ಚಿಕ್ಕೋಡಿ: ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಗಡಿ ವಿವಾದ ಎದ್ದೇಳುತ್ತಲೇ ಇರುತ್ತದೆ. ಜತ್ತ ತಾಲೂಕಿನ 40 ಗ್ರಾಮ ಕರ್ನಾಟಕಕ್ಕೆ ಸೇರಬೇಕೆಂದು ಆಗ್ರ ಮಾಡಿರುವ ಮರಾಠಿಗರಿಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಾರಾಷ್ಟ್ರದ ಪುಂಡರು ತಮ್ಮ ಆಟಾಟೋಪ ಮುಂದುವರೆಸಿದ್ದು ಗಡಿ ಭಾಗದಲ್ಲಿ ಕರ್ನಾಟಕದ ಬಸ್ಗೆ ಕಲ್ಲು ತೂರಿದ್ದಾರೆ.
ಮಹಾರಾಷ್ಟ್ರದಲ್ಲಿ ಪುಂಡಾಟಿಕೆ ಮುಂದುವರೆಸಿರುವ ಮಹಾಕ್ರಿಮಿಗಳು ಕರ್ನಾಟಕ ಬಸ್ಗೆ ಕಲ್ಲು ತೂರಿದ್ದಾರೆ. ಮಿರಜ್ ಕಾಗವಾಡ ಮಧ್ಯೆ ಕರ್ನಾಟಕದ ಬಸ್ಗೆ ಮಹಾರಾಷ್ಟ್ರ ಪುಂಡರಿಂದ ಕಲ್ಲು ತೂರಾಟ ನಡೆದಿದೆ. ಈ ಬಸ್ ಪುಣೆಯಿಂದ ಅಥಣಿಗೆ ಬರುತ್ತಿತ್ತು.
ಬೆಳಗಾವಿ ಜಿಲ್ಲೆಯ ಅಥಣಿ ಡಿಪೋಗೆ ಸೇರಿದ ಬಸ್ ಮೇಲೆ ನಿನ್ನೆ ರಾತ್ರಿ 10.30 ಕ್ಕೆ ಕಲ್ಲು ತೂರಾಟ ನಡೆದಿದ್ದು ಬಸ್ ಮುಂದಿನ ಗಾಜು ಜಖಂ ಆಗಿದೆ. ಸದ್ಯ ಕರ್ನಾಟಕ ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಿರುವ ಹಿನ್ನೆಲೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮಿರಜ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಕರ್ನಾಟಕ ಬಸ್ಗಳ ಸಂಚಾರವನ್ನು ನಿಲ್ಲಿಸಲಾಗಿದೆ.
ಕಾಗವಾಡ ಬಾರ್ಡರ್ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಆಗಿದ್ದು ಮಹಾರಾಷ್ಟ್ರ – ಕರ್ನಾಟಕ ಗಡಿಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕಾಗವಾಡ ಗಡಿಯಲ್ಲಿ ಪೊಲೀಸ್ ಇಲಾಖೆ ಒಂದು ಕೆಎಸ್ಆರ್ಪಿ ಒಂದು ಡಿಆರ್ ನಿಯೋಜನೆ ಮಾಡಿದೆ. ಇದರ ಜೊತೆಗೆ ಕರ್ನಾಟಕದಿಂದ ಮಹಾರಾಷ್ಟ್ರದ ಸಾಂಗ್ಲಿ, ಮಿರಜ್ಗೆ ತೆರಳುವ ಬಸ್ಗಳನ್ನೂ ತಡೆ ಹಿಡಿಯಲಾಗಿದೆ. ಕರ್ನಾಟಕದಲ್ಲಿ ಮಾತ್ರ ಮಹಾರಾಷ್ಟ್ರದ ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ. ಆದರೆ ಮಹಾರಾಷ್ಟ್ರದ ಪುಂಡರು ಕರ್ನಾಟಕದ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.