ಮುಂಬೈ: ಕ್ರಿಕೆಟಿಗ ಪೃಥ್ವಿ ಶಾ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರಬಂದಿರುವ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್, ಪೃಥ್ವಿ ಶಾ ವಿರುದ್ಧವೇ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನಗೆ ಕಿರುಕುಳ ನೀಡುವ ಮೂಲಕ ನನ್ನ ನಮ್ರತೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಸಪ್ನಾ ಗಿಲ್, ಪೃಥ್ವಿ ಶಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ. ತಮ್ಮ ಪರ ವಕೀಲ ಅಲಿ ಕಾಶಿಫ್ ಖಾನ್ ಮೂಲಕ ಅಂಧೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!
ನಾನು ಮತ್ತು ನನ್ನ ಸ್ನೇಹಿತೆ ಶೋಭಿತ ಠಾಕೂರ್ ಆಗಾಗ ಮುಂಬೈನ ಸಾಂತಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ಗೆ ತೆರಳುತ್ತೇವೆ. ಅದೇ ಹೋಟೆಲ್ನಲ್ಲಿ ನಾವು ಅಂದು ಪೃಥ್ವಿ ಶಾರನ್ನು ನೋಡಿದೆವು. ಅವರು ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಪಾನಮತ್ತ ಸ್ಥಿತಿಯಲ್ಲಿದ್ದರು. ನನ್ನ ಸ್ನೇಹಿತೆ ಶೋಭಿತ ಕ್ರಿಕೆಟ್ ಅಭಿಮಾನಿಯಾಗಿದ್ದ ಕಾರಣ ಶಾ, ಬಳಿಕ ಸೆಲ್ಫಿ ಕೇಳಿದಳು. ಆದರೆ, ಸೆಲ್ಫಿ ಕೊಡಲು ನಿರಾಕರಿಸಿ, ಶಾ, ಅವರ ಜೊತೆಯಿದ್ದ ಗುಂಪು ಶೋಭಿತಾ ಮೇಲೆ ಮುಗಿಬಿದ್ದರು. ಮೊದಲೇ ಹದಿಹರೆಯವಳಾಗಿದ್ದ ಶೋಭಿತಾ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ವೇಳೆ ನಾನು ಮಧ್ಯ ಪ್ರವೇಶಿಸಿ, ಶೋಭಿತಾಳಿಗೆ ಏನು ಆಗದಂತೆ ರಕ್ಷಿಸಲು ಪ್ರಯತ್ನಿಸಿದೆ. ನಮ್ಮ ನಮ್ರತೆಗೆ ಶಾ ಮತ್ತು ಅವರ ಸ್ನೇಹಿತರು ಧಕ್ಕೆ ತಂದಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಪ್ನಾ ದೂರು ನೀಡಿದ್ದಾರೆ.
ಪೃಥ್ವಿ ಶಾ ನೀಡಿದ ದೂರಿನಲ್ಲಿ ಏನಿದೆ?
ಅಂದಹಾಗೆ ಬುಧವಾರ (ಫೆ.15) ರಾತ್ರಿ ಈ ಘಟನೆ ನಡೆದಿದೆ. ಶಾ ಅವರು ತಮ್ಮ ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ ತೆರಳಿದ್ದರು. ಹೋಟೆಲ್ ಒಳಗೆ ಕೇಳಿದ ಅನೇಕ ಸೆಲ್ಫಿಗಳಿಗೆ ಅವರು ಪೋಸ್ ನೀಡಿದರು. ಆದರೆ, ಕೆಲವರು ಹೋಟೆಲ್ ಹೊರಗೆ ಶಾ ಅವರಿಗಾಗಿ ಕಾಯುತ್ತಿದ್ದರು. ಅವರಿಗೂ ಪೃಥ್ವಿ ಶಾ ಸಹಕರಿಸಿ, ಸೆಲ್ಫಿ ಕೊಟ್ಟಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವಕರು ಮತ್ತೆ ಮತ್ತೆ ಸೆಲ್ಫಿಗೆ ಫೋಸ್ ಕೊಡುವಂತೆ ಕೇಳಿಕೊಂಡಿದ್ದಕ್ಕೆ ಪೃಥ್ವಿ ಶಾ ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗುಂಪು ಶಾ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ವಾಗ್ವಾದ ನಿಧಾನವಾಗಿ ದೈಹಿಕ ಹಲ್ಲೆಗೆ ತಿರುಗಿದೆ. ಈ ವೇಳೆ ಶಾ ಅವರು ತಮ್ಮ ಕಾರನ್ನೇರಿ ತಕ್ಷಣ ಅಲ್ಲಿಂದ ಹೊರಟರು. ಆದರೆ, ಅಷ್ಟಕ್ಕೆ ಸುಮ್ಮನಾಗದ ಆ ಗುಂಪು ಶಾ ಅವರ ಕಾರನ್ನು ಹಿಂಬಾಲಿಸಿ ಹೋಗಿ ಬೇಸ್ಬಾಲ್ ಬ್ಯಾಟ್ಗಳಿಂದ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ವಿಂಡ್ಶೀಲ್ಡ್ಗೆ ಹಾನಿಯಾಗಿದೆ ಎಂದು ಶಾ ಪರ ದೂರಿನಲ್ಲಿ ಉಲ್ಲೇಖವಾಗಿದೆ. (ಏಜೆನ್ಸೀಸ್)
ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ಹಲ್ಲೆ: ಸೋಶಿಯಲ್ ಮೀಡಿಯಾ ಸುಂದರಿ ಅರೆಸ್ಟ್!