ಬೆಂಗಳೂರು: ಕರ್ನಾಟಕದ ನಂಬರ್ 1 ದಿನಪತ್ರಿಕೆ ವಿಜಯವಾಣಿಯು ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನಲ್ಲಿ ಬಹುನಿರೀಕ್ಷಿತ ಶೈಕ್ಷಣಿಕ ಮೇಳ “ಎಜುಕೇಶನ್ ಎಕ್ಸ್ಪೋ 2024” ಆಯೋಜಿಸುತ್ತಿದೆ.
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಈಗ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದೇ ರೀತಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ರಿಸಲ್ಟ್ ನಿರೀಕ್ಷೆಯಲ್ಲಿದ್ದಾರೆ. ಎಸ್ಎಸ್ಎಲ್ಸಿ ನಂತರ ಮುಂದೇನು? ಪಿಯುಸಿ ನಂತರ ಯಾವ ಕೋರ್ಸ್ ಆಯ್ದುಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು? ಇಂತಹ ಪ್ರಶ್ನೆಗಳು, ಗೊಂದಲಗಳು ಯುವ ವಿದ್ಯಾರ್ಥಿಗಳಲ್ಲಿ ಹಾಗೂ ಅವರ ಪೋಷಕರಲ್ಲಿ ಸಹಜವಾಗಿ ಮನೆ ಮಾಡಿರುತ್ತವೆ. ವಿಜಯವಾಣಿ ಆಯೋಜಿಸಿರುವ ಎಜುಕೇಶನ್ ಎಕ್ಸ್ಪೋ 2024ರಲ್ಲಿ ಇದಕ್ಕೆಲ್ಲ ನಿಶ್ಚಿತವಾಗಿಯೂ ಉತ್ತರ ಹಾಗೂ ಪರಿಹಾರಗಳು ದೊರೆಯಲಿವೆ.
ಬೆಂಗಳೂರಿನ ಬಸವನಗುಡಿಯ ಶಂಕರಪುರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬರುವ ಮೇ 18 ಮತ್ತು 19ರಂದು (ಶನಿವಾರ ಮತ್ತು ಭಾನುವಾರ) ಈ ಮೇಳ ಜರುಗಲಿದೆ. ವಿಜಯವಾಣಿಯು ಈ ಹಿಂದೆ 5 ಶೈಕ್ಷಣಿಕ ಮೇಳಗಳನ್ನು ಆಯೋಜಿಸಿದ್ದು, ಇದಕ್ಕೆ ತೀವ್ರ ಸ್ಪಂದನೆ ದೊರೆತಿದೆ. ಯುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ತುಂಬ ಉಪಯುಕ್ತವಾಗಿದೆ ಎಂಬ ಶ್ಲಾಘನೆ ಎಲ್ಲೆಡೆ ಕೇಳಿಬಂದಿದೆ. ಈಗ ವಿಜಯವಾಣಿ ಆಯೋಜಿಸುತ್ತಿರುವ ಈ ಶೈಕ್ಷಣಿಕ ಮೇಳವು 6ನೇಯದ್ದಾಗಿದೆ.
ಯುವ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಅನುವಾಗುವ ನಿಟ್ಟಿನಲ್ಲಿ ಅವರಿಗೆ ಸೂಕ್ತ ರೀತಿಯಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಮಾಹಿತಿ, ವಿವಿಧ ಕೋರ್ಸ್ಗಳ ಬಗೆಗೆ ಮಾರ್ಗದರ್ಶನ ಹಾಗೂ ಗೊಂದಲ-ಶಂಕೆಗಳನ್ನು ನಿವಾರಿಸುವ ಧ್ಯೇಯದೊಂದಿಗೆ ಈ ಎಕ್ಸ್ಪೋ ಆಯೋಜಿಸಲಾಗುತ್ತಿದೆ.
ವಿವಿಧ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ತಮ್ಮಲ್ಲಿ ಲಭ್ಯವಿರುವ ವಿವಿಧ ಕೋರ್ಸ್ಗಳ ಬಗೆಗೆ ಮಾಹಿತಿಯನ್ನು ಯುವ ವಿದ್ಯಾರ್ಥಿಗಳಿಗೆ ಒದಗಿಸಲಿದ್ದಾರೆ. ಇಂಜಿನಿಯರಿಂಗ್, ಮೆಡಿಕಲ್, ಡೆಂಟಲ್, ಎಂಬಿಎ, ಕಂಪ್ಯೂಟರ್ ಸೈನ್ಸ್, ಅನಿಮೇಶನ್, ಹೋಟೆಲ್ ಮ್ಯಾನೇಜ್ಮೆಂಟ್, ಆರ್ಕಿಟೆಕ್ಟರ್, ಸ್ಪೇಸ್ ಟೆಕ್ನಾಲಜಿ, ಚಾರ್ಟರ್ಡ್ ಅಕೌಂಟಂಟ್… ಹೀಗೆ ವಿವಿಧ ಶೈಕ್ಷಣಿಕ ವಿಭಾಗಗಳ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ತಜ್ಞರು ಈ ಎಕ್ಸ್ಪೋದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನವನ್ನು ನೀಡಲಿದ್ದಾರೆ.