ್ ನೇಷನ್ ಒನ್ ಕಾರ್ಡ್ ಮಾಡಲು ಉದ್ಯೋಗ ನೀಡುವ ಭರವಸೆ ನೀಡಿದ ಆರೋಪಿಗಳು ಈ ಯೋಜನೆಯಲ್ಲಿ ಕೆಲಸ ಮಾಡಲು ಕೋ-ಆರ್ಡಿನೇಟರ್ಸ್ ಹಾಗೂ ಡೇಟಾ ಆಪರೇಟರ್ಸ್ ಸೇರಿ ಪ್ರತಿ ತಾಲೂಕಿಗೆ 32ಜನ ಬೇಕಿದ್ದಾರೆ ಎಂದು ಉದ್ಯೋಗದ ಆಸೆ ತೋರಿಸಿದ್ದಾರೆ. ಆದರೆ ಕೋ-ಆರ್ಡಿನೇಟರ್ ಹುದ್ದೆಗೆ 10 ಸಾವಿರ ರೂ. ನಿಗದಿ ಮಾಡಿದ್ದು ಡೇಟಾ ಆಪರೇಟರ್ ಹುದ್ದೆಗೆ 1299 ರೂ. ನಿಗದಿ ಮಾಡಿದ್ದರು. ಈ ಹಣ ಪಾವತಿಸದಿದ್ದರೆ ಉದ್ಯೋಗ ಇಲ್ಲ ಎಂದು ನಿರುದ್ಯೋಗಿಗಳಿಂದ ಹಣ ಪೀಕುತ್ತಿದ್ದರು.
ಎನ್ಜಿಓ ಮುಖ್ಯಸ್ಥೆಗೂ ನಂಬಿಕೆ ದ್ರೋಹ!
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಸ್ಫೂರ್ತಿ ವುಮೆನ್ ಡೆವಲಪಮೆಂಟ್ ಅಸೋಷಿಯೇಷನ್ ಎಂಬ ಎನ್ಜಿಓ ಮೂಲಕ ಆರೋಪಿಗಳು ಉದ್ಯೋಗ ನೀಡುವ ಭರವಸೆ ನೀಡಿದ್ದರು ಎನ್ನಲಾಗಿದೆ. ಇವರನ್ನು ನಂಬಿದ ಸ್ಪೂರ್ತಿ ಎನ್ಜಿಓ ಮುಖ್ಯಸ್ಥೆ ಶಶಿಕಲಾ ತಳಸದಾ ಉದ್ಯೋಗಾಕಾಂಕ್ಷಿಗಳಿಂದ ಹಣ ಸಂಗ್ರಹಿಸಿ ನೀಡಿದ್ದರು. ಶಶಾಂಕ್ ಎಸ್ಎನ್ ಹಾಗೂ ಎಸ್ ಸುಧೀರ್ ಬಾಬು ಅಲಿಯಾಸ್ ಸುಧೀರ ರೆಡ್ಡಿ ತುಮಕೂರು ಜಿಲ್ಲೆಯ ಮಧುಗಿರಿ ಮೂಲದವರಾಗಿದ್ದು ಅವರು ಬರೋಬ್ಬರಿ 95 ಲಕ್ಷ ರೂ. ಗೂ ಅಧಿಕ ಹಣ ಪೀಕಿದ್ದರು ಎನ್ನಲಾಗಿದೆ.
ಹಣ ಒಟ್ಟಾಗುತ್ತಿದ್ದರೂ ಉದ್ಯೋಗ ಮಾತ್ರ ಲಭಿಸದೇ ಇದ್ದ ಹಿನ್ನೆಲೆಯಲ್ಲಿ ಈ ಇಬ್ಬರ ಮೇಲೆ ಸಂಶಯ ಬಂದು ಪೊಲೀಸರಿಗೆ ಸ್ಪೂರ್ತಿ ಎನ್ಜಿಓ ಮುಖ್ಯಸ್ಥೆ ಶಶಿಕಲಾ ದೂರು ನೀಡಿದ್ದರು. ತನಿಖೆ ನಡೆಸಿದ ವಿಜಯಪುರ ಸಿಇಎನ್(ಅಪರಾಧ ವಿಭಾಗ) ಠಾಣೆ ಪೊಲೀಸರು ಸುಧೀರ್ ಬಾಬು ಹಾಗೂ ಶಶಾಂಕ ಇಬ್ಬರನ್ನೂ ಬಂಧಿಸಿದ್ದಾರೆ.
ಮೋಸದ ಜಾಲ ಎಲ್ಲೆಲ್ಲಿದೆ?
ಇವರು ಕೇವಲ ವಿಜಯಪುರದಲ್ಲಿ ಮಾತ್ರವಲ್ಲದೇ ಇತರೆಡೆಯೂ ಮೋಸ ಮಾಡಿರೋ ಶಂಕೆ ಇದೆ. ಸದ್ಯ ಪೊಲೀಸರು ಆರೋಪಿಗಳ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿದ್ದು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…
ಕಾರ್ಮಿಕ ವರ್ಗಕ್ಕೆಂದು ಮಾಡಲಾಗಿದ್ದ ಉಚಿತ ಬಸ್ಪಾಸ್ ಯೋಜನೆ ಸ್ಥಗಿತ?