ಭೂಪಾಲ್: ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ರೈಲಿನಲ್ಲಿ ಮೂತ್ರ ವಿಸರ್ಜನೆಗೆ ಹೋದ ವ್ಯಕ್ತಿ ಒಟ್ಟು 6000ರೂ.ಕಳೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದಿದೆ.
ಇದನ್ನೂ ಓದಿ: ಜಸ್ಟ ಬಚಾವ್: ತನ್ನ ಪ್ರಾಣವನ್ನು ಲೆಕ್ಕಿಸದೇ ಮಗುವಿನ ಜೀವವನ್ನು ಉಳಿಸಿದ ತಾಯಿ
ಸಿಂಗ್ರೌಲಿ ಬಳಿಯ ಬೈದಾನ್ ನಿವಾಸಿಯಾಗಿರುವ ಅಬ್ದುಲ್ ಖಾದಿರ್(42) ಹೈದರಾಬಾದ್ನ ಬೇಗಂ ಬಜಾರ್ನಲ್ಲಿ ಹಣ್ಣಿನ ಅಂಗಡಿಯನ್ನು ಹೊಂದಿದ್ದಾನೆ. ಅಲ್ಲದೇ ಸಿಂಗ್ರೌಲಿಯಲ್ಲಿಯೂ ಕೂಡ ಡ್ರೈ ಫ್ರೂಟ್ಸ್ ಅಂಗಡಿ ಇದೆ. ಜುಲೈ 14ರಂದು ಖಾದಿರ್ ತನ್ನ ಪತ್ನಿ ಮತ್ತು 8 ವರ್ಷದ ಮಗನೊಂದಿಗೆ ರೈಲಿನಲ್ಲಿ ಹೈದರಾಬಾದ್ನಿಂದ ಸಿಂಗ್ರೌಲಿಗೆ ಹೊರಟಿದ್ದ.
ಈ ವೇಳೆ ಸಿಂಗ್ರೌಲಿ ತಲುಪಲು ಖಾದಿರ್ ಮತ್ತು ಆತನ ಕುಟುಂಬ ಟ್ರೇನ್ ಬದಲಾಯಿಸಲು ಭೂಪಾಲ್ನಲ್ಲಿ ಇಳಿದುಕೊಂಡಿದ್ದರು. ಎರಡು ಗಂಟೆಗಳ ರೈಲಿಗಾಗಿ ಕಾದಿದ್ದ ಖಾದಿರ್ಗೆ ಮೂತ್ರ ವಿಸರ್ಜನೆ ಮಾಡಬೇಕೆಂದು ಯೋಚಿಸಿ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಏರಿದ್ದಾನೆ. ಈತ ಬಾತ್ರೂಮ್ಗೆ ಹೋದ ಕೂಡಲೇ ರೈಲು ತನ್ನ ನಿಗದಿತ ವೇಳಾಪಟ್ಟಿಯಂತೆ ಚಲಿಸಲು ಆರಂಭಿಸಿದೆ.
ಖಾದಿರ್ ಗಾಬರಿಗೊಂಡು ಬಾತ್ ರೂಂನಿಂದ ಹೊರಬಂದ ತಕ್ಷಣ ರೈಲಿನ ಗೇಟ್ ಲಾಕ್ ಆಗಿರುವುದು ಗಮನಿಸಿದ್ದು, ತೆಗೆಯಲು ಯತ್ನಸಿದ್ದಾನೆ. ಆದರೆ ವಂದೇ ಭಾರತ್ನ ಗೇಟ್ ಸ್ವಯಂಚಾಲಿತವಾಗಿ ಲಾಕ್ ಆಗಿದ್ದರಿಂದ ಖಾದರ್ಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಕೂಡಲೇ ಖಾದಿರ್ ಬೇರೆ ಬೇರೆ ಬೋಗಿಗಳಲ್ಲಿದ್ದ ಮೂವರು ಟಿಟಿಗಳು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷ ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಕೇಳಿ ರೈಲನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ.
ಇದನ್ನೂ ಓದಿ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು 15 ಕಿ.ಮೀ ಕಾಲ್ನಡಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು!
ಆದರೆ ರೈಲು ಚಾಲಕ ಮಾತ್ರ ಗೇಟ್ ತೆರೆಯಬಹುದು ಎಂದು ಅವರು ಆತನಿಗೆ ಹೇಳಿದ್ದಾರೆ. ಕೊನೆಗೆ ಆತ ಚಾಲಕನ ಬಳಿಗೆ ಹೋಗಲು ಯತ್ನಿಸಿದಾಗ ಆತನನ್ನು ತಡೆದು ನಿಲ್ಲಿಸಲಾಗಿದೆ. ಆದರೆ ಟಿಟಿ ಖಾದಿರ್ಗೆ ಭೂಪಾಲ್ನಿಂದ ಉಜ್ಜಯಿನಿಗೆ 1020ರೂ.(ದಂಡ ಸಹಿತ) ಟಿಕೆಟ್ನ್ನು ನೀಡಿದ್ದಾರೆ. ಇದಾದ ಬಳಿಕ ಖಾದಿರ್ ಉಜ್ಜಯಿನಿಯಿಂದ ಭೋಪಾಲ್ಗೆ 750 ರೂಪಾಯಿ ಖರ್ಚು, ಹಾಗೂ ಇತರೆಗಾಗಿ 30 ರೂ. ಖರ್ಚು ಮಾಡಿಕೊಂಡು ಮತ್ತೇ ಭೂಪಾಲ್ ರೈಲು ನಿಲ್ದಾಣ ತಲುಪಿದ್ದಾನೆ.
ಖಾದಿರ್ ಒಮ್ಮಿಂದೊಮ್ಮೇಲೆ ನಾಪತ್ತೆಯಾಗಿದ್ದ ಕಾರಣ ಆತನ ಕುಟುಂಬಸ್ಥರು ಕೂಡ ಸಿಂಗ್ರೌಲಿಗೆ ಹೋಗದೇ ಅಲ್ಲಿಯೇ ಕುಳಿತಿದ್ದು, ಹೊರಡಬೇಕಾಗಿದ್ದ ರೈಲನ್ನು ಸಹ ತಪ್ಪಿಸಿಕೊಂಡಿದ್ದರು. ಇದರಿಂದಾಗಿ ದಕ್ಷಿಣ್ ಎಕ್ಸ್ಪ್ರೆಸ್ನಲ್ಲಿ ಬುಕ್ ಮಾಡಲಾಗಿದ್ದ 4,000 ರೂಪಾಯಿ ಮೌಲ್ಯದ ಟಿಕೆಟ್ಗಳನ್ನು ಬಳಸಲು ಖಾದಿರ್ಗೆ ಸಾಧ್ಯವಾಗಲಿಲ್ಲ. ಈ ಮೂಲಕ ಖಾದಿರ್ ತನ್ನ ಒಂದು ತಪ್ಪಿನಿಂದ 6,000 ರೂ.ಹಣವನ್ನು ಕಳೆದುಕೊಂಡಿದ್ದಾನೆ.(ಏಜೆನ್ಸೀಸ್)