ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದೇವನೂರ ಚಂದ್ರು ನಿರ್ದೇಶಿಸುತ್ತಿರುವ, ವಿನಯ್ ರಾಜಕುಮಾರ್ ನಾಯಕನಾಗಿರುವ ಚಿತ್ರ ‘ಗ್ರಾಮಾಯಣ’. ನಿರ್ಮಾಪಕ ಮೂರ್ತಿಯವರ ಅಕಾಲಿಕ ಮರಣದಿಂದಾಗಿ ಚಿತ್ರ 2020ರಲ್ಲಿ ಸ್ಥಗಿತಗೊಂಡಿತ್ತು. ಆ ಬಳಿಕ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಮತ್ತು ಮನೋಹರ್ ಅದೇ ಟೈಟಲ್, ನಿರ್ದೇಶಕ ಚಂದ್ರು ಮತ್ತು ನಾಯಕ ವಿನಯ್ ಜತೆ ಚಿತ್ರವನ್ನು ಮತ್ತೆ ರೀ-ಶೂಟ್ ಮಾಡುವುದಾಗಿ ತಿಳಿಸಿದ್ದರು. ಅದರಂತೆ ಕೆಲ ದಿನಗಳ ಹಿಂದಷ್ಟೇ ನಾಯಕಿಯಾಗಿ ಮೇಘಾ ಶೆಟ್ಟಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದರ ಬೆನ್ನಲ್ಲೇ ಇದೀಗ ನಟ ಲೂಸ್ ಮಾದ ಯೋಗಿ ಚಿತ್ರತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ : ಕನ್ನಡದಲ್ಲಿ ‘12TH ಫೇಲ್’ ; ಇದು ಯಾವ ಐಪಿಎಸ್ ಅಧಿಕಾರಿ ಬಯೋಪಿಕ್ ಗೊತ್ತಾ?
ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ದೇವನೂರು ಚಂದ್ರು, ‘ಯೋಗಿ ‘ದುನಿಯಾ’, ‘ಅಂಬಾರಿ’, ‘ಹುಡುಗರು’, ‘ಸಿದ್ಲಿಂಗು’… ಹೀಗೆ ಒಂದೇ ಪಾತ್ರಕ್ಕೆ ಅಂಟಿಕೊಳ್ಳದೇ, ಹೀರೋ ಆಗಿಯೇ ನಟಿಸಬೇಕು ಅಂತಂದುಕೊಳ್ಳದೇ, ಒಳ್ಳೆ ಪಾತ್ರ ಸಿಕ್ಕರೆ ಮಾಡುತ್ತಾರೆ. ಅದೇ ರೀತಿ ನಮ್ಮ ಚಿತ್ರದಲ್ಲೂ ಯಾರೂ ನಿರೀಕ್ಷಿಸಿರದ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ : ಧೈರ್ಯದಿಂದ ಸಹೋದರಿ ಜಾಹ್ನವಿಗಿಂತ ಎರಡು ಹೆಜ್ಜೆ ಮುಂದೆ ಹೋದ ಖುಷಿ..ಅಭಿಮಾನಿಗಳ ಮನಗೆದ್ದ ಗ್ಲಾಮರಸ್ ಫೋಟೋ
ಸಿನಿಪ್ರಿಯರಿಗೆ ಭರ್ಜರಿ ಬಾಡೂಟ
‘ಗ್ರಾಮಾಯಣ’ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿ ನಡೆಯುವ ಕಥೆ. ‘ಆ ಭಾಗದಲ್ಲಿ ನಾನು ನೋಡಿರುವ, ಕೇಳಿರುವ ವಿಷಯಗಳ ಜತೆ ಕಾಲ್ಪನಿಕ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಲಿದ್ದೇನೆ. ಹಿಂದೆ ಚಿತ್ರೀಕರಿಸಿದ್ದ ಒಂದೂ ಸನ್ನಿವೇಶವನ್ನೂ ಇಲ್ಲಿ ಬಳಸಿಕೊಳ್ಳುತ್ತಿಲ್ಲ. ಬದಲಾಗಿ ಸಂಪೂರ್ಣವಾಗಿ ರೀಶೂಟ್ ಮಾಡಲಿದ್ದೇವೆ. ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ‘ಗ್ರಾಮಾಯಣ’ ಸಿನಿಪ್ರಿಯರಿಗೆ ಭರ್ಜರಿ ಬಾಡೂಟ ಎನ್ನಬಹುದು’ ಎಂದು ಹೇಳಿಕೊಳ್ಳುತ್ತಾರೆ ಚಂದ್ರು. ಇಂದು ದೇವನೂರಿನಲ್ಲಿ ಸರಳ ಪೂಜೆಯ ಮೂಲಕ ಚಿತ್ರಕ್ಕೆ ಚಾಲನೆ ದೊರೆಯಲಿದ್ದು, ಶುಕ್ರವಾರದಿಂದ ಹೊಸ ‘ಗ್ರಾಮಾಯಣ’ (ಅ.6) ಚಿತ್ರೀಕರಣ ಪ್ರಾರಂಭವಾಗಲಿದೆ.