More

    ಅವಿವೇಕತನದ ನಿರ್ಧಾರದಿಂದ ಸಮಸ್ಯೆಗಳ ಸೃಷ್ಟಿ: ಪ್ರಗತಿಪರ ಚಿಂತಕ ಡಾ.ಕಾಳೇಗೌಡ ನಾಗವಾರ ಹೇಳಿಕೆ

    ಮಂಡ್ಯ: ಪ್ರಸ್ತುತ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಡಿ ದೇಶ ಸಮಾನತೆಯಿಂದ ಸಾಗಬೇಕಾಗಿದೆ. ಸಮಸ್ಯೆಗಳು ನಮ್ಮ ಅವಿವೇಕತನದಿಂದಲೇ ಹುಟ್ಟಿಕೊಳ್ಳುತ್ತವೆ. ಆದ್ದರಿಂದ ವಿವೇಕದಿಂದ ಉತ್ತಮ ಸಮಾಜ ಕಟ್ಟಬೇಕಾಗಿದೆ ಎಂದು ಪ್ರಗತಿಪರ ಚಿಂತಕ ಡಾ.ಕಾಳೇಗೌಡ ನಾಗವಾರ ಹೇಳಿದರು.
    ನಗರದ ಅನನ್ಯ ಕ್ರಿಯೇಷನ್ಸ್‌ನ 10ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ಧ ಸಂಗೀತ, ಸಾಹಿತ್ಯ, ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಸಂವಿಧಾನ ಮತ್ತು ಮುಂದೇನು ಕುರಿತು ಮಾತನಾಡಿದ ಅವರು, ದೇಶದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಮಾಡುವುದು ಅಗತ್ಯ ಎಂದರು.
    ಯುವಜನತೆ ಹೊಸ ಸಮಾಜ ಕಟ್ಟಲು ಅರ್ಪಣಾ ಮನೋಭಾವ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಮೌಢ್ಯ, ಅಸಮಾನತೆ, ಹೆಣ್ಣು ಭ್ರೂಣಹತ್ಯೆ, ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ಅರಿವಿನ ಕೊರತೆಯೇ ಕಾರಣವಾಗಿದೆ. ನಿತ್ಯ ಸಚಿವ ಕೆ.ವಿ.ಶಂಕರಗೌಡ ಅವರಂತಹ ನಾಯಕರು ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇದರಿಂದ ಜಿಲ್ಲೆ ಸುಶಿಕ್ಷಿತವಾಗಿದೆ. ಅಂಥವರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.
    ಮೌಢ್ಯ, ಅವಿವೇಕತನ ಪ್ರಸ್ತುತ ಹೆಚ್ಚಾಗಿದೆ. ನಮಗೆ ಸಮಸ್ಯೆ ಬಂದಾಗ ನಮ್ಮನ್ನು ಕಾಪಾಡುವುದು ಸಂವಿಧಾನವೇ ಹೊರತು ಬೇರೆ ಯಾರೂ ಕಾಪಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಬಿಟ್ಟು ಇರಲು ಸಾಧ್ಯವಿಲ್ಲ. ಸಂವಿಧಾನದ ಕಾನೂನಿನ ಚೌಕಟ್ಟಿನಲ್ಲಿಯೇ ಎಲ್ಲರೂ ನಡೆದುಕೊಳ್ಳಬೇಕಾಗಿದೆ. ಎಷ್ಟೇ ದೊಡ್ಡವರಾದರೂ ಕೆಟ್ಟದ್ದನ್ನು ಮಾಡಿದರೆ ತಿಪ್ಪೆಗುಂಡಿಯಲ್ಲಿ ಕೊಳೆಯಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ, ದಲಿತ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು. ಬ್ರಿಟಿಷರು ದೇಶಕ್ಕೆ ಬಂದಿದ್ದರಿಂದ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಆಗಿವೆ. ಸಮಾಜದಲ್ಲಿ ಮೌಢ್ಯ, ಅಸಮಾನತೆ ತೊಲಗಬೇಕು. ಅಪರಾಧ ಇಲ್ಲದೆ ಇದ್ದರೆ ಆಗ ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ಇದರಿಂದ ಒಬ್ಬ 120 ವರ್ಷ ಜೀವನ ಮಾಡಬಹುದಾಗಿದೆ. ಅದಕ್ಕಾಗಿ ದೇವರಾಗಿರುವ ಶಿವನ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಶಿವ ತ್ಯಾಗಮಯಿ, ಎಲ್ಲರೂ ಒಂದೇ ಎಂದು ಪ್ರತಿಪಾದನೆ ಮಾಡಿದ್ದಾನೆ. ಹೆಣ್ಣು ಸಹ ನಮ್ಮಲ್ಲಿ ಅರ್ಧ ಭಾಗ ಎಂದು ಅರ್ಧ ನಾರೀಶ್ವರನಾಗಿದ್ದಾನೆ. ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು ಎಲ್ಲರ ಉದ್ಧಾರಕ್ಕಾಗಿ ತತ್ವ ಸಂದೇಶಗಳನ್ನು ನೀಡಿದ್ದಾನೆ ಎಂದು ತಿಳಿಸಿದರು.
    ಚಿಂತಕ ಡಿ.ಶಿವಶಂಕರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮನುಷ್ಯ, ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ದ್ವೇಷ ಹೆಚ್ಚುತ್ತಿದ್ದು, ಆತ್ಮೀಯತೆಗೆ ಪೆಟ್ಟು ಬೀಳುತ್ತಿದೆ. ವಿಜ್ಞಾನದ ಹೆಸರಲ್ಲಿ ಅಜ್ಞಾನ ಬೆಳೆಯುತ್ತಿದೆ. ಆದ್ದರಿಂದ ಅದನ್ನು ತಡೆಗಟ್ಟಲು ಯುವ ಜನಾಂಗ ಸಮಾಜಮುಖಿ ಚಿಂತನೆ ಮಾಡಬೇಕು ಎಂದು ಹೇಳಿದರು.
    ಅನನ್ಯ ಕ್ರಿಯೇಷನ್ಸ್ ಸಂಸ್ಥಾಪಕ ಕಾರ್ಯದರ್ಶಿ ರಾಜೇಶ್ ರಾಂಪುರ, ಗೌರವಾಧ್ಯಕ್ಷ ಗೋಪಾಲಕೃಷ್ಣ, ಬರಹಗಾರ ರವಿಮರಿಯಪ್ಪ, ಜಗದೀಶ್, ಎಂ.ಸಿದ್ದಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts