ಬೆಂಗಳೂರು: ನಾಗವಾರ ಬಳಿ ರಸ್ತೆ ಮೇಲೆ ‘ನಮ್ಮ ಮೆಟ್ರೋ’ ಪಿಲ್ಲರ್ ಕುಸಿದು ದುರ್ಘಟನೆಯಲ್ಲಿ ತಾಯಿ-ಮಗು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಎಂಆರ್ಸಿಎಲ್ ಎಂಡಿ ಅಜುಂ ಪರ್ವೇಜ್, ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಕೂಡ ಘೋಷಿಸಿದ್ದಾರೆ.
ಇದನ್ನೂ ಓದಿ: ‘ನಮ್ಮ ಮೆಟ್ರೋ’ ಪಿಲ್ಲರ್ ದುರಂತ: ಮೃತರ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ ಘೋಷಣೆ
ಬೈಕ್ ಮೇಲೆ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದ ವೇಳೆ ಪಿಲ್ಲರ್ ಕುಸಿದು ಬಿದ್ದಿದೆ. ಆದರೆ ಇದರಲ್ಲಿ ತಂದೆ ಮತ್ತು ಮಗಳು ಬಚಾವಾಗಿ ಉಳಿದಿರುವುದೇ ಅದೃಷ್ಟದಿಂದ ಎಂದು ಹೇಳಬಹುದು.
ಲೋಹಿತ್ ಮತ್ತು ಕುಟುಂಬ, ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಾ ಇದ್ದರು. ಪ್ಯಾಷನ್ ಪ್ರೋ ಬೈಕಿನ ಮೇಲೆ ನಾಲ್ವರು ಪ್ರಯಾಣಿಸುತ್ತಿದ್ದರು. ಈ ಸಂದರ್ಭ, ಮಗಳನ್ನು ಬೈಕಿನ ಟ್ಯಾಂಕ್ ಮೇಲೆ ಲೋಹಿತ್ ಕೂರಿಸಿದ್ದ. ಹಿಂದಿನ ಸೀಟಿನಲ್ಲಿ ಮಡದಿ ಹಾಗೂ ಮಗನನ್ನು ಕೂರಿಸಿ ತಾನೇ ಬೈಕ್ ಚಲಾಯಿಸುತ್ತಿದ್ದ. ಹೀಗೆ ಪ್ಯಾಷನ್ ಪ್ರೋ ಬೈಕಿನ ಮೇಲೆ ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದರು.
ಇವರು ಪ್ರಯಾಣಿಸುತ್ತಾ ಪಿಲ್ಲರ್ ಬಳಿಯಿಂದ ಪಾಸ್ ಆಗಿದ್ದಾರೆ. ಹಾಗೆ ಹೋಗುವಾಗ ಬೈಕ್ ಹಿಂದಿನ ಸೀಟಿನ ಮೇಲೆ ಪಿಲ್ಲರ್ ಬಿದ್ದಿದೆ. ನೇರವಾಗಿ ಲೋಹಿತ್ ಮಗ ಮತ್ತು ಆತನ ಪತ್ನಿ ಮೇಲೆ ಪಿಲ್ಲರ್ ಬಿದ್ದಿದೆ. ಇದರಿಂದಾಗಿ ಬೈಕ್ ಒಮ್ಮಿಂದೊಮ್ಮೆಲೆ ಎಡಗಡೆಗೆ ಬಿದ್ದಿದೆ. ಈ ಸಂದರ್ಭ, ತಾಯಿ ಮತ್ತು ಮಗನಿಗೆ ಗಂಭೀರ ಗಾಯಗಳಾಗಿತ್ತು. ಬೈಕಿನ ಮುಂದೆ ಇದ್ದ ಲೋಹಿತ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಂದೆ ಮಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಗೋವಿಂದಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.