ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಉನ್ನತ ಕಮಾಂಡರ್, ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದ ಉಗ್ರ ರಿಯಾಜ್ ನಾಯ್ಕೂ ಭಾರತೀಯ ಸೇನೆಯ ಬಲೆಗೆ ಬಿದ್ದಿದ್ದಾನೆ.
ದಕ್ಷಿಣ ಕಾಶ್ಮೀರದ ಆವಂತಿಪುರದ ಬೀಗ್ಪೊರಾದಲ್ಲಿರುವ ರಿಯಾಜ್ನ ಗ್ರಾಮದಲ್ಲಿಯೇ ಪೊಲೀಸರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಮಂಗಳವಾರ ತಡರಾತ್ರಿ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಈ ವೇಳೆ ರಿಯಾಜ್ ಸಿಕ್ಕಿಬಿದ್ದಿದ್ದಾನೆ.
ಜಮ್ಮು-ಕಾಶ್ಮೀರ ಪೊಲೀಸರು, 55 ರಾಷ್ಟ್ರೀಯ ರೈಫಲ್ಸ್ ಟೀಂ ಮತ್ತು ಸಿಆರ್ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ರಿಯಾಜ್ ತನ್ನ ಊರಲ್ಲೇ ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಸಿಕ್ಕಿದ್ದರಿಂದಲೇ ಆತನನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮಾಡಲಾಗಿತ್ತು. ರಿಯಾಜ್ ಜತೆ ಇನ್ನೂ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಂದ ಜನರನ್ನು ರಕ್ಷಿಸಿ ಹುತಾತ್ಮರಾದ ಐವರು ಭಾರತೀಯ ಯೋಧರು
ಸದ್ಯ ಸ್ಥಳದಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಲಾಗಿದ್ದು, ಮೊಬೈಲ್, ಇಂಟರ್ನೆಟ್ ಸೇವೆಗಳನ್ನು ಬಂದ್ ಮಾಡಲಾಗಿದೆ.
ಈ ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ಬಗ್ಗೆ ಮಾಹಿತಿ ಇಲ್ಲಿದೆ…
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಹಳೇ ಮುಖಂಡರಲ್ಲಿ ಒಬ್ಬ ರಿಯಾಜ್ ನಾಯ್ಕೂ.
ರಿಯಾಜ್ ಎ++ (ಉನ್ನತ ದರ್ಜೆ) ಕೆಟೆಗರಿಯ ಉಗ್ರ. ಈತನ ಸುಳಿವು ನೀಡಿದವರಿಗೆ 12 ಲಕ್ಷ ರೂ.ನೀಡುವುದಾಗಿ ಈ ಹಿಂದೆಯೇ ಘೋಷಿಸಲಾಗಿತ್ತು.
ಆವಂತಿಪುರ ಜಿಲ್ಲೆಯ ರಿಯಾಜ್ ನಾಯ್ಕೂ ಅನೇಕ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ.
ಇದನ್ನೂ ಓದಿ: ಉಗ್ರರೊಂದಿಗಿನ ಕಾದಾಟದಲ್ಲಿ ಹುತಾತ್ಮರಾದ ಪತಿ ಮೃತದೇಹದ ಮುಂದೆ ಪತ್ನಿಯ ಶೋಕ: ಭಾವುಕರಾದ ನೆಟ್ಟಿಗರು
2016ರ ಜನವರಿಯಲ್ಲಿ ಮೊದಲ ಬಾರಿಗೆ ಈತ ಮುನ್ನೆಲೆಗೆ ಬಂದಿದ್ದಾನೆ. ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದ ಉಗ್ರ ಶರೀಕ್ ಅಹ್ಮದ್ ಭಟ್ನ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದ. ಅಹ್ಮದ್ ಮೃತದೇಹವನ್ನು ಹೊತ್ತು ತರುವಾಗ ನಾಯ್ಕೂ ಹಲವು ಬಾರಿ ಗಾಳಿಯಲ್ಲಿ ಗುಂಡು ಹೊಡೆದಿದ್ದ. ಈ ಮೂಲಕ ಮೃತ ಉಗ್ರನಿಗೆ ಗೌರವ ಸಲ್ಲಿಸಿದ್ದ.
2017ರಲ್ಲಿ ರಿಯಾಜ್ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದ. ಅದರಲ್ಲಿ ಕಾಶ್ಮೀರಿ ಪಂಡಿತರನ್ನು ವಾಪಸ್ ಬರುವಂತೆ ಕೇಳಿಕೊಂಡಿದ್ದ. ಅಲ್ಲದೆ, ಉಗ್ರರು ಕಾಶ್ಮೀರಿ ಪಂಡಿತರಿಗೆ ಶತ್ರುಗಳಲ್ಲ ಎಂದು ಹೇಳಿದ್ದ. (ಏಜೆನ್ಸೀಸ್)
ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಗಾಯ