ಹಾಸನ: ಆಕೆ ಹೆಸರು ಸುಷ್ಮಿತಾ. ನೋಡಲು ಸುರ ಸುಂದರಿ. ತನ್ನ ಗ್ರಾಮದ ಯುವಕನೊಂದಿಗೆ 6 ವರ್ಷದ ಹಿಂದೆ ಬಂಡಿಗಟ್ಟಲೇ ಕನಸಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಇದೆ. ಮುದ್ದಾದ ಹೆಂಡತಿ-ಮಗಳು ಇದ್ದರೂ ಆತ ಪರಸ್ತ್ರೀ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದೇ ಕಾರಣಕ್ಕೆ ನೊಂದ ಪತ್ನಿ ತವರು ಮನೆ ಸೇರಿದ್ದಳು. ಆದರೆ, 25 ದಿನದ ಹಿಂದೆ ದುರಂತ ಅಂತ್ಯಕಂಡಿದ್ದ ಆಕೆ 22 ದಿನದ ಹಿಂದೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬುದು ಅಂದೇ ಗೊತ್ತಾಗಿತ್ತು.
ತನಿಖೆ ಕೈಗೊಂಡ ಪೊಲೀಸರು 26 ವರ್ಷದ ಸುಷ್ಮಿತಾಳ ಸಾವಿನ ರಹಸ್ಯ ಬಯಲು ಮಾಡಿದ್ದು, ಎಂಥವರನ್ನೂ ಅರೆಕ್ಷಣ ಬೆಚ್ಚಿಬೀಳಿಸುತ್ತೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಬೆಲಗೂರು ಗ್ರಾಮದ ನಾಗರಾಜು ಎಂಬಾತನ ಪತ್ನಿ ಸುಷ್ಮಿತಾ. ಮದುವೆ ಆಗಿ ಮಗಳು ಇದ್ದರೂ ನಾಗರಾಜುಗೆ ಪಕ್ಕದ ಕೋಡಿಹಳ್ಳಿ ಗ್ರಾಮದ ಶೈಲಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಇತ್ತು. ಗಂಡನ ನಡತೆಯಿಂದ ಬೇಸತ್ತಿದ್ದ ಸುಷ್ಮಿತಾ ವರ್ಷದ ಹಿಂದೆ ಮಗುವಿನ ಜತೆಗೆ ಅರಸೀಕೆರೆಗೆ ತೆರಳಿದ್ದರು. ಅಲ್ಲಿ ತಂದೆ ಕೃಷ್ಣಮೂರ್ತಿ ಜತೆ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಈ ಮಧ್ಯೆ, ಸುಶ್ಮಿತಾ ಜೀವನಾಂಶ ಕೋರಿ ಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಳು. ಇದರಿಂದ ಆಕ್ರೋಶಗೊಂಡ ನಾಗರಾಜು ಮತ್ತು ಆತನ ಕುಟುಂಬಸ್ಥರು ಸುಷ್ಮಿತಾಳ ಕೊಲೆಗೆ ಸಂಚು ರೂಪಿಸಿದ್ದರು.
ಪತ್ನಿಯನ್ನು ಕೊಲ್ಲಲು ಎಲ್ಲ ತಯಾರಿ ಮಾಡಿಕೊಂಡಿದ್ದ ನಾಗರಾಜು, ಜೀವನಾಂಶ ಕುರಿತು ಚರ್ಚಿಸಲು ಅ.29ರಂದು ಸುಷ್ಮಿತಾಳನ್ನು ಊರಿಗೆ ಕರೆಸಿಕೊಂಡಿದ್ದ. ಆ ದಿನ ರಾತ್ರಿ ಮನೆಯಲ್ಲಿ ತಲೆಗೆ ಬಲವಾದ ಆಯುಧದಿಂದ ಹೊಡೆದು, ನಂತರ ಕುತ್ತಿಗೆ ಹಿಸುಕಿ ಹತ್ಯೆಗೈದಿದ್ದ. ಸಾಕ್ಷ್ಯಾಧಾರ ನಾಶ ಪಡಿಸುವ ಉದ್ದೇಶದಿಂದ ಸಹೋದರ ಮೋಹನ್ಕುಮಾರ್ ಮತ್ತು ಶೈಲಾ ಅವರೊಟ್ಟಿಗೆ ಕಾರಿನಲ್ಲಿ ಶವ ಸಾಗಿಸಿ ಹಾನಸದ ದುದ್ದ ಹೋಬಳಿಯ ಚೀರನಹಳ್ಳಿ ಕೆರೆಗೆ ಎಸೆದು ಪರಾರಿಯಾಗಿದ್ದ. ಸೊಸೆಯನ್ನು ಕೊಲ್ಲಲು ಮಗನೊಂದಿಗೆ ಪಾಲಕರೂ ನೆರವಾಗಿದ್ದರು.
ಚೀರನಹಳ್ಳಿ ಕೆರೆಯಲ್ಲಿ ನ. 1ರಂದು ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ದುದ್ದ ಠಾಣೆ ಪೊಲೀಸರು ಕೊಲೆಯ ಜಾಡು ಹಿಡಿದು ತನಿಖೆ ಕೈಗೊಂಡಿದ್ದರು. ಹೊಸದುರ್ಗ ತಾಲೂಕಿನ ಶ್ರೀರಾಮಪುರ ಠಾಣೆಯಲ್ಲಿ ಸುಷ್ಮಿತಾ
ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೀರನಹಳ್ಳಿ ಕೆರೆಯಲ್ಲಿ ಪತ್ತೆಯಾದ ಶವ ಸುಷ್ಮಿತಾರದ್ದು ಎಂದು ಗೊತ್ತಾಗುತ್ತಿದ್ದಂತೆ ಆಕೆಯ ಗಂಡನ ಮನೆಯತ್ತ ಹೊರಟ ಪೊಲೀಸರು ಐವರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ನಾಗರಾಜು (28), ಈತನ ಸಹೋದರ ಎಂ.ಇ.ಮೋಹನಕುಮಾರ್ (24), ತಂದೆ ಬಿ.ಎಂ.ಈಶ್ವರರಾವ್(59), ತಾಯಿ ಜಯಂತಿ (57), ನಾಗರಾಜು ಪ್ರೇಯಸಿ ಶೈಲಾ (27) ಬಂಧಿತರು.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ಗ್ರಾಮಾಂತರ ಸಿಪಿಐ ಪಿ.ಸುರೇಶ್, ದುದ್ದ ಠಾಣೆ ಪಿಎಸ್ಐ ಎಂ.ಸಿ.ಮಧು, ಸಿಬ್ಬಂದಿ ಶ್ರೀಕಾಂತ್, ರವಿ, ಮುರುಳಿ, ಸುಬ್ರಹ್ಮಣ್ಯ ಅವರಿಗೆ ಎಸ್ಪಿ ಆರ್.ಶ್ರೀನಿವಾಸ್ಗೌಡ ಬಹುಮಾನ ಘೋಷಿಸಿದ್ದಾರೆ.
ತನ್ನ ಮನೆಯಲ್ಲೇ ಭಾವಿ ಪತಿಗೆ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್!