ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಶ್ರೀರಾಮಮಂದಿರ ಹೇಗೆ ಕಾಣಿಸಲಿದೆ ಎಂಬ ಪರಿಕಲ್ಪನೆಯ ಚಿತ್ರಗಳನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಟ್ವೀಟ್ ಮಾಡಿದೆ.
ಶ್ರೀರಾಮಮಂದಿರವು ಭಾರತೀಯ ಶಿಲ್ಪಕಲೆಯ ಉತ್ತಮ ಉದಾಹರಣೆಯಾಗಿ ಕಣ್ಣು ಮುಂದೆ ನಿಲ್ಲಲಿದೆ ಎಂದು ಟ್ರಸ್ಟ್ ಹೇಳಿದೆ. ಪ್ರಸ್ತಾವಿತ ರಾಮ ಮಂದಿರದ ವಿನ್ಯಾಸದ ಬಗ್ಗೆ ಮಾತನಾಡಿರುವ ಶಿಲ್ಪಿ ಚಂದ್ರಕಾಂತ ಸೋಮಪುರ, ಆರಂಭದಲ್ಲಿ ಪ್ರಸ್ತಾಪಿಸಲ್ಪಟ್ಟ ಮಂದಿರದ ಗಾತ್ರಕ್ಕಿಂತ ದುಪ್ಪಟ್ಟು ಗಾತ್ರದ ಮಂದಿರ ನಿರ್ಮಾಣವಾಗಲಿದೆ ಎಂದರು.
ಇದನ್ನೂ ಓದಿ: ಮುಗಿಯಿತು ವನವಾಸ ಇಂದು ಶಿಲಾನ್ಯಾಸ
ಅಲ್ಲದೆ, ಇದು ನಾಗರ ಶೈಲಿಯಲ್ಲಿ ಇರಲಿದ್ದು, ಈ ಹಿಂದೆ ಪ್ರಸ್ತಾಪಿಸಿದ ಎರಡು ಗುಮ್ಮಟಗಳ ಬದಲು ಐದು ಗುಮ್ಮಟಗಳು ಇರಲಿವೆ. ಭೂಮಿ ಪೂಜೆ ನಡೆದ ಬಳಿಕ ಒಮ್ಮೆ ಕಾಮಗಾರಿ ಆರಂಭವಾಯಿತೆಂದರೆ ಮುಂದಿನ ಮೂರುವರ್ಷಗಳ ಒಳಗೆ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಸೋಮಪುರ ಹೇಳಿದ್ದಾರೆ.