ಹನೂರು : ತಾಲೂಕಿನ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಇಬ್ಬರು ನೌಕರರು ಮಾಡಿರುವ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ನೌಕರರಾದ ಕೃಷ್ಣಕುಮಾರ್ ಹಾಗೂ ಪ್ರಭುಸ್ವಾಮಿ ಎಂಬುವರು ಕರ್ತವ್ಯದ ವೇಳೆ ಕನ್ನಡ ಚಲನಚಿತ್ರದ ಸಾಂಗ್ಲಿಯಾನ ಸಿನಿಮಾದ ಮ್ಯೂಸಿಕ್ಗೆ ಹಾಗೂ ತಮಿಳು ಚಿತ್ರದ ಕಾಮಿಡಿ ತುಣುಕಿಗೆ ರೀಲ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ಮಾದರಿಯಾಗಿರಬೇಕಾದ ನೌಕರರೇ ಈ ರೀತಿ ರೀಲ್ಸ್ ಮಾಡಿರುವುದರ ಮೂಲಕ ಕರ್ತವ್ಯ ಲೋಪ ಎಸಗಿರುವುದು ಎಷ್ಟರ ಮಟ್ಟಿಗೆ ಸರಿ? ಎಂಬುದಾಗಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿದ್ದಾರೆ.
ಈ ಸಂಬಂಧ ಈಗಾಗಲೇ ನೌಕರರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇಂತಹ ಪ್ರಕರಣ ಮರುಕಳುಹಿಸದಂತೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ವಿಜಯವಾಣಿಗೆ ತಿಳಿಸಿದರು.