ಲಾಹೋರ್: ಆಸೀಸ್ ನೆಲದಲ್ಲಿ ಸತತ 2ನೇ ಬಾರಿಗೆ ಟೆಸ್ಟ್ ಸರಣಿ ಗೆದ್ದ ಭಾರತ ತಂಡದ ಐತಿಹಾಸಿಕ ಸಾಧನೆಗೆ ವಿಶ್ವದ ಎಲ್ಲೆಡೆಯಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಕೂಡ ಇದರಿಂದ ಹೊರತಾಗಿಲ್ಲ. ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಕೂಡ ಭಾರತ ತಂಡದ ಅಮೋಘ ಸಾಧನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಯ ಮತ್ತು ಹಲವು ಹಿನ್ನಡೆಗಳ ನಡುವೆಯೂ ಕಂಡ ಈ ಗೆಲುವು ನಂಬಲಸಾಧ್ಯ. ಈ ಸರಣಿ ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯಲಿದೆ ಎಂದು ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಹೇಳಿದ್ದಾರೆ. ಆಸೀಸ್ ನೆಲದಲ್ಲಿ ಇಷ್ಟೊಂದು ದಿಟ್ಟ ಆಟವಾಡಿದ ಏಷ್ಯಾದ ತಂಡವನ್ನು ಹಿಂದೆಂದೂ ನೋಡಿಲ್ಲ. ಯಾವುದೇ ಅಡೆತಡೆಗಳಿಗೂ ಅವರು ಕುಗ್ಗಲಿಲ್ಲ. 36 ರನ್ಗೆ ಕುಸಿದ ಬಳಿಕ ತಿರುಗಿಬಿದ್ದ ರೀತಿ ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಮಾಜಿ ನಾಯಕ ವಾಸಿಂ ಅಕ್ರಂ ಹೊಗಳಿದ್ದಾರೆ.
ಇದನ್ನೂ ಓದಿ: ನಟರಾಜನ್ ನೋಬಾಲ್ಗೆ ಸ್ಪಾಟ್ ಫಿಕ್ಸಿಂಗ್ ಎಂದ ವಾರ್ನ್, ಸಿಡಿದೆದ್ದ ಅಭಿಮಾನಿಗಳು
ಮತ್ತೋರ್ವ ಮಾಜಿ ವೇಗಿ ಶೋಯಿಬ್ ಅಖ್ತರ್, ಗೆಲುವಿಗೆ ಭಾರತೀಯ ಕ್ರಿಕೆಟ್ ವ್ಯವಸ್ಥೆಯೇ ಕಾರಣ. ಈ ಲಿತಾಂಶಕ್ಕೆ ಭಾರತ 20 ವರ್ಷಗಳ ಹಿಂದೆಯೇ ಹೂಡಿಕೆ ಮಾಡಿತ್ತು. ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಯುವ ಆಟಗಾರರ ಬೆಳವಣಿಗೆಯಲ್ಲಿ ರಾಹುಲ್ ದ್ರಾವಿಡ್ ಪಾತ್ರ ಅಮೋಘವಾದುದು. ಯುವ ಆಟಗಾರರಿಗೆ ತಂಡದಲ್ಲಿ ಕೋಚ್ ರವಿಶಾಸ್ತ್ರಿ ನೀಡಿದ ಬೆಂಬಲವೂ ಅಪಾರವಾದುದು ಎಂದು ಹೊಗಳಿದ್ದಾರೆ.
ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್ ಕೀಪರ್-ಬ್ಯಾಟ್ಸ್ಮನ್