ಬೆಂಗಳೂರು: ವಿಧಾನಸಭೆ ಚುನಾವಣೆ ಕಣದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಅಬ್ಬರವಿರಲಿದೆ. ಒಂದೇ ದಿನ ಮೂರು ಕಡೆಗಳಲ್ಲಿ ಸಾರ್ವಜನಿಕ ಸಭೆ ಹಾಗೂ ರಾಜಧಾನಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಇಂದು ಬಸವನಾಡು ಬೀದರ್ ನಿಂದಲ್ಲೇ ರಾಜ್ಯದ ಸಾರ್ವತ್ರಿಕ ಚುನಾವಣಾ ಅಖಾಡಕ್ಕೆ ನಮೋ ಎಂಟ್ರಿಯಾಗಿದ್ದು ಮೊದಲ ಹಂತವಾಗಿ ಇಂದು ಬಸವಣ್ಣನ ಕರ್ಮ ಭೂಮಿಯಿಂದಲೇ ಮೋದಿ ಕೇಸರಿ ಕಹಳೆಯನ್ನು ಮೊಳಗಿಸಲಿದ್ದಾರೆ.
ಇಂದು ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ಗೆ ಮೋದಿ ಪ್ರಯಾಣ ಬೆಳೆಸಿದ್ದು 10:20ಕ್ಕೆ ಬೀದರ್ ಏರಬೇಸ್ ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಹೆಲಿಪ್ಯಾಡ್ಗೆ ಮೋದಿ ಪ್ರಯಾಣಿಸಿದ್ದಾರೆ.
ಪ್ರಭಾವದ ಲೆಕ್ಕಾಚಾರ: ಮೋದಿಯವರ ಸಮಾವೇಶಗಳು ಸ್ಥಳ, ಸೀಟುಗಳ ಗಳಿಕೆ ಕೇಂದ್ರಿತವಾಗಿರುವುದಿಲ್ಲ. ರಾಜ್ಯದ ದೃಷ್ಟಿ, ಸುತ್ತಮುತ್ತಲ 9 ವಿಧಾನಸಭೆ ಕ್ಷೇತ್ರಗಳ ಮೇಲೆ ಪ್ರಭಾವಬೀರುವ ಲೆಕ್ಕಾಚಾರವಿದೆ. ಇದಕ್ಕೆ ಪೂರಕವಾಗಿ ಮೂರು ಪ್ರಚಾರ ಸಭೆಗಳ ವೇದಿಕೆಯನ್ನು ಮೋದಿ ಜತೆಗೆ ಈ ಕ್ಷೇತ್ರಗಳ ಅಭ್ಯರ್ಥಿಗಳು ಹಂಚಿಕೊಳ್ಳಲಿದ್ದು, ಆಸುಪಾಸಿನ ನಾಲ್ಕು ಕ್ಷೇತ್ರಗಳ ಜನರು ಭಾಗಿಯಾಗಲಿದ್ದಾರೆ.
ಬಿಸಿಲ ಬೇಗೆಯಿರುವ ಕಾರಣ 60-80 ಕಿ.ಮೀ. ವ್ಯಾಪ್ತಿಯೊಳಗಿನ ಜನರು, ಕಾರ್ಯಕರ್ತರು ಸೇರುವಂತೆ ನೋಡಿಕೊಳ್ಳಲಾಗುತ್ತಿದ್ದು, ಮೂರು ಸಭೆಗಳಿಗೆ ತಲಾ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಂದೂವರೆ ಲಕ್ಷ ಜನರ ನಿರೀಕ್ಷೆ: ರಾಜಧಾನಿಯಲ್ಲಿ ಸಂಜೆ ಮೋದಿಯವರ ರೋಡ್ ಶೋ ನಡೆಯಲಿದ್ದು, ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್ನಿಂದ ಸುಮನಹಳ್ಳಿಯವರೆಗೆ ನಾಲ್ಕೂ ಮುಕ್ಕಾಲು ಕಿ.ಮೀ. ದೂರದವರೆಗೆ ರೋಡ್ ಶೋಗೆ ಪ್ಲಾ್ಯನ್ ಮಾಡಲಾಗಿದೆ. ಮೋದಿಯನ್ನು ಸ್ವಾಗತಿಸಲು 450 ಬ್ಲಾಕ್ಗಳನ್ನು ರಚಿಸಲಾಗಿದೆ. ಕಾರ್ಯಕರ್ತರು, ಬೆಂಬಲಿಗರು ಸೇರಿ ಒಂದೂವರೆ ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ಯಲಹಂಕ-ನಾಲ್ಕು ವಾರ್ಡ್, ಯಶವಂತಪುರ- 15, ದಾಸರಹಳ್ಳಿ, ರಾಜರಾಜೇಶ್ವರಿ ನಗರ ತಲಾ ಆರು, ಬ್ಯಾಟರಾಯನಪುರ ಏಳು, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಹೆಬ್ಬಾಳದ ತಲಾ ಮೂರು ಮತ್ತು ಪುಲಕೇಶಿನಗರ ಕ್ಷೇತ್ರದ ಒಂದು ವಾರ್ಡ್ನ ಜನರು ಪಾಲ್ಗೊಳ್ಳಲಿದ್ದಾರೆ.
ಎಲ್ಲೆಲ್ಲಿ ಪ್ರಚಾರ
* ಬೆಳಗ್ಗೆ 11: ಹುಮನಾಬಾದ್
* ಮಧ್ಯಾಹ್ನ 12 ವಿಜಯಪುರ
* ಮಧ್ಯಾಹ್ನ: 2 ಗಂಟೆಗೆ ಕುಡಚಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ.
* ಸಂಜೆ 3.30: ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ರೋಡ್ ಶೋ
* ರಾಜಭವನದಲ್ಲಿ ವಾಸ್ತವ್ಯ.