ಶಿವಮೊಗ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ತೊಡಗಿಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದಾರೆ. ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಈ ಮಾತನ್ನು ಹೇಳಿದರು.
ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳಿಗೆ ನೀವೆಲ್ಲರೂ ಬೆಂಬಲ ನೀಡಬೇಕು. ರಾಜ್ಯದ ಜನರ ಬದುಕಿಗಾಗಿ ಏಕಾಂಗಿ ಹೋರಾಟ ಮಾಡುತ್ತಿದ್ದೇನೆ. ಪಂಚರತ್ನ ಯೋಜನೆ ಅನುಷ್ಠಾನಕ್ಕಾಗಿ ಅಧಿಕಾರ ನೀಡಿ ಎಂದು ಜನರ ಮುಂದೆ ಹೋಗುತ್ತಿದ್ದೇನೆ. ಕಳೆದು ಆರು ತಿಂಗಳಿಂದ ನಿರಂತರವಾಗಿ ರಾಜ್ಯ ಪ್ರವಾಸ ಮಾಡಿದ್ದೇನೆ. ಅದು ನನ್ನ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ರಾಜ್ಯದ ಜನರ ಹಿತಕ್ಕಾಗಿ ಎಂದ ಅವರು, ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ನನ್ನ ಕೊಡುಗೆ ಇದೆ ಎಂದರು.
ಇದನ್ನೂ ಓದಿ: ನಾನು ನಿಮಗೆ, ನಿಮ್ಮ ಕುಟುಂಬಕ್ಕೆ ಮಾಡಿದ ಅನ್ಯಾಯ ಏನು? ನನ್ನ ಮೇಲೆ ಯಾಕಿಷ್ಟು ದ್ವೇಷ?: ಸುಮಲತಾಗೆ ಎಚ್ಡಿಕೆ ಪ್ರಶ್ನೆ
ಈ ಹಿಂದೆ ಯಡಿಯೂರಪ್ಪ ಕೂಡ ನನ್ನ ಬಳಿ ಬಂದಿದ್ದರು. ನೀವು ರಾಜೀನಾಮೆ ಕೊಡೋದು ಬೇಡ ಎಂದು ಸಲಹೆ ನೀಡಿ ವಾಪಸ್ ಕಳುಹಿಸಿದ್ದೆ. ಅವತ್ತು ಮೈತ್ರಿ ಸರ್ಕಾರದ ಅವಧಿಯಲ್ಲಿ ಬಂದು ಅಭಿವೃದ್ಧಿಗೆ ಚಾಲನೆ ನೀಡಿದ್ದೆ. ಅವರು ಅಧಿಕಾರದ ರುಚಿ ನೋಡಿದ್ದು ಕೂಡ ಇದೇ ಅವಧಿಯಲ್ಲಿ. ಈಗಲೂ ಅದು ನಡೀತಾ ಇದೆ. ಜಗದೀಶ್ ಶೆಟ್ಟರ್, ಸವದಿ ಹೋಗಿದ್ದಾರೆ. ಕಾಂಗ್ರೆಸ್ ಕಟ್ಟಾಳು ರೀತಿ ಪಕ್ಷದ ಕೆಲಸ, ಪ್ರಚಾರ ಮಾಡ್ತಿದ್ದಾರೆ ಎಂದು ಎಚ್ಡಿಕೆ ಹೇಳಿದರು.
ಇದನ್ನೂ ಓದಿ: ಬೆರಳ ತುದಿಯಲ್ಲೇ ಇದೆ ಬದಲಿಸುವ ಶಕ್ತಿ; ಚುನಾವಣೆ ಸುಧಾರಣೆಗೆ ಆಗಲಿ ಬದಲಾವಣೆ..
ಏನೂ ಇಲ್ಲದವರು, ನೋಟು ಎಣಿಸುವ ಮಷಿನ್ ತಂದು ಇಟ್ಟುಕೊಂಡಿದ್ದರು. ಇದೇ ಜಿಲ್ಲೆಯಲ್ಲಿ ಹುಟ್ಟಿದ ಕುವೆಂಪು ಸರ್ವ ಜನಾಂಗದ ಶಾಂತಿಯ ತೋಟ ಎಂದರು. ಆದರೆ, ಬಿಜೆಪಿಯವರು ಅದನ್ನು ಮಾಡ್ತಾ ಇದ್ದಾರಾ? ರಕ್ತದೋಕುಳಿ ಮಾಡುತ್ತಿದ್ದಾರೆ. ಗಣೇಶ ಹಬ್ಬ, ಯಾವ ಹಬ್ಬ ಬಂದರೂ ಒಂದೆರಡು ಹೆಣ ಬೀಳಬೇಕು. ಅದರಲ್ಲಿ ಅವರು ಅಧಿಕಾರವನ್ನು ಕಟ್ಟಿಕೊಳ್ಳಬೇಕು. ಇದೆಲ್ಲವೂ ಕೊನೆಯಾಗಬೇಕು. ಅದಕ್ಕಾಗಿ ಜೆಡಿಎಸ್ ಬೆಂಬಲಿಸಿ ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡುವ ಸಂದರ್ಭದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೆ. ಬಹುಮತ ಇಲ್ಲದೆ ಎಲ್ಲರೂ ಅಡ್ಡಗಾಲು ಹಾಕಿದ್ದರು. ಆದರೂ, 72 ಶಾಸಕರಿಗೆ ಅನುದಾನ ಕೊಟ್ಟು, ಬಳಿಕ ಸಾಲ ಮನ್ನಾ ಮಾಡಿದ್ದೆ. ಬಿಜೆಪಿ ಕಿರಾತಕರ ನಡುವೆ ನಾವು ಚುನಾವಣೆ ಮಾಡೋದು ಹೇಗೆ ಎಂದು ಅಭ್ಯರ್ಥಿಗಳು ಕೇಳುತ್ತಾರೆ. ನಾವು ಅಧಿಕಾರದಲ್ಲಿ ಇದ್ದಾಗ ಎಂದೂ ಲೂಟಿ ಹೊಡೆಯುವ ಕೆಲಸ ಮಾಡಿಲ್ಲ. ಆಗ ಲೂಟಿ ಹೊಡೆದಿದ್ದರೆ ಇಂದು ಬಿಜೆಪಿಗೆ ಪೈಪೋಟಿ ನೀಡಿ ಹಣ ಕೊಡಬಹುದಿತ್ತು ಎಂದು ಎಚ್ಡಿಕೆ ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆ ವಿರೋಧಿಸಿ ದೇವಾಲಯಗಳಲ್ಲಿ ನಾಳೆ ‘ಹನುಮಾನ್ ಚಾಲೀಸಾ’ ಪಠಣ
ಉತ್ತರ ಕರ್ನಾಟಕ ಭಾಗದಲ್ಲೇ 30ಕ್ಕೂ ಹೆಚ್ಚು ಸೀಟ್ ಬರುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳ ಸ್ವಯಂಕೃತ ಅಪರಾಧದಿಂದ ಜನ ಜೆಡಿಎಸ್ ಪರ ನಿಲ್ಲುತ್ತಾರೆ. ಎಲ್ಲ ಸಮಸ್ಯೆಗಳಿಗೆ ಜೆಡಿಎಸ್ ಪರಿಹಾರ ನೀಡುತ್ತದೆ, ನೀವು ಬಹುಮತ ನೀಡಿ. ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗುವುದಿಲ್ಲ, ನನಗೆ ದೇವರ ಆಶೀರ್ವಾದ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ಶಾರದಾ ಅಪ್ಪಾಜಿಗೌಡ ಅವರನ್ನು ಗೆಲ್ಲಿಸಿ, ವಿಐಎಸ್ಎಲ್ ಹಾಗೂ ಎಂಪಿಎಂ ಉಳಿಸುವ ಜವಾಬ್ದಾರಿ ನನ್ನದು. ನೀವು ಪತ್ರ ಹಿಡಿದುಕೊಂಡು ಕೇಂದ್ರದ ಬಳಿ ಹೋಗುವುದು ಬೇಡ. ನಾನು ಕಾರ್ಖಾನೆ ಉಳಿಸುವ ಕೆಲಸ ಮಾಡುತ್ತೇನೆ, ಹೊಸ ಕಾರ್ಖಾನೆಯನ್ನೂ ತರುತ್ತೇನೆ ಎಂದರು.
ಮೊದಲು ಜಿಲ್ಲೆಯಿಂದ ಬಿಜೆಪಿಯನ್ನು ನೀವು ಹೊರಹಾಕಿ. ಅವರು ಸಂಪಾದನೆ ಮಾಡಿದ್ದು ಸಾಕು. ಹಿಟಾಚಿ ಹಾಕಿ ಸರ್ಕಾರದ ಖಜಾನೆ ಗೋರಿದ್ದಾರೆ. ನಾನು ಮೋದಿಯವರ ತರ 25 ವರ್ಷ ಅಧಿಕಾರ ಕೇಳಲ್ಲ. ಐದು ವರ್ಷದ ಪೂರ್ಣ ಬಹುಮತದ ಸರ್ಕಾರ ಕೇಳುತ್ತಿದ್ದೇನೆ. ಬಿಜೆಪಿಯವರು 2047ಕ್ಕೆ ಅಮೃತಕಾಲ ಕೊಡುತ್ತೇವೆ ಎಂದು ಈಗ ರಕ್ತದ ಕಾಲ ಕೊಟ್ಟಿದ್ದಾರೆ. ನಮಗೆ ಐದು ವರ್ಷ ಅಧಿಕಾರ ಕೊಟ್ಟು ನೀವು ಪರೀಕ್ಷೆ ಮಾಡಿ ಎಂದು ಎಚ್ಡಿಕೆ ಹೇಳಿದರು.
ನಟ ಶರತ್ಬಾಬು ಕುರಿತು ಏನಿದು ವದಂತಿ?: ಟ್ವೀಟ್ ಮಾಡಿ ಡಿಲೀಟ್ ಮಾಡಿದ ಕಮಲಹಾಸನ್!