ಹಾಸನ: ಒಬ್ಬ ಸೋದರ ಪರಲೋಕಕ್ಕೆ ತೆರಳಿದ್ದರೆ, ಮತ್ತೊಬ್ಬ ಜೈಲಿನ ಹಾದಿ ಹಿಡಿದಿರುವ ವಿಪರ್ಯಾಸದ ಪ್ರಸಂಗ ಹಾಸನದಲ್ಲಿ ನಡೆದಿದೆ. ಆಸ್ತಿಯಲ್ಲಿ ಪಾಲು ನೀಡಬೇಕಾಗುವುದೆಂದು ಅಣ್ಣನೇ ತಮ್ಮನ ಕತ್ತು ಸೀಳಿ ಕೊಂದಿರುವ ಅಮಾನವೀಯ ಘಟನೆ ನಡೆದಿದೆ. ಕೃತ್ಯ ಬೆಳಕಿಗೆ ಬಂದ 24 ಗಂಟೆಗಳಲ್ಲೇ ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.
ಗುರುವಾರ ಬೆಳಿಗ್ಗೆ ಅರಕಲಗೂಡು ತಾಲೂಕಿನ ನೆಲಮನೆ ಹೊನ್ನವಳ್ಳಿ ಗ್ರಾಮದಲ್ಲಿ 30 ವರ್ಷದ ಜಲೇಂದ್ರನ ಶವ ಸಿಕ್ಕಿತ್ತು. ಶ್ವಾನದಳ ಮತ್ತು ಫೊರೆನ್ಸಿಕ್ ಸಿಬ್ಬಂದಿಯ ಸಹಾಯದಿಂದ ತನಿಖೆ ನಡೆಸಿದ ಪೊಲೀಸರು, ಈ ಕೊಲೆಯನ್ನು ಮೃತ ಜಲೇಂದ್ರನ ಅಣ್ಣ ಮಹೇಶನೇ ಮಾಡಿದ್ದಾನೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆರೋಪಿ ಮಹೇಶ್, ಆಸ್ತಿಗಾಗಿ ತನ್ನ ತಮ್ಮ ಜಲೇಂದ್ರನನ್ನು ಪಾನಮತ್ತಗೊಳಿಸಿ, ನಂತರ ಹೊಡೆದು ಕತ್ತು ಕೊಯ್ದು ಸಾಯಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.