More

    Success Story | ಐಎಎಸ್ ಆಗಲು ‘ಪೃಥ್ವಿ’ ಸಿನಿಮಾ ಪ್ರೇರಣೆ!

    ಅಲ್ಪತೃಪ್ತಿಗಳನ್ನು ತ್ಯಾಗ ಮಾಡಿ ಓದಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಇದಕ್ಕೆ ಪೂರಕವಾಗುವಂತೆ ಪಾಲಕರು ಕಲಿಕಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುವುದರ ಜತೆಗೆ ಓದುವ ವಾತಾವರಣ ಕಲ್ಪಿಸಬೇಕು ಎಂದು ಮಾತು ಆರಂಭಿಸಿದ 2019ರ ಬ್ಯಾಚ್​ನಲ್ಲಿ 78ನೇ ರ‍್ಯಾಂಕ್ ಪಡೆದ ಐಎಎಸ್​ ಅಧಿಕಾರಿ ಡಾ.ಆಕಾಶ್​ ಎಸ್​ ಅವರು ವಿದ್ಯಾರ್ಥಿ ಉದ್ಯೋಗ ಮಿತ್ರದ ಗೆಸ್ಟ್​ ಆಗಿ ತಮ್ಮ ಅನುಭವ ಹಂಚಿಕೊಳ್ಳುವುದರ ಜತೆಗೆ ಸ್ಪರ್ಧಾತ್ಮಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ.

    ರುದ್ರಯ್ಯ ಎಸ್​.ಎಸ್​, ಬೆಂಗಳೂರು

    ಪ್ರಸ್ತುತ ಕೊಡಗು ಜಿಲ್ಲೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಆಕಾಶ್​ ಎಸ್​ ಅವರು ಮೂಲತಃ ಮೈಸೂರಿನವರಾಗಿದ್ದು, 1 ರಿಂದ 9ನೇ ತರಗತಿವರೆಗೂ ಮಡಿವಾಳಪ್ಪ ಶಾಲೆಯಲ್ಲಿ ಓದಿದ್ದಾರೆ. ತಂದೆ ಶಂಕರ್​ ರೈಲ್ವೆ ಇಲಾಖೆಯಲ್ಲಿ ಗ್ರೂಪ್​ ಡಿ ನೌಕರರಾಗಿದ್ದರು. ತಾಯಿ ಗೃಹಿಣಿ. ತಮ್ಮ ಇಂಜಿನಿಯರ್​. ತಂದೆಯ ಕೆಲಸದ ನಿಮಿತ್ತ ಕುಟುಂಬ ಸಮೇತ ಬೆಂಗಳೂರಿಗೆ ಶಿಫ್ಟ್​ ಆದ ನಂತರ ಎಸ್​ಎಸ್​ಎಲ್​ಸಿಯಲ್ಲಿ ಶೇ.95 ಅಂಕದ ಜತೆಗೆ ಗಣಿತದಲ್ಲಿ ಶೇ.100 ರಷ್ಟು ಹಾಗೂ ಎಂಸಿಎಸ್​ ಕಾಲೇಜ್​ನಲ್ಲಿ ಶೇ.91ರಷ್ಟು ಅಂಕ ಗಳಿಸುವುದರೊಂದಿಗೆ ಪಿಯುಸಿ ಪೂರ್ಣಗೊಳಿಸಿದರು. 2013ರಲ್ಲಿ ಬೆಂಗಳೂರು ಮೆಡಿಕಲ್​ ಕಾಲೇಜ್​ನಲ್ಲಿ ಬಿಎಂಸಿ ಪದವಿ ಪಡೆದಿದ್ದಾರೆ.

    ಸರ್​ಎಂವಿ ಮತ್ತು ಪುನೀತ್​ “ಪೃಥ್ವಿ” ಸಿನಿಮಾ ಪ್ರೇರಣೆ

    ಮೈಸೂರು ದಿವಾನ್​ ಆಗಿದ್ದ ಸರ್​. ಎಂ ವಿಶ್ವೇಶ್ವರಯ್ಯ ಅವರ ರೀತಿಯಲ್ಲಿಯೇ ಸರ್ಕಾರದ ಸಿಎಸ್​ ಆಗಬೇಕೆಂಬ ಇಚ್ಛೆಯಿತ್ತು. ಇದಕ್ಕೆ ಶಾಲೆಯ ಶಿಕ್ಷಕರು ತಮ್ಮ ಹೊಗಳಿಕೆಯಿಂದ ಇಂಬು ನೀಡಿದ ಕಾರಣ ಯುಪಿಎಸ್​ಸಿ ಕಡೆಗೆ ಒಲವು ಬೆಳೆಯಿತು. ಇದಕ್ಕೆ ಪುಷ್ಠಿ ನೀಡುವಂತೆ 2011ರಲ್ಲಿ ಗೆಳೆಯರೊಂದಿಗೆ ಪುನೀತ್​ ರಾಜ್​ಕುಮಾರ್​ ಅವರ ಪೃಥ್ವಿ ಚಿತ್ರ ನೋಡಿದಾಗ ಐಎಎಸ್​ ಅಂದರೇ ಈ ರೀತಿ ಇರಬೇಕು ಎಂದು ನಿರ್ಧರಿಸಿದೆ. ಸರಿಯಾಗಿ 10 ವರ್ಷಕ್ಕೆ ಅಂದರೇ 2021ರಲ್ಲಿ ಬಳ್ಳಾರಿಗೆ ಎಸಿ ಆಗಿ ನೇಮಕವಾದೆ ಎಂದು ಡಾ.ಆಕಾಶ್​ ಅವರು ತಮ್ಮ ಸಂತಸದ ಕ್ಷಣಗಳನ್ನು ಹಂಚಿಂಕೊಂಡರು.

    ಮೆಡಿಕಲ್​ ಕೆಲಸ, ಸರ್ಕಾರದ ಸಹಾಯ

    ಓದಲು ಆರ್ಥಿಕ ಸಮಸ್ಯೆಯಿದ್ದ ಕಾರಣ ಮತ್ತು ಪದವಿ ಮುಗಿದ ನಂತರ ಸ್ವಂತ ದುಡಿಮೆಗಾಗಿ ಮೆಡಿಕಲ್​ ಆಫೀಸರ್​ ಆಗಿ ಕೆಲಸ ಮಾಡಿದ್ದೇನೆ ಎಂದು ಕಷ್ಟದ ದಿನಗಳನ್ನು ನೆನೆದ ಡಾ.ಆಕಾಶ್​, ಯುಪಿಎಸ್​ಸಿ ತರಬೇತಿಗಾಗಿ ಒಬಿಸಿ ಇಲಾಖೆ ನಡೆಸುವ ಪರೀಕ್ಷೆ ಪಾಸ್​ ಆಗಿದ್ದರಿಂದ ಕರ್ನಾಟಕ ಸರ್ಕಾರದ ನೆರವಿನಿಂದಾಗಿ ದೆಹಲಿಯ ಎಎಲ್​ಎಸ್​ನಲ್ಲಿ 9 ತಿಂಗಳು ಕೋಚಿಂಗ್​ ತೆಗೆದುಕೊಂಡೆ. ದೆಹಲಿ ಕೋಚಿಂಗ್​ ನಂತರವೂ ಬೆಂಗಳೂರಿನ ಕೋಚಿಂಗ್​ ಕ್ಲಾಸ್​ನಲ್ಲಿ ಉಪನ್ಯಾಸ ನೀಡಿದ್ದೇನೆ ಎಂದರು.

    ಪದವಿ ನಂತರ ಪರೀಕ್ಷೆ ತಯಾರಿ

    ಮೆಡಿಕಲ್​ ಕೋರ್ಸ್​ ಓದುವಾಗ ಬೇರೆ ಓದುವುದು ಸೂಕ್ತವಲ್ಲವಾದ್ದರಿಂದ. 2013ರ ನಂತರ ಯುಪಿಎಸ್​ಸಿ ಪರೀಕ್ಷೆಗೆ ತಯಾರಿ ನಡೆಸಿದೆ. ಪುಸ್ತಕ, ಮ್ಯಾಗಜಿನ್​ ಜತೆಗೆ ಇನ್​ಸೈಟ್​ ಮತ್ತು ಐಎಎಸ್​ ಬಾಬಾ ವೆಬ್​ಸೈಟ್​ ಪರಿಶೀಲಿಸುತ್ತಿದೆ ಎಂದ ಡಾ.ಆಕಾಶ್​, ಮೇನ್ಸ್​ ತಯಾರಿ ಹೇಗೆ ಮಾಡಬೇಕೆಂಬ ಪ್ರಶ್ನೆಗೆ? ಪ್ರೀಲಿಮ್ಸ್​ & ಮೇನ್ಸ್​ ಮಧ್ಯೆ 4 ತಿಂಗಳು ಸಮಯವಿರುತ್ತದೆ. ಒಟ್ಟು 1750 ಅಂಕಗಳ ಮುಖ್ಯ ಪರೀಕ್ಷೆ ಬರೆಯಲು ಹೆಚ್ಚಿನ ಅಭ್ಯಾಸ ಬೇಕೆ ಬೇಕು. ಓದಿನ ಜತೆಗೆ ಅತಿ ಹೆಚ್ಚು ಬರೆಯುವುದನ್ನು ರೂಢಿಸಿಕೊಳ್ಳಬೇಕು ಎಂದು ಉತ್ತರಿಸಿದರು.

    Success Story: ವೆಟರ್ನರಿ ವೈದ್ಯರಾಗಿದ್ದ ಡಾ.ರಾಮ್ ಪ್ರಸಾತ್ ಈಗ ಕರ್ನಾಟಕದಲ್ಲಿ ಐಎಎಸ್ ಆಫೀಸರ್!

    6ನೇ ಪ್ರಯತ್ನದಲ್ಲಿ ತೇರ್ಗಡೆ

    2013ರ ಮೊದಲ ಪ್ರಯತ್ನ ಹಾಗೂ 2ನೇ ಪ್ರಯತ್ನದಲ್ಲಿ ಪ್ರೀಲಿಮ್ಸ್​ ಸಹ ಪಾಸ್​ ಆಗಲಿಲ್ಲ. ನಂತರದ 3ಪ್ರಯತ್ನಗಳು ಯಶಸ್ವಿಯಾದರೂ ಐಎಎಸ್​ ಸಿಗದ ಕಾರಣ ಸಿಕ್ಕಿದ್ದನ್ನು ತ್ಯಜಿಸಿದೆ. 100ರೊಳಗೆ ರ್ಯಾಂಕ್​ ಇದ್ದರೆ ಮಾತ್ರ ಐಎಎಸ್​ ಹುದ್ದೆ ಅಲಂಕರಿಸಬಹುದೆಂದು ಮರಳಿ 2019ರಲ್ಲಿ ಇದು ಕೊನೆಯ ಪ್ರಯತ್ನವೆಂದು 6ನೇ ಬಾರಿ ಯುಪಿಎಸ್​ಸಿ ಬರೆದಾಗ ದೇಶಕ್ಕೆ 78ನೇ ರ‍್ಯಾಂಕ್ ​ ಪಡೆದೆ. ಇದಕ್ಕೂ ಮೊದಲು 2017ರಲ್ಲಿ 13ನೇ ರ‍್ಯಾಂಕ್ ಬರುವ ಮೂಲಕ ಕೆಪಿಎಸ್​ಸಿ ಕ್ಲಿಯರ್​ ಮಾಡಿ ತುಮಕೂರನಲ್ಲಿ ಪ್ರೊಬೇಷನರಿ ಪ್ರಾರಂಭಿಸಿದ್ದೆ ಎಂದು ಡಾ.ಆಕಾಶ್​ ಖುಷಿ ವ್ಯಕ್ತಪಡಿಸಿದರು.

    ಕನ್ನಡದಲ್ಲಿಯೂ ಸಂದರ್ಶನ ನೀಡಬಹುದು

    ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅಪಾರ ಜ್ಞಾನ ಮತ್ತು ಅನುಭವವುಳ್ಳ 5 ಜನ ಸಂದರ್ಶಕರ ಎದುರಿಗೆ ಕುಳಿತುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ವಿಷಯಗಳ ಕುರಿತು ಅಭ್ಯರ್ಥಿಯ ಅಭಿಪ್ರಾಯ, ಅನಿಸಿಕೆ ತಿಳಿದುಕೊಳ್ಳುತ್ತಾರೆ. ಕನ್ನಡದಲ್ಲಿಯೂ ಸಂದರ್ಶನ ನೀಡಬಹುದು. ಆದರೆ ನಮ್ಮಿಬ್ಬರ ನಡುವೆ ಭಾಷಾ ಅನುವಾದಕ ಇರುವುದರಿಂದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದು. ಹಾಗಾಗಿ ಇಂಗ್ಲೀಷ್​​ನಲ್ಲಿಯೇ ಸಂದರ್ಶನ ನೀಡಿದರೆ ಹೆಚ್ಚು ಉತ್ತಮ ಎಂದು ಸಂದರ್ಶನದಲ್ಲಿ 275ಕ್ಕೆ 204 ಅಂಕ ಪಡೆಯುವ ಮೂಲಕ 2019ರ ಬ್ಯಾಚ್​ನಲ್ಲಿ ಇಡೀ ದೇಶಕ್ಕೆ 2ನೇ ರ‍್ಯಾಂಕ್ ​ಪಡೆದುಕೊಂಡ ಡಾ.ಆಕಾಶ್​ ಸೂಚನೆ ನೀಡಿದರು.

    Success Story: ಕೋಚಿಂಗ್ ಹೋಗಲೇ ಇಲ್ಲೆ… ಆದ್ರೂ ಐಎಎಸ್ ಪಾಸ್; ಏನಿದರ‌ ಗುಟ್ಟು..?

    ವಿದ್ಯಾರ್ಥಿಗಳಿಗೆ ಸಲಹೆ

    ಪ್ರತಿ ವರ್ಷ ಕನಿಷ್ಠ 10 ಲಕ್ಷ ಅಭ್ಯರ್ಥಿಗಳು ಯುಪಿಎಸ್​ಸಿ ಪರೀಕ್ಷೆ ಕಟ್ಟುತ್ತಾರೆ. 10 ಲಕ್ಷ ಜನ ಮುಂದಿನ ವರ್ಷಕ್ಕೆ ತಯಾರಿ ನಡೆಸುತ್ತಿರುತ್ತಾರೆ. ನಮಗೆ ಒಟ್ಟು 20ಲಕ್ಷ ಸ್ಪರ್ಧಾರ್ಥಿಗಳೆಂದು ತಿಳಿದು ತಯಾರಿ ನಡೆಸಬೇಕು. 20ಲಕ್ಷದಲ್ಲಿ 180 ಅಭ್ಯರ್ಥಿಗಳಿಗೆ ಮಾತ್ರ ಐಎಎಸ್​ ಹುದ್ದೆ ಸಿಗುತ್ತದೆ. ಆದ್ದರಿಂದ ಕೇವಲ ಹಾರ್ಡ್​ ಆ್ಯಂಡ್​ ಸ್ಮಾರ್ಟ್​ ವರ್ಕ್​ ಮಾಡಿದರೆ ಸಾಲದು ತಪಸ್ಸಿನ ರೀತಿಯಲ್ಲಿ ಓದಲು ಸಿದ್ಧರಾಗಬೇಕು. ಓದುವ ಹಂತದಲ್ಲಿ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗುವ ಮನರಂಜನೆ ಹೊರತುಪಡಿಸಿ ಕ್ಷಣಿಕ ಸುಖಗಳನ್ನು ತ್ಯಜಿಸಬೇಕು ಎಂದು ಸಲಹೆ ನೀಡಿದ ಡಾ.ಆಕಾಶ್​, ಇಷ್ಟೆಲ್ಲಾ ಮಾಡಿದರೂ ಪಾಸ್​ ಆಗದಿದ್ದರೆ ಹೆಚ್ಚಿನ ತಪಸ್ಸು ಮಾಡಬೇಕು. ಒಟ್ಟಿನಲ್ಲಿ ಗುರಿ ಸಾಧಿಸುವುದೇ ನಮ್ಮ ಧ್ಯೇಯವಾಗಿರಬೇಕು ಎಂದರು.

    ವೃತ್ತಿ ಅನುಭವ

    2109ರ ಆಗಸ್ಟ್​ನಲ್ಲಿ ಡೆಹಾರಾಡೂನ್​ನ ಮಸೂರಿಯಲ್ಲಿ ವೃತ್ತಿ ತರಬೇತಿ ಹಾಗೂ ಕಲಬುರಗಿಯಲ್ಲಿ ಜಿಲ್ಲಾ ತರಬೇತಿಗೆ ಪಡೆದ ನಂತರ ಬಳ್ಳಾರಿಗೆ ಎಸಿಯಾಗಿ ನೇಮಕವಾದೆ. ಸ್ವಾತಂತ್ರ ಪಡೆದು ಇಷ್ಟು ವರ್ಷಗಳಾದರೂ ಭೂಕಂದಾಯ ದಾಖಲೆಗಳೇ ಇರದ ಸಂಡೂರಿನಲ್ಲಿ ಸೆಟಲ್ಮೆಂಟ್​ ಆದ 14 ಗ್ರಾಮಗಳ ಜನರಿಗೆ ಡಿಸಿ ಪವನ್​ಕುಮಾರ್​ ನೇತೃತ್ವದಲ್ಲಿ ಸಹಾಯ ಮಾಡಿರುವುದು ಸ್ಮರಣೀಯ ಕೆಲಸವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಅವರಿಗೆ ಸಹ ಪತ್ರ ದೊರೆಯಲಿವೆ. ಕಚೇರಿಯಲ್ಲಿ ಜನರು ತಾಳ್ಮೆಯಿಂದ ವರ್ತಿಸುತ್ತಾರೆ. ಕರ್ನಾಟಕದಲ್ಲಿ ಒಳ್ಳೆಯ ಕೆಲಸಗಳಿಗೆ ನಾಯಕರು ಸಹ ಸಹಾಯ ಮಾಡುತ್ತಾರೆ ಎಂದು ಡಾ.ಆಕಾಶ್​ ಸೇವಾ ಅನುಭವ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts