ಮುದ್ದೇಬಿಹಾಳ: ಮಠಾಧೀಶರು ಧರ್ಮವನ್ನು ಬೆಳೆಸುವುದರ ಜತೆಗೆ ಜನರನ್ನೂ ಬೆಳೆಸುತ್ತಾರೆ. ರಾಜಕಾರಣಿಗಳು ಜನರ ಸೇವೆ ಮಾಡುತ್ತಾರೆ. ನಿಸ್ವಾರ್ಥದಿಂದ ಜನಸೇವೆ ಮಾಡುವವರೇ ನಿಜವಾದ ಮಠಾಧೀಶರು, ರಾಜಕಾರಣಿಗಳು ಎನ್ನಿಸಿಕೊಳ್ಳುತ್ತಾರೆ ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ತಾಲೂಕಿನ ಯರಝರಿ ಗ್ರಾಮದ ಯಲ್ಲಾಲಿಂಗೇಶ್ವರ ಮಠದಲ್ಲಿ ನವರಾತ್ರೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾರ್ಥ ಸಾಧನೆಗೋಸ್ಕರ ರಾಜಕಾರಣಿಗಳು ಇರಬಾರದು. ನಿಸ್ವಾರ್ಥದಿಂದ ಜನಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಠಾಧೀಶರು, ರಾಜಕಾರಣಿಗಳ ನಡುವಿನ ಸಂಬಂಧ ಮಧುರವಾಗಿರಬೇಕು ಎಂದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಯರಝರಿ ಮಠದ ಮಲ್ಲಾರಲಿಂಗ ಮಹಾರಾಜರು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಕೆ. ಬಿರಾದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಸಿಪಿಐ ಆನಂದ ವಾಘಮೋಡೆ, ಜಿಪಂ ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಮುತ್ತಣ್ಣವರ, ಪಿಡಿಒ ವಿಜಯಾ ಮುದಗಲ್ಲ, ಗಣ್ಯರಾದ ಸಿದ್ದಪ್ಪ ಹುಲ್ಲೂರ, ನಾಗಪ್ಪ ರೂಢಗಿ, ಬಸವರಾಜ ಬಾಗೇವಾಡಿ, ಮಲ್ಲಿಕಾರ್ಜುನ ಗುರುವಿನ ಸರೂರ, ಬಸವರಾಜ ಹೊನವಾಡ ಇದ್ದರು.
ಮಲಕೇಂದ್ರಗೌಡ ಪಾಟೀಲ ಸ್ವಾಗತಿಸಿದರು. ಬಸವರಾಜ ಹಂಚಲಿ ಹಾಗೂ ಮಹಾಂತೇಶ ಪಟ್ಟಣದ ನಿರೂಪಿಸಿದರು. ಮುತ್ತು ಕಡಕೋಳ ವಂದಿಸಿದರು.