More

    ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ

    ಕಡೂರು: ಕೈ ಹಿಡಿದ ಪತ್ನಿ ಮತ್ತು ಮಕ್ಕಳನ್ನು ಬಿಟ್ಟುಕೊಡು, ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನಿನ್ನ ಹೆಂಡತಿಗೆ ವಿಚ್ಛೇದನವನ್ನಾದರೂ ಕೊಡು, ಇಲ್ಲವೇ ಬಿಟ್ಟಾದರೂ ಹೋಗು… ನಿನ್ನ ಇಬ್ಬರು ಮಕ್ಕಳನ್ನೂ ನಾನೇ ನೋಡಿಕೊಳ್ಳುತ್ತೇನೆ… ಹೀಗಂತ ಯಾರಾದರೂ ಕೇಳಿದರೆ ಪರಿಸ್ಥಿತಿ ಏನಾಗಬಹುದು?

    ಹೌದು, ವಿವಾಹಿತ ಮಹಿಳೆಯನ್ನು ತನಗೆ ಬಿಟ್ಟುಕೊಡುವಂತೆ ಆಕೆಯ ಗಂಡನ ಬಳಿಯೇ ಮತ್ತೊಬ್ಬ ಬಂದು ಕೇಳಿದ್ದಾನೆ. ಇಂಥ ವಿಲಕ್ಷಣ ಘಟನೆ ಕಡೂರು ತಾಲೂಕಿನ ದೊಡ್ಡಟ್ಟಿ ಗ್ರಾಮದಲ್ಲಿ ಸಂಭವಿಸಿದ್ದು, ನನ್ನ ಹೆಂಡತಿ ಮಕ್ಕಳನ್ನು ನಿನಗೆ ಏಕೆ ಬಿಟ್ಟುಕೊಡಬೇಕು ಎಂದು ಪ್ರಶ್ನಿಸಿದ ಗಂಡನಿಗೆ ಈತನ ಪತ್ನಿ ಮತ್ತು ಮತ್ತೊಬ್ಬ ಸೇರಿ ಪ್ರಾಣ ತೆಗೆದಿದ್ದಾರೆ.

    ಏನಿದು ಘಟನೆ?: ಕಡೂರು ತಾಲೂಕು ಹುಲಿಕೆರೆ ಗ್ರಾಮದ ಪ್ರದೀಪ್ ಜತೆ ಹಾಸನ ಜಿಲ್ಲೆ ಹಳೇಬೀಡಿನ ರಾಗಿಣಿ ಮದುವೆ ಆಗಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದ ಪ್ರದೀಪ್​ ದೊಡ್ಡಟ್ಟಿ ಗ್ರಾಮದಲ್ಲಿ ನೆಲೆಸಿದ್ದ. ಪ್ರದೀಪ್​ ಜತೆ ಶ್ರೀನಿವಾಸ ಎಂಬಾತ ಗಾರೆ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಶ್ರೀನಿವಾಸ ಆಗಾಗ ಪ್ರದೀಪ್​ನ ಮನೆಗೆ ಬಂದು ಹೋಗುತ್ತಿದ್ದ. ಈ ಸಂದರ್ಭದಲ್ಲಿ ಪ್ರದೀಪ್​ನ ಪತ್ನಿ ರಾಗಿಣಿಯ ಪರಿಚಯವಾಗಿತ್ತು.

    ರಾಗಿಣಿ ಇತ್ತೀಚಿಗೆ ಅಗ್ರಿಕಲ್ಚರ್ ಲ್ಯಾಬ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ತನಗೆ ಬರುತ್ತಿದ್ದ ವೇತನದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು. ಮದ್ಯವ್ಯಸನಿಯಾಗಿದ್ದ ಪ್ರದೀಪ, ಪದೇಪದೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ಈ ವೇಳೆ ಮನೆಗೆ ಬರುತ್ತಿದ್ದ ಶ್ರೀನಿವಾಸನನಿಗೆ ರಾಗಿಣಿ ತನ್ನ ತನ್ನ ಕಷ್ಟ ಹೇಳಿಕೊಂಡಿದ್ದಾಳೆ. ಇವರಿಬ್ಬರ ನಡುವಿನ ಪರಿಚಯ- ಆತ್ಮೀಯತೆ ಪ್ರೀತಿಗೆ ತಿರುಗಿದೆ.

    ಈ ವೇಳೆ ಒಟ್ಟಾಗಿ ಬದುಕುವ ತೀರ್ಮಾನ ಮಾಡಿದ ಶ್ರೀನಿವಾಸ, ‘ಇಬ್ಬರು ಮಕ್ಕಳೊಂದಿಗೆ ನಿನ್ನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ನನ್ನೊಂದಿಗೆ ಜೀವನ ಮಾಡಲು ಇಷ್ಟ ಇದೆಯೇ?’ ಎಂದು ಕೇಳಿದ್ದ. ಕಷ್ಟದಲ್ಲಿದ್ದ ರಾಗಿಣಿ ಈ ಹೊಸ ಬದುಕನ್ನು ಆರಂಭಿಸಲು ಒಪ್ಪಿಗೆ ನೀಡಿದ್ದಳು ಎನ್ನಲಾಗಿದೆ.

    ಹೀಗಾಗಿ ಶ್ರೀನಿವಾಸ ಭಾನುವಾರ ಸಂಜೆ ಪ್ರದೀಪ್​ನ ಮನೆಗೆ ಬಂದು ವಿಷಯ ಪ್ರಸ್ತಾಪ ಮಾಡಿದ್ದ. ‘ನಿನ್ನ ಪತ್ನಿ ರಾಗಿಣಿ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಹೋಗು. ನಾನೇ ಅವರನ್ನು ನೋಡಿಕೊಳ್ಳುತ್ತೇನೆ. ವಿಚ್ಛೇದನ ಕೊಟ್ಟರೂ ಸರಿ, ಇಲ್ಲವಾದರೆ ಬಿಟ್ಟು ಹೋದರೂ ಸರಿ’ ಎಂದಿದ್ದ. ಆಗ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕುಡಿದ ಅಮಲಿನಲ್ಲಿದ್ದ ಪ್ರದೀಪನ ಮುಖದ ಮೇಲೆ ಟವೆಲ್ ಹಾಕಿ ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾರೆ. ಅದು ಸಾಧ್ಯವಾಗಿಲ್ಲ. ಆಗ ರಾಗಿಣಿ ಮತ್ತು ಶ್ರೀನಿವಾಸ ಸೇರಿಕೊಂಡು ವೇಲ್‌ನಿಂದ ಕುತ್ತಿಗೆಗೆ ಬಿಗಿದು ಕೊಂದಿದ್ದಾರೆ.

    ಪಕ್ಕದ ಮನೆಗೆ ಮಕ್ಕಳು: ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟುಕೊಡು ಎಂದು ಕೇಳಲು ಪ್ರದೀಪನ ಮನೆಗೆ ಶ್ರೀನಿವಾಸ ಹೋಗಿದ್ದಾಗ 10 ವರ್ಷದ ಮಗಳು ಮತ್ತು 7 ವರ್ಷದ ಮಗನನ್ನು ರಾಗಿಣಿ ಪಕ್ಕದ ಮನೆಗೆ ಟಿವಿ ನೋಡಲು ಕಳುಹಿಸಿದ್ದಳು. ಮಕ್ಕಳು ರಾತ್ರಿ ಮನೆಗೆ ಬಂದಾಗ ‘ಅಪ್ಪ ಎಲ್ಲಿ?’ ಎಂದು ಕೇಳಿದ್ದಕ್ಕೆ ‘ಅವರು ಮಲಗಿದ್ದಾರೆ, ತೊಂದರೆ ಕೊಡಬೇಡಿ’ ಎಂದ ರಾಗಿಣಿ ಮತ್ತು ಶ್ರೀನಿವಾಸ ಮಕ್ಕಳನ್ನು ಮನೆಯ ಹಾಲ್‌ನಲ್ಲೇ ಮಲಗಿಸಿದ್ದರು.

    ಶವದೊಂದಿಗೆ ಮನೆಯಲ್ಲೇ ಇದ್ದರು!: ಪ್ರದೀಪನನ್ನು ಹತ್ಯೆ ಮಾಡಿದ್ದ ಶ್ರೀನಿವಾಸ ಆ ರಾತ್ರಿ ಅಲ್ಲೇ ಇದ್ದ. ರಾಗಿಣಿ ಮತ್ತು ಇಬ್ಬರು ಮಕ್ಕಳೂ ಅಲ್ಲೇ ಇದ್ದರು. ಬೆಳಗ್ಗೆ ಬೇಗ ಎದ್ದ ಶ್ರೀನಿವಾಸ, ಪ್ರದೀಪನ ಕತ್ತು ಮತ್ತು ಮೂಗಿನಲ್ಲಿ ಬಂದಿದ್ದ ರಕ್ತವನ್ನು ವೇಲ್ ಮತ್ತು ಶರ್ಟ್‌ನಿಂದ ಒರೆಸಿ ಅವುಗಳನ್ನು ಕ್ಯಾರಿ ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗಿದ್ದ. ಪ್ರದೀಪ ಸಹಜವಾಗಿ ಮೃತಪಟ್ಟಿದ್ದಾನೆ ಎಂದು ಬಿಂಬಿಸುವುದು ರಾಗಿಣಿ ಮತ್ತು ಶ್ರೀನಿವಾಸನ ಪ್ಲಾನ್ ಆಗಿತ್ತು. ಆದರೆ ಕತ್ತಿನ ಮೇಲೆ ಗುರುತು, ಮೂಗು, ಬಾಯಲ್ಲಿ ರಕ್ತ ಬಂದಿದ್ದರಿಂದ ಕೊಲೆ ಎಂದು ಊಹಿಸಲು ಕಷ್ಟವಾಗಲಿಲ್ಲ. ವಿಷಯ ತಿಳಿದ ಸಖರಾಯಪಟ್ಟಣ ಪಿಎಸ್‌ಐ ಗ್ರಾಮಕ್ಕೆ ತೆರಳಿ ರಾಗಿಣಿಯನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಾಗಿದೆ.

    ಮಾಮಾ ಆಗಿದ್ದ ಶ್ರೀನಿವಾಸ: ರಾಗಿಣಿಯ ಇಬ್ಬರು ಮಕ್ಕಳು ಶ್ರೀನಿವಾಸನನ್ನು ಮಾಮಾ ಎಂದು ಕರೆಯುತ್ತಿದ್ದರು. ಪದೇಪದೆ ಮನೆಗೆ ಬರುತ್ತಿದ್ದ ಶ್ರೀನಿವಾಸ, ಆ ಇಬ್ಬರು ಮಕ್ಕಳೊಂದಿಗೆ ಚೆನ್ನಾಗಿದ್ದ. ಹೀಗಾಗಿ ಅವರು ಆತನನ್ನು ಮಾಮಾ ಎಂದು ಕರೆಯುತ್ತಿದ್ದರು. ಕೊಲೆಯಾದ ಮರು ದಿನ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ತಂದೆ ಮದ್ಯವ್ಯಸನಿಯಾಗಿದ್ದ, ಹಾಗೂ ಮನೆಯಲ್ಲಿ ತಾಯಿಯೊಂದಿಗೆ ಜಗಳ ಮಾಡುತ್ತಿದ್ದ ವಿಷಯವನ್ನು ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ.

    ದುಡ್ಡು ಸಿಗುತ್ತೆ ಅಂತ ಗಂಡನ ಮನೆಗೆ ಓಡೋಡಿ ಬಂದವಳು ಆ ಮನೆಯಲ್ಲೇ ಹೆಣವಾದಳು!

    ತನ್ನ ಮನೆಯಲ್ಲೇ ಭಾವಿ ಪತಿಗೆ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts