ನವದೆಹಲಿ: ಟಿವಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ (ಕನ್ನಡದ ಕೋಟ್ಯಾಧಿಪತಿ) ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನ ಮೂಲದ ಕೆಲವರು ಈ ಜಾಲದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದ್ದು, ಇವರ ಜಾಲಕ್ಕೆ ದೇಶಾದ್ಯಂತ ಸಾರ್ವಜನಿಕರು ಮೋಸ ಹೋಗಿರಬಹುದು ಎಂದು ಸೈಬರ್ ಕ್ರೈಂ ಪೊಲೀಸರು ಶಂಕಿಸಿದ್ದಾರೆ. ಕೌನ್ ಬನೇಗಾ ಕರೋಡ್ಪತಿ (ಕೆಬಿಸಿ) ಹೆಸರಿನಲ್ಲಿ ಅಂದಾಜು 25 ಲಕ್ಷ ರೂ.ಗಳ ಮೌಲ್ಯದ ಲಾಟರಿ ಮಾರಾಟ ಹೆಸರಿನಲ್ಲಿ ವಂಚನೆ ಇದಾಗಿದೆ ಪೊಲೀಸರು ತಿಳಿಸಿದ್ದಾರೆ.
ಬಿಹಾರ ಮೂಲದ ಸಿವಾನ್ ಪ್ರದೇಶದ ನಿವಾಸಿ ಇಮ್ತಿಯಾಜ್ ಅಲಿ, ಗೋಪಾಲಗಂಜ್ ನಿವಾಸಿಗಳಾದ ಇರ್ಫಾನ್ ಅಲಿ ಮತ್ತು ಸಂತೋಷ್ಕುಮಾರ್ ಬಂಧಿತರು. ನಜಾಫ್ನಗರದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಈ ಮೂವರನ್ನು ಬಂಧಿಸಿದ್ದಾರೆ.
ದೆಹಲಿ ಪೊಲೀಸರಿಗೆ ದೂರು ನೀಡಿರುವ ಮಹಿಳೆ, ನನಗೆ ಒಂದು ವಾಟ್ಸ್ಆ್ಯಪ್ ಕರೆ ಬಂದಿತ್ತು. ಅದು ಪಾಕಿಸ್ತಾನದ ಸಂಖ್ಯೆಯಾಗಿತ್ತು. ಕೆಬಿಸಿಯಿಂದ ನಿಮಗೆ 25 ಲಕ್ಷ ರೂಪಾಯಿಗಳ ಲಾಟರಿ ಬಂದಿದೆ. ಈಗ ನಾವು ನೀಡುವ ಸಂಖ್ಯೆಗೆ ವಾಟ್ಸ್ಆ್ಯಪ್ ಕರೆ ಮಾಡಿ, ರಾಣಾ ಪ್ರತಾಪ್ ಸಿಂಗ್ ಎಂಬುವವರ ಜತೆ ಮಾತನಾಡಿ. ಅವರು ನಿಮಗೆ ಇನ್ನಷ್ಟು ವಿವರಣೆ ನೀಡುತ್ತಾರೆ ಎಂದು ಹೇಳಿದ್ದಾರೆ.
ಅವರು ಕೊಟ್ಟ ನಂಬರ್ಗೆ ಕರೆ ಮಾಡಿದ ಮಹಿಳೆಗೆ ಜಿಎಎಸ್ಟಿ ಶುಲ್ಕ, ಸಂಸ್ಕರಣಾ ಶುಲ್ಕಗಳು ಎಂಬ ನೆಪದಲ್ಲಿ ಭಾರತೀಯ ಬ್ಯಾಂಕ್ ಖಾತೆಗಳಲ್ಲಿ ಹಲವು ಲಕ್ಷ ರೂಪಾಯಿಗಳನ್ನು ಜಮಾ ಮಾಡಲು ತಿಳಿಸಿದ್ದಾರೆ. ಆಕೆ ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತಿದ್ದಂತೆ, ನಿಮ್ಮ ಕೆಬಿಸಿ ಮೊತ್ತ 25 ಲಕ್ಷ ರೂ.ಗಳಿಂದ 45ಕ್ಕೆ, 45 ಲಕ್ಷದಿಂದ 75 ಲಕ್ಷ ರೂ. ಹೆಚ್ಚಾಗಿದೆ ಎಂದು ಹೇಳಿ ಮತ್ತಷ್ಟು ಹಣ ಹಾಕಿಸಿಕೊಂಡಿದ್ದಾರೆ.
ಅಲ್ಲದೆ ಉಪಾಯವಾಗಿ ಖಾತೆಗಳ ಸಂಖ್ಯೆ, ಕಾಲ್ ರೆಕಾರ್ಡ್ಗಳನ್ನು ಡಿಲೀಟ್ ಮಾಡಿಸಿದ್ದಾರೆ. ಆದ್ದರಿಂದ ಮಹಿಳೆ ದೂರು ನೀಡುವಾಗ ಈ ಬಗ್ಗೆ ದಾಖಲೆ ಸಲ್ಲಿಸಲು ತಿಣುಕಾಡಿದ್ದಾರೆ. ಆದರೆ ಪೊಲೀಸರ ತನಿಖೆಯಿಂದ ಬ್ಯಾಂಕ್ ಖಾತೆ ಸಂಖ್ಯೆಗಳು ಪತ್ತೆಯಾಗಿವೆ. ಅಲ್ಲದೆ ನೂತನ ಡಿಜಿಟಲ್ ತನಿಖಾ ತಂತ್ರಗಳ ಮೂಲಕ ಪತ್ತೆ ಹಚ್ಚಿದಾಗ ಪಾಕಿಸ್ತಾನದ ವಂಚಕರ ತಾಣ ಬಯಲಾಗಿದ್ದು, ಪಾಕಿಸ್ತಾನದ ಇಸ್ಲಾಮಾಬಾದ್ನಿಂದ ಈ ಕರೆಗಳು ಬಂದಿದ್ದವು ಎಂದು ತಿಳಿದು ಬಂದಿದೆ.
ಬಂಧಿತ ಮೂವರು ಬಿಹಾರದಿಂದ ಕೂಲಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದು ಪರಿಚಯವಿದ್ದ ಕೆಲವರು ಈ ವಂಚನೆ ಬಗ್ಗೆ ತಿಳಿಸಿದ್ದಾರೆ. ವಂಚನೆ ಜಾಲದ ಮುಖ್ಯಸ್ಥ ಪಾಕಿಸ್ತಾನ ಮೂಲದ ರೌಫ್ ಎಂಬುವವನ ಜತೆ ಸಂಪರ್ಕ ಮಾಡಿದ ಇವರು ವಂಚನೆಗೆ ಸಹಕರಿಸಿದ್ದಾರೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
‘ನನ್ನ ಪತ್ನಿ ಜತೆ ನಿಂಗೇನು ಸಂಬಂಧ’ ಎಂದು ಪ್ರಶ್ನಿಸಿದ ಪತಿಯ ಮೇಲೆ ನಾಯಿ ಛೂ ಬಿಟ್ಟ ಮಡದಿಯ ಪ್ರಿಯಕರ!