ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಜೈನ ಸಮಾಜದವರ ಸಹಕಾರದೊಂದಿಗೆ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ ವಿದ್ಯಾಗಿರಿಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಭವನದಲ್ಲಿ ಶನಿವಾರ ಸಂಜೆ ನಡೆಯಿತು.
ಕಾರ್ಯಕ್ರಮದ ಮೊದಲು ಜಯಶ್ರೀ ಡಿ.ಜೈನ್ ಹೊರನಾಡು ತಂಡದಿಂದ ಜಿನಭಕ್ತಿಗೀತೆ ನಡೆಯಿತು. ಬಳಿಕ ನಡೆದ ಮಹಾವೀರ ಸ್ವಾಮಿಯ ಜಿನಬಿಂಬದ ಮೆರವಣಿಗೆಯಲ್ಲಿ ಶ್ರಾವಕ-ಶ್ರಾವಕಿಯರ ಜೊತೆ ಬಣ್ಣ ಬಣ್ಣದ ಛತ್ರಿಗಳು, ಜಿನ ಭಜನಾ ತಂಡಗಳು, ನಾದ ಸ್ವರ, ವಾದ್ಯ ತಂಡಗಳು ಸಭಾಭವನದ ಬಳಿ ಸಾಗಿ ಬಂದವು. ಬಳಿಕ ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ ನಡೆಯಿತು.
ಚೌಟರ ಅರಮನೆಯ ಕುಲದೀಪ ಎಂ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್, ಹಂಡೇಲುಗುತ್ತು ಧನಕೀರ್ತಿ ಬಲಿಪ, ಸುಭಾಶ್ಚಂದ್ರ ಚೌಟ, ರಾಜವರ್ಮ ಬೈಲಂಗಡಿ, ಜೈನ ಮುಖಂಡರು ಸಹಿತ ದ.ಕ., ಉಡುಪಿ ಜಿಲ್ಲೆಯ ನೂರಾರು ಮಂದಿ ಶ್ರಾವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.