ಬೀಜಿಂಗ್: ಚೀನಾದ ರೆಸ್ಟೋರೆಂಟ್ ಮಾಲೀಕರೊಬ್ಬರು ತಮ್ಮ ರಾಷ್ಟ್ರದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ವಾಸ್ತವವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ಕೆಲ ತಳಿಗಾರರು ರೆಸ್ಟೋರೆಂಟ್ ಗ್ರಾಹಕರಿಗೆ ಉಣಬಡಿಸಲು ಸಾವಿರಾರು ನಾಯಿಮರಿಗಳನ್ನು ಬೆಳೆಸುತ್ತಿರುವುದಾಗಿ ಹೆಸರೇಳಲು ಇಚ್ಛಿಸದ ದಕ್ಷಿಣ ಚೀನಾದ ನಾಯಿ ಮಾಂಸ ರೆಸ್ಟೋರೆಂಟ್ ಮಾಲೀಕರೊಬ್ಬರು ಹೇಳಿದ್ದಾರೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಹಾಂಗ್ಕಾಂಗ್ ಗಡಿಯಲ್ಲಿರುವ ಶೆನ್ಜೆನ್ ನಗರವು ಬೆಕ್ಕು ಮತ್ತು ನಾಯಿ ಮಾಂಸ ತಿನ್ನುವುದನ್ನು ನಿಷೇಧಿಸಿದ ಚೀನಾದ ಮೊದಲ ನಗರ ಎನಿಸಿಕೊಂಡಿದೆ. ಇದರ ಬೆನ್ನಲ್ಲೇ ಮಾಧ್ಯಮ ಸಂದರ್ಶನದಲ್ಲಿ ರೆಸ್ಟೋರೆಂಟ್ ಮಾಲೀಕ ಮಾತನಾಡಿ, ನಾನಿರುವ ಗುವಾಂಗ್ಕ್ಸಿ ಮತ್ತು ಲೀಜಹೌ ನಗರದ ಅನೇಕ ಜನರು ನಾಯಿ ಮಾಂಸವನ್ನು ಸೇವಿಸುತ್ತಾರೆ. ಸುಮಾರು 1.7 ಮಿಲಿಯನ್ ನಿವಾಸಿಗಳಿರುವ ಲೀಜಹೌ ನಾಯಿ ಮಾಂಸದ ಹಾಟ್ಸ್ಪಾಟ್ ಆಗಿದೆ ಎಂದು ವಿವರಿಸಿದ್ದಾರೆ.
ಗುವಾಂಗ್ಕ್ಸಿಯಲ್ಲಿ ಕೆಲ ಜನರು ಮಾರಾಟ ಮಾಡಲು ನಾಯಿಗಳನ್ನು ಸಾಕುತ್ತಾರೆ. ಹಂದಿಗಳ ರೀತಿ ಅವುಗಳನ್ನು ನಮ್ಮ ಬಳಿ ಹೊತ್ತು ತರುತ್ತಾರೆ. ಅದರಲ್ಲೂ ಓರ್ವ ತನ್ನ ಮನೆಯಲ್ಲಿ ಸಾವಿರಾರು ಶ್ವಾನಗಳನ್ನು ಮಾಂಸಕ್ಕಾಗಿಯೇ ಸಾಕಿಕೊಂಡಿದ್ದಾರೆ. ಗುವಾಂಗ್ಕ್ಸಿ ದಕ್ಷಿಣ ಚೀನಾದ ಒಂದು ಪ್ರಾಂತ್ಯವಾಗಿದೆ. ಇಲ್ಲಿನ ಯುಲಿನ್ ನಗರದಲ್ಲಿ ಪ್ರತಿ ವರ್ಷ ನಾಯಿ ಮಾಂಸ ಮೇಳ ನಡೆಯುತ್ತದೆ. ಈ ವೇಳೆ ಸಾವಿರಾರು ನಾಯಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದು, ಚರ್ಮ ಸುಲಿದು ಅಡುಗೆ ಮಾಡಿ ಸ್ಥಳೀಯರು ತಿನ್ನುತ್ತಾರೆ ಎಂದು ಹೇಳಿದ್ದಾರೆ.
ನಾಯಿ ಮಾಂಸ ತಿನ್ನದಂತೆ ಶೆನ್ಜೆನ್ ನಗರದಲ್ಲಿ ಮಾತ್ರ ಬ್ಯಾನ್ ಮಾಡಲಾಗಿದೆ. ಈ ನಗರ ಲೀಜಹೌದಿಂದ 560 ಕಿ.ಮೀ(348 ಮೈಲಿ) ದೂರವಿದೆ. ಹೀಗಿದ್ದರೂ ಬ್ಯಾನ್ ಮಾಡಿರುವುದರಿಂದ ಶೇ. 40 ರಷ್ಟು ವ್ಯವಹಾರ ಕುಸಿಯುತ್ತದೆ ಎಂದು ರೆಸ್ಟೋರೆಂಟ್ ಮಾಲೀಕ ಕಳವಳ ವ್ಯಕ್ತಪಡಿಸಿದ್ದಾರೆ.
ಶೆನ್ಜೆನ್ ನಗರದಲ್ಲಿ ಅನೇಕರು ನಾಯಿ ಮಾಂಸವಿದೆಯೇ ಎಂದು ನಮ್ಮ ಬಳಿ ಕೇಳುತ್ತಾರೆ. ಆದರೆ, ಮಾರಾಟ ಮಾಡಲು ಸಾಧ್ಯವಿಲ್ಲದಿರುವುದರಿಂದ ಇಲ್ಲ ಎಂದು ಹೇಳಿದರೆ ಅಲ್ಲಿಂದ ನಿರ್ಗಮಿಸುತ್ತಾರೆ. ಶೇ. 30 ರಿಂದ 40 ರಷ್ಟು ಕುಸಿಯುವುದರೊಂದಿಗೆ ನನ್ನ ವ್ಯವಹಾರದ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.
ಮತ್ತೋರ್ವ ರೆಸ್ಟೋರೆಂಟ್ ಮಾಲಕಿ ಮಾತನಾಡಿ, ಬ್ಯಾನ್ ಸಂಬಂಧ ಕಾನೂನು ಮಾಡುವ ಮುನ್ನವೇ ನಾಯಿ ಮಾಂಸ ವ್ಯಾಪಾರದಲ್ಲಿ ಕುಸಿತ ಕಂಡಿದೆ. ಬ್ಯಾನ್ ನಂತರ ಶ್ವಾನ ಮಾಂಸ ಮಾರಾಟವನ್ನು ನಿಲ್ಲಿಸಿ, ಬೇರೆ ಏನಾದರೂ ಮಾರಾಟ ಮಾಡಲು ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಮಂಗಳವಾರವಷ್ಟೇ ಶೆನ್ಜೆನ್ ನಗರ ಬೆಕ್ಕು ಮತ್ತು ನಾಯಿ ಮಾಂಸ ತಿನ್ನುವುದನ್ನು ನಿಷೇಧಿಸಿ ಈ ಸಂಬಂಧ ಕರಡು ಕಾನೂನನ್ನು ಹೊರಡಿಸಿದೆ. ಮೇ 1ರಿಂದ ಸುಮಾರು 13 ಮಿಲಿಯನ್ ಜನರಿರುವ ಶೆನ್ಜೆನ್ ನಗರದಲ್ಲಿ ನಾಯಿ ಮಾಂಸ ನಿಷಿದ್ಧ ಅಧಿಕೃತ ಕಾನೂನಾಗಿ ಜಾರಿಯಾಗಲಿದೆ. (ಏಜೆನ್ಸೀಸ್)
ತಬ್ಲಿಘಿ ಜಮಾತ್ ದೇಶದ ಕರೊನಾ ವೈರಸ್ ಹಾಟ್ಸ್ಪಾಟ್: 1,023 ಸೋಂಕಿತರಿಗೆ ತಬ್ಲಿಘಿ ನಂಟು
ಏಪ್ರಿಲ್ 30ರವರೆಗೆ ಏರ್ ಇಂಡಿಯಾ ಬುಕ್ಕಿಂಗ್ ಇಲ್ಲ: ಸರ್ಕಾರವೇ ನಿರ್ದೇಶನ ನೀಡಿದೆ ಎಂದ ಅಧಿಕಾರಿಗಳು