ನವದೆಹಲಿ: ಕೊನೇ ಕ್ಷಣದಲ್ಲಿ ಸರ್ಕಾರದ ಮನಸ್ಸು ಬದಲಾಗದ ಹೊರತು ಅನ್ಲಾಕ್ 3.0ಯಲ್ಲೂ ಶಾಲೆ-ಕಾಲೇಜು, ಮೆಟ್ರೋ ರೈಲು ಸಂಚಾರ ಪುನರಾರಂಭಗೊಳ್ಳುವುದು ಅನುಮಾನ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಈ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಚರ್ಚೆಯ ಭಾಗವಾಗಿರುವ ಸರ್ಕಾರಿ ಅಧಿಕಾರಿಗಳು ಈ ವಿಷಯವನ್ನು ತಿಳಿಸಿದ್ದಾರೆ.
ಅನ್ಲಾಕ್ 2.0 ಮುಗಿಯಲು ಇನ್ನೂ ಐದು ದಿನಗಳು ಬಾಕಿ ಇವೆ. ಆದರೂ ಈಗಾಗಲೆ ಅನ್ಲಾಕ್ 3.0 ಕುರಿತು ಚರ್ಚೆಗಳು ಆರಂಭವಾಗಿವೆ. ಈ ಹಂತದಲ್ಲಿ ಶಾಲೆ-ಕಾಲೇಜು ತೆರೆಯಲು ಅನುಮತಿ ನೀಡಲಾಗುತ್ತದಾ… ಮೆಟ್ರೋ ರೈಲು ಸಂಚಾರ ಪುನರಾರಂಭಕ್ಕೆ ಹಸಿರುನಿಶಾನೆ ದೊರೆಯುತ್ತಾ… ಜಿಮ್ ಮತ್ತು ಈಜುಕೊಳಗಳು ಬಾಗಿಲು ತೆರೆಯುತ್ತವಾ ಎಂಬುದು ಚರ್ಚೆಯ ಪ್ರಮುಖ ಅಂಶಗಳಾಗಿವೆ.
ರಾಷ್ಟ್ರದಲ್ಲಿ ಕೋವಿಡ್-19 ಪಿಡುಗು ಜೋರಾಗುತ್ತಿರುವಂತೆ ಕೇಂದ್ರ ಸರ್ಕಾರ ಮಾರ್ಚ್ 25ರಿಂದ ಆರಂಭವಾಗಿ ಮೇ 31ರವರೆಗೆ 68 ದಿನ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಗೊಳಿಸಿತ್ತು. ಇದಾದ ನಂತರ ಜೂನ್ ಮತ್ತು ಜುಲೈನಲ್ಲಿ ಕ್ರಮವಾಗಿ ಅನ್ಲಾಕ್ 1.0 ಮತ್ತು ಅನ್ಲಾಕ್ 2.0 ಎಂಬ ಹೆಸರಿನಲ್ಲಿ ಸರ್ಕಾರ ಲಾಕ್ಡೌನ್ ಅನ್ನು ಸಡಿಲಿಸಿತ್ತು. ಈ ಅವಧಿಯಲ್ಲಿ ಸಾಕಷ್ಟು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಆರ್ಥಿಕತೆ ಪುನರಾರಂಭಕ್ಕೆ ಒತ್ತುನೀಡುವ ಜತೆಗೆ ದೇಶಾದ್ಯಂತ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡುವುದು ಇದರ ಉದ್ದೇಶವಾಗಿತ್ತು.
ಇದನ್ನೂ ಓದಿ: ರೋಗ ಲಕ್ಷಣಗಳಿಲ್ಲದಿದ್ರೂ ಸಚಿವ ಆನಂದ್ ಸಿಂಗ್ಗೆ ಕರೊನಾ ಸೋಂಕು ದೃಢ
ಅನ್ಲಾಕ್ 3.0 ಅವಧಿಯಲ್ಲಿ ಶಾಲೆ-ಕಾಲೇಜು ಪುನರಾರಂಭಿಸುವ ಕುರಿತು ರಾಜ್ಯ ಸರ್ಕಾರಗಳು ಮತ್ತು ಇದಕ್ಕೆ ಸಂಬಂಧಪಟ್ಟವರ ಜತೆಗೆ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾತುಕತೆ ನಡೆಸಿದರು. ಶಾಲಾ ಶಿಕ್ಷಣ ಕಾರ್ಯದರ್ಶಿ ಅನಿತಾ ಕರ್ವಾಲ್ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಯಲ್ಲಿ ಶಾಲೆ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳು, ಆನ್ಲೈನ್ ಅಥವಾ ಡಿಜಿಟಲ್ ಶಿಕ್ಷಣ ಒದಗಿಸುವ ಕುರಿತು ಚರ್ಚಿಸಲಾಯಿತು. ಈ ಕುರಿತು ಅಭಿಪ್ರಾಯ ಸಂಗ್ರಹಿಸಲು ಪಾಲಕರ ಜತೆ ಮಾತುಕತೆ ನಡೆಸಿದಾಗ ಬಹುತೇಕ ಪಾಲಕರು ಕೋವಿಡ್-19 ಲಸಿಕೆ ಸಿದ್ಧವಾಗದ ಹೊರತು ಶಾಲೆ-ಕಾಲೇಜು ತೆರೆಯುವುದು ಬೇಡ ಎಂದು ಹೇಳಿದ್ದಾಗಿ ಸಚಿವರು ಸಭೆಗೆ ತಿಳಿಸಿದರು ಎನ್ನಲಾಗಿದೆ.
ಆದಷ್ಟು ಬೇಗ ಸಹಜಸ್ಥಿತಿಗೆ ಮರಳುವಂತೆ ಮಾಡಲು ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಸಲಹೆ ಕೂಡ ಸರ್ಕಾರದ ಮಟ್ಟದ ಸಭೆಯಲ್ಲಿ ಕೇಳಿಬಂದಿತು. ಆದರೆ, ಈ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಂಚರಿಸುವುದರಿಂದ ಸೋಂಕು ತುಂಬಾ ವೇಗವಾಗಿ ಹರಡುವ ಅಪಾಯ ಇರುತ್ತದೆ ಎಂಬ ಕಾರಣಕ್ಕೆ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ಮಾಡಿಕೊಡದಿರಲು ನಿರ್ಧರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಗಿಲ್ ವಿಜಯೋತ್ಸವಕ್ಕೆ 21 ವರ್ಷ: ಕಳಚಿ ಬೀಳುವಂತಿತ್ತು ಗಾಯಗೊಂಡ ಕಾಲು