ನವದೆಹಲಿ: ಗರ್ಲ್ಫ್ರೆಂಡ್ ಜೊತೆ ಸಾರ್ವಜನಿಕವಾಗಿ ಕಿತ್ತಾಡಿಕೊಂಡ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್ಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಮುಂಬರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಕ್ಲಾರ್ಕ್ ಅವರ ಕಾಮೆಂಟರಿ ಒಪ್ಪಂದವನ್ನು ಬಿಸಿಸಿಐ ಮುರಿದುಕೊಂಡಿದೆ.
ಕಳೆದ ವಾರ ನೂಸಾದ ಕ್ವೀನ್ಸ್ಲ್ಯಾಂಡ್ನಲ್ಲಿ ಮೈಕೆಲ್ ಕ್ಲಾರ್ಕ್ ಹಾಲಿಡೇ ಮೂಡಿನದಲ್ಲಿದ್ದರು. ಈ ವೇಳೆ ಮಾಜಿ ಪ್ರೇಯಸಿ ಪಿಪ್ ಎಡ್ವರ್ಡ್ ಜೊತೆ ಕ್ಲಾರ್ಕ್ ಇರುವುದನ್ನು ಹಾಲಿ ಪ್ರೇಯಸಿ ಜೇಡ್ ಯಾರ್ಬ್ರೋ ರೆಡ್ಹ್ಯಾಂಡ್ ಆಗಿ ಹಿಡಿದಿದ್ದರು. ಬಳಿಕ ಎಲ್ಲರ ಮುಂದೆಯೇ ಕ್ಲಾರ್ಕ್ ಕೆನ್ನೆಗೆ ಜೇಡ್ ಯಾರ್ಬ್ರೋ ಬಾರಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಬಿಸಿಸಿಐ ಒಪ್ಪಂದವನ್ನು ಮುರಿದುಕೊಂಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯು ನಾಲ್ಕು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡಿದೆ. ಇದೀಗ ಕ್ಲಾರ್ಕ್ ಅವರನ್ನು ಕಾಮೆಂಟರಿ ಒಪ್ಪಂದದಿಂದ ತೆಗೆದುಹಾಕಿರುವ ಬಿಸಿಸಿಐ, ಆ ಜಾಗಕ್ಕೆ ಅನೇಕ ಮಾಜಿ ಆಸ್ಟ್ರೇಲಿಯಾ ಆಟಗಾರರನ್ನು ನೇಮಿಸಲು ಮುಂದಾಗಿದೆ. ಮಾರ್ಕ್ ವಾಘ್ ಅವರು ನಾಗ್ಪುರ ಮತ್ತು ನವದೆಹಲಿಯಲ್ಲಿ ನಡೆಯಲಿರುವ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಾಮೆಂಟರಿ ತಂಡದ ಭಾಗವಾಗಲಿದ್ದಾರೆ.
ಧರ್ಮಶಾಲಾ ಮತ್ತು ಅಹಮದಾಬಾದ್ನಲ್ಲಿ ನಡೆಯಲಿರುವ ಕೊನೆಯ ಎರಡು ಪಂದ್ಯಗಳಲ್ಲಿ ಆಸಿಸ್ನ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕಾಮೆಂಟರಿ ಮಾಡಲಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮಿಚೆಲ್ ಜಾನ್ಸನ್ ಅವರಿಗೆ ಆ್ಯರೂನ್ ಫಿಂಚ್ ಅವರು ಸಾಥ್ ನೀಡಲಿದ್ದಾರೆ. ಇಷ್ಟೇ ಅಲ್ಲದೆ, ಬಿಸಿಸಿಐ, ರಿಕಿ ಪಾಂಟಿಂಗ್, ಮೈಕ್ ಹಸ್ಸಿ, ಸೈಮನ್ ಕ್ಯಾಟಿಚ್ ಮತ್ತು ಬ್ರಾಡ್ ಹ್ಯಾಡಿನ್ ಅವರಂತಹ ಹಲವಾರು ಮಾಜಿ ಆಸ್ಟ್ರೇಲಿಯಾದ ಕ್ರಿಕೆಟಿಗರೊಂದಿಗೆ ಸಂಪರ್ಕದಲ್ಲಿದೆ ಎಂದು ವರದಿಯಾಗಿದೆ.
ಅಂದಹಾಗೆ ಕಳೆದ ವಾರ ವೈರಲ್ ಆದ ವಿಡಿಯೋದಲ್ಲಿ ಮೈಕೆಲ್ ಕ್ಲಾರ್ಕ್ ಅವರು ಮೇಲಿನ ಅಂಗಿ ಇಲ್ಲದೆ, ಕೇವಲ ಶಾರ್ಟ್ಸ್ನಲ್ಲಿ ಕೂಗುತ್ತಾ ಬರುತ್ತಿರುವುದು ಮತ್ತು ಅವರ ಪ್ರೇಯಸಿ ಜೇಡ್ ಯಾರ್ಬ್ರೋ ಅವರು ಕ್ಲಾರ್ಕ್ ಕೆನ್ನೆಗೆ ಬಾರಿಸಿರುವ ದೃಶ್ಯವಿತ್ತು. ಮಾಜಿ ಪ್ರೇಯಸಿ ಪಿಪ್ ಎಡ್ವರ್ಡ್ ಜೊತೆ ಕ್ಲಾರ್ಕ್ ಸಿಕ್ಕಿಬಿದ್ದಿದ್ದೇ ಹಾಲಿ ಪ್ರೇಯಸಿಯ ಕಪಾಳಮೋಕ್ಷಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಘಟನೆಯ ಬಳಿಕ ಕ್ಲಾರ್ಕ್ ಅವರು ತನ್ನ ವರ್ತನೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನಲ್ಲಿ ಕಾಮೆಂಟರಿ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾ ತಂಡದ ಭಾರತದ ಪ್ರವಾಸದ ದಿನವೇ ಪಿಎಸ್ಎಲ್ ಟೂರ್ನಿ ನಡೆಯಲಿದೆ.
ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಪಂದ್ಯಗಳು ಫೆ. 9ರಿಂದ ಆರಂಭವಾಗಲಿದೆ. ಆಸಿಸ್ ಆಟಗಾರರು ಮುಂದಿನ ವಾರ ಬೆಂಗಳೂರಿಗೆ ಬಂದಿಳಿಯಲಿದೆ. (ಏಜೆನ್ಸೀಸ್)
ಮಾಜಿ ಪ್ರೇಯಸಿ ಜತೆ ಸಿಕ್ಕಿಬಿದ್ದ ಮೈಕೆಲ್ ಕ್ಲಾರ್ಕ್ಗೆ ಕಪಾಳಮೋಕ್ಷ ಮಾಡಿದ ಹಾಲಿ ಪ್ರೇಯಸಿ! ವಿಡಿಯೋ ವೈರಲ್
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ದರ್ಪ ಮೆರೆದ ತುಮಕೂರು ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷೆ
ಮಗನ ಸಾವಿನ ಬಳಿಕ 28 ವರ್ಷದ ಸೊಸೆಯನ್ನೇ ಮದುವೆಯಾದ 70 ವರ್ಷದ ಮಾವ! ನೆಟ್ಟಿಗರಿಂದ ಭಾರೀ ಟೀಕೆ