ಕೊಳ್ಳೇಗಾಲ: ವೃದ್ಧೆಯೊಬ್ಬರು ಮಂಚದ ಮೇಲೆ ಮಲಗಿಕೊಂಡೇ ಉಪವಿಭಾಗಾಧಿಕಾರಿ ಕೋರ್ಟ್ಗೆ ಹಾಜರಾದ ಘಟನೆ ಚಾಮರಾಜನಗರದ ಕೊಳ್ಳೇಗಾಲ ಪಟ್ಟಣದಲ್ಲಿ ಬುಧವಾರ ಸಂಭವಿಸಿದೆ.
ಚಾಮರಾಜನಗರ ಪಟ್ಟಣದ ನಿವಾಸಿ ಮುಮ್ತಾಜ್ ಬೇಗಂ(75) ಮಂಚದ ಮೇಲೆ ಮಲಗಿಕೊಂಡೇ ಕೋರ್ಟ್ಗೆ ಹಾಜರಾಗಿದ್ದವರು. ಹೆತ್ತ ಮಗನೇ ಸುಳ್ಳು ಹೇಳಿ ಆಸ್ತಿ ಬರೆಸಿಕೊಂಡು ಮುಮ್ತಾಜ್ ಬೇಗಂ ಅವರನ್ನು ಮನೆಯಿಂದ ಹೊರಹಾಕಿದ್ದ. ನೊಂದ ತಾಯಿ, ತನ್ನ ಕೊನೆಯ ಮಗ ಸಿ.ಎನ್.ಅಬ್ದುಲ್ ರಜಾಕ್ (ಸಿದ್ದಿಕ್) ವಿರುದ್ಧ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-2007 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು.
ಅನಾರೋಗ್ಯದ ಕಾರಣ ಕಳೆದ ಎರಡು ತಿಂಗಳಿನಿಂದ ಮುಮ್ತಾಜ್ ಬೇಗಂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಈ ತಿಂಗಳು ಎಸಿ ಕೋರ್ಟ್ಗೆ ಹಾಜರಾಗಲೇಬೇಕಿದ್ದರಿಂದ ಮಗಳಾದ ಸಿ.ಎನ್.ನೂರ್ ಆಯಿಷಾ ಸಂಬಂಧಿಕರ ನೆರವು ಪಡೆದು ಹಾಸಿಗೆ ಹಿಡಿದಿರುವ ಮುಮ್ತಾಜ್ ಬೇಗಂ ಅನ್ನು ಮಂಚದ ಮೇಲೆ ಮಲಗಿಸಿಕೊಂಡೇ ಕೋರ್ಟ್ಗೆ ಕರೆತಂದರು.
ತಾಯಿ-ಮಗನ ಆಸ್ತಿ ಕಲಹ: ಮುಮ್ತಾಜ್ ಬೇಗಂಗೆ ಮೂರು ಹೆಣ್ಣು ಮತ್ತು ಆರು ಗಂಡು ಮಕ್ಕಳಿದ್ದಾರೆ. ಪತಿ ದಿ.ನಿಸಾರ್ ಅಹ್ಮದ್ ಈಕೆಯ ಹೆಸರಿಗೆ ಸರ್ವೆ ನಂ-282 ರಲ್ಲಿ ವಿಸ್ತೀರ್ಣ 3.28.00 ಎಕರೆ ಭೂಮಿ ಬರೆದಿದ್ದರು. ಆದರೆ ಇದನ್ನು ಕೊನೆಯ ಮಗ ಅಬ್ದುಲ್ ರಜಾಕ್ ಹಜ್ ಯಾತ್ರೆಗೆ ಪಾಸ್ಪೋರ್ಟ್ ಮಾಡಿಸಿಕೊಡುತ್ತೇನೆ ಎಂದು ಸುಳ್ಳು ಹೇಳಿ ತನ್ನ ಹೆಸರಿಗೆ ಬರೆಸಿಕೊಂಡಿರುವುದಾಗಿ ಅರ್ಜಿಯಲ್ಲಿದೆ.
ನನ್ನ ಹೆಸರಲ್ಲಿ ಲಕ್ಷಾಂತರ ರೂ. ಸಾಲ ಪಡೆದಿದ್ದಾನೆ. ಇದನ್ನು ಕೇಳಿದರೆ ಕೊಲೆ ಬೆದರಿಕೆ ಹಾಕುತ್ತಾನೆ. ಆದ್ದರಿಂದ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದು, ಕೊಲೆ ಬೆದರಿಕೆ ಹಾಕಿದಾಗ ಪೊಲೀಸರಿಗೂ ದೂರು ನೀಡಲು ಮುಂದಾಗಿರುವುದಾಗಿ ಪತ್ರದಲ್ಲಿದೆ.
ಬರೋದು ಬೇಡ ಅಂದ್ರೂ ಬಂದಿದ್ದರು: ಮುಮ್ತಾಜ್ ಬೇಗಂ ಹಾಸಿಗೆ ಹಿಡಿದಿರುವ ಫೋಟೋ ಅನ್ನು ಈ ಮೊದಲೇ ನಮ್ಮ ಸಿಬ್ಬಂದಿಗೆ ಕಳುಹಿಸಿದ್ದರು. ಈ ಪರಿಸ್ಥಿತಿಯಲ್ಲಿ ಅವರನ್ನು ವಿಚಾರಣೆಗೆ ಕರೆತರವುದು ಬೇಡ ಎಂದು ಮೊದಲೇ ತಿಳಿಸಲಾಗಿತ್ತು. ಆದರೂ ಅವರ ಮನೆಯವರು ಮಂಚದ ಸಮೇತ ಆ ತಾಯಿಯನ್ನು ಕರೆತಂದಿದ್ದರು. ಎಸಿ ಗೀತಾ ಹುಡೇದಾ “ವಿಜಯವಾಣಿ”ಗೆ ತಿಳಿಸಿದ್ದಾರೆ. ವಿಚಾರಣೆ ನಡೆಸದೆ ವಾಪಸ್ ಕಳುಹಿಸಲಾಗಿದೆ ಎಂದು ವಿವರಿಸಿದ್ದಾರೆ.
ಮಗನಿಂದ ಪ್ರಾಣ ಬೆದರಿಕೆ ಇದೆ ಎಂದಿರುವ ಮುಮ್ತಾಜ್ ಬೇಗಂ ಮತ್ತು ಮಗಳು ಸಿ.ಎನ್.ನೂರ್ ಆಯಿಷಾಗೆ ರಕ್ಷಣೆ ನೀಡಲು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್ರಾಜ್ ಅವರೊಂದಿಗೆ ಮಾತನಾಡಿಸಿದ್ದೇನೆ.
| ಗೀತಾ ಹುಡೇದಾ ಎಸಿ, ಕೊಳ್ಳೇಗಾಲ
ಪತ್ನಿಯ ಕಿರುಕುಳ: ಮದ್ವೆಯಾದ ಮೂರೇ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಪತಿ