ಇಂದು ಸಮಾಜದಲ್ಲಿ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂದು ಅರ್ಥವಾಗದ ಪರಿಸ್ಥಿತಿ ಇದೆ. ಸಾಮಾನ್ಯವಾಗಿ ಯಾರಿಗಾದರೂ ಅನ್ಯಾಯವಾದರೆ ಎಲ್ಲರಿಗೂ ಮೊದಲು ನೆನಪಾಗುವುದು ಪೊಲೀಸರು. ಏಕೆಂದರೆ, ಆ ವೃತ್ತಿಯು ಸಮಾಜ ಸೇವೆ ಮಾಡಲು ಮತ್ತು ಜನರನ್ನು ರಕ್ಷಿಸುವುದಕ್ಕಾಗಿಯೇ ಅಸ್ತಿತ್ವದಲ್ಲಿದೆ. ಆದರೆ, ನ್ಯಾಯ ಕೊಡಬೇಕಾದ ಪೊಲೀಸರೇ ಅನ್ಯಾಯ ಎಸಗಿ, ಜನರಿಗೆ ತೊಂದರೆ ಕೊಡುತ್ತಿದ್ದರೆ ಬೇರೆ ಯಾರಿಗೆ ಕಷ್ಟ ಹೇಳಿಕೊಳ್ಳುವುದು. ತೆಲಂಗಾಣದ ಇಬ್ರಾಹಿಂಪಟ್ಟಣ ಮಂಡಲದಲ್ಲಿಯೂ ಇಂತಹದ್ದೇ ಘಟನೆಯೊಂದು ನಡೆದಿದೆ.
ತೆಲಂಗಾಣದ ವರ್ಷಕೊಂಡ ಗ್ರಾಮದ 23 ವರ್ಷದ ಯುವತಿ, ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯ ಮೆಟ್ಟಿಲೇರಿ ತನ್ನ ಗಂಡ ಕಿರುಕುಳ ನೀಡುತ್ತಿದ್ದಾನೆಂದು ದೂರು ದಾಖಲಿಸಿದ್ದಳು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಗಂಡ-ಹೆಂಡತಿ ಇಬ್ಬರನ್ನು ಠಾಣೆಗೆ ಕರೆಯಿಸಿ ಆಪ್ತ ಸಮಾಲೋಚನೆ ನೀಡಲಾಗುತ್ತದೆ. ಅದೇ ರೀತಿ ಈ ಪ್ರಕರಣದಲ್ಲೂ ಮಾಡಲಾಯಿತು.
ಯುವತಿಯಿಂದ ಪ್ರಕರಣ ದಾಖಲಿಸಿಕೊಳ್ಳುವ ಸಮಯದಲ್ಲಿ ಠಾಣೆಯಲ್ಲಿ 53 ವರ್ಷದ ಎಎಸ್ಐ ರಾಮುಲು ಹಾಜರಿದ್ದರು. ಯುವತಿಯ ಗಂಡನನ್ನು ಕರೆದು ರಾಮುಲು ಬುದ್ಧಿವಾದ ಹೇಳಿದ್ದರು. ಆದಾಗ್ಯೂ ಗಂಡನ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಪ್ರತಿದಿನ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಲೇ ಇತ್ತು. ಇದರಿಂದ ಬೇಸತ್ತಿದ್ದ ಯುವತಿ ಆಗಾಗ ಠಾಣೆಗೆ ಬಂದು ದೂರು ನೀಡುವುದು ಸಾಮಾನ್ಯವಾಗಿತ್ತು. ದಿನಗಳು ಕಳೆದಂತೆ ಎಎಸ್ಐ ಕಣ್ಣು ಯುವತಿಯ ಮೇಲೆ ಬಿದ್ದಿತು.
ವಿಚಾರಣೆ ನೆಪದಲ್ಲಿ ಯುವತಿ ಮತ್ತು ಆಕೆಯ ಗಂಡನನ್ನು ಠಾಣೆ ಕರೆಸಿಕೊಳ್ಳುತ್ತಿದ್ದ ರಾಮುಲು ಆಕೆಗೆ ಹತ್ತಿರವಾದರು ಮತ್ತು ಸಲುಗೆಯು ಬೆಳೆಯಿತು. ಈ ವಿಚಾರ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಮನಕ್ಕೆ ಬಂದಿತು ಮತ್ತು ಮೇಟಪಲ್ಲಿಯ ಸರ್ಕಲ್ ಇನ್ಸ್ಪೆಕ್ಟರ್ ಗಮನಕ್ಕೆ ತಂದರು. ಶೀಘ್ರದಲ್ಲೇ ಎಎಸ್ಐ ರಾಮುಲು ನಿವೃತ್ತಿಯಾಗುತ್ತಿದ್ದರಿಂದ ಉನ್ನತ ಅಧಿಕಾರಿಗಳಿಗೆ ದೂರು ನೀಡದೆ, ಇನ್ನೊಮ್ಮೆ ಈ ರೀತಿ ಮಾಡಬೇಡ ಎಂದು ಬೈದು ಬುದ್ಧಿವಾದ ಹೇಳಲಾಗಿತ್ತು. ಆದರೂ ಎಎಸ್ಐ ವರ್ತನೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲಿಲ್ಲ.
ಇದರ ನಡುವೆ ಕಳೆದ ಎರಡು ದಿನಗಳಿಂದ ಯುವತಿಯ ಜತೆಯಲ್ಲಿ ಎಎಸ್ಐ ರಾಮುಲು ತುಂಬಾ ಸಲುಗೆಯಿಂದ ಇರುವ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಉನ್ನತ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಎಎಸ್ಐ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. (ಏಜೆನ್ಸೀಸ್)
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗಿಲ್ ಪಾಂಡಿಯಮ್ಮ! ವಯಸ್ಸು ಕೇಳಿ ದಂಗಾದ ಅಭಿಮಾನಿಗಳು
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ತೀವ್ರ ಅಸ್ವಸ್ಥಗೊಂಡು ಸಾವು: ತುರುವೇಕೆರೆಯಲ್ಲಿ ದುರ್ಘಟನೆ
IPL 2024: ಪೂರ್ತಿ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ, ಮೇ 26ರಂದು ಚೆನ್ನೈನಲ್ಲಿ ಫೈನಲ್ ಪಂದ್ಯ