ವಾರ್ಧಾ: ದೇಶದಲ್ಲಿ ಅತಿಹೆಚ್ಚು ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ವೈರಸ್ ಪೀಡಿತರ ಸಂಖ್ಯೆಯಲ್ಲಿ ದಿನೇದಿನೆ ಏರುತ್ತಿದ್ದರೂ ಅದರ ನಡುವೆ ಜನಪ್ರತಿನಿಧಿಗಳೂ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವ ಆಗಿದೆ.
ವಾರ್ಧಾದಲ್ಲಿ ಬಿಜೆಪಿ ಶಾಸಕರೇ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ತಮ್ಮ ಜನ್ಮದಿನದ ನಿಮಿತ್ತ ಸ್ಥಳೀಯ ಜನರನ್ನು ಮನೆಗೆ ಕರೆಸಿ ರೇಷನ್ ವಿತರಣೆ ಮಾಡಿದ್ದಾರೆ. ರೇಷನ್ಗಾಗಿ ಶಾಸಕರ ಮನೆಯ ಎದುರು ಜನರು ಗುಂಪುಗುಂಪಾಗಿ ಸೇರಿದ್ದರು. ಅಲ್ಲಿ ಯಾವುದೇ ಸಾಮಾಜಿಕ ಅಂತರ ಕಂಡು ಬರಲಿಲ್ಲ.
ವಾರ್ಧಾದ ಆರ್ವಿ ಕ್ಷೇತ್ರದ ಬಿಜೆಪಿ ಶಾಸಕ ದಾದರಾವ್ ಕೆಚೆ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಜನರಿಗೆ ಗೋಧಿ ಮತ್ತು ಅಕ್ಕಿಯನ್ನು ವಿತರಿಸಿದ್ದಾರೆ.
ಈ ರೇಷನ್ಗಾಗಿ 100ಕ್ಕೂ ಹೆಚ್ಚು ಮಂದಿ ಅವರ ಮನೆ ಹೊರಗೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಲ್ಲಿ ಗುಂಪಾಗಿ ನಿಂತು ಮಾತನಾಡುತ್ತಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನೆಲ್ಲ ಚದುರಿಸಿದ್ದಾರೆ. ದೂರದಲ್ಲಿ ನಿಲ್ಲಿ ಎಂದು ಹೇಳಿದ್ದಾರೆ.
ಆದರೆ ಈ ಘಟನೆ ಬಗ್ಗೆ ಬಿಜೆಪಿ ಎಂಎಲ್ಎ ಬೇರೆಯದೇ ಕತೆ ಹೇಳಿದ್ದಾರೆ. ನಾನು ಪ್ರತಿವರ್ಷವೂ ನನ್ನ ಜನ್ಮದಿನದಂದು ಬಡವರಿಗೆ ರೇಷನ್ ನೀಡುತ್ತೇನೆ. ಈ ಬಾರಿ 21 ಜನರಿಗೆ ಮಾತ್ರ ರೇಷನ್ ನೀಡಲು ನಿರ್ಧರಿಸಿದ್ದೆ. ಆದರೆ ಪ್ರತಿಪಕ್ಷ ಇದರಲ್ಲೂ ಪಿತೂರಿ ಮಾಡಿದೆ. 100ಕ್ಕೂ ಹೆಚ್ಚು ಜನರನ್ನು ನಮ್ಮನೆ ಎದುರು ಕಳಿಸಿತ್ತು ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಶಾಸಕರ ಮನೆಯ ಎದುರು ನೂರಾರು ಜನರು ರೇಷನ್ಗಾಗಿ ನಿಂತಿದ್ದ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಪ್ರಧಾನಿ ಮೋದಿ ಸೇರಿ ಹಲವು ಪ್ರಮುಖ ನಾಯಕರು ಕರೊನಾ ವಿರುದ್ಧ ಹೋರಾಟಕ್ಕೆ ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಅದನ್ನು ಪಾಲಿಸದಿದ್ದರೆ ಹೇಗೆಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್)