ನೆಲಮಂಗಲ: ಈ ಸರ್ಕಾರಿ ಪಿಯು ಕಾಲೇಜಿಗೆ ಜಮೀನು ಮಾಲೀಕರು ಸರ್ಕಾರಿ ಪಿಯು ಕಾಲೇಜಿಗೆ ಬೀಗ ಹಾಕಿದ್ದಾರೆ. ಕಾಲೇಜಿಗೆ ಬೀಗ ಜಡಿದು ಮಾಲೀಕರು ಜಾಗದ ವಿಷಯವಾಗಿ ತಕರಾರು ಎತ್ತಿದ್ದಾರೆ.
ಅಂದಹಾಗೆ ಈ ಘಟನೆ ನಡೆದದ್ದು ನೆಲಮಂಗಲ ತಾಲ್ಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ. ಕೃಷ್ಣಪ್ಪ ಮತ್ತು ಮಕ್ಕಳು, ಸುಬ್ಬರಾವ್ ಹಾಗೂ ಸಹೋದರರು ಸೇರಿದಂತೆ 8 ಮಂದಿಗೆ ಕಾಲೇಜು ಇರುವ ಜಾಗ ಸೇರಿದೆ.
ಈ ಹಿಂದೆ ಕಾಲೇಜಿಗಾಗಿ ಕುಟುಂಬ ಜಮೀನು ನೀಡಿತ್ತು. ಸ.ನಂ 2 ಹಾಗೂ 2/5 ರಲ್ಲಿ ಕುಟುಂಬಸ್ಥರು ಜಮೀನು ನೀಡಿದ್ದರು. 1992 ರಲ್ಲಿ 2 ಎಕರೆ 10 ಕುಂಟೆ ಜಾಗ ನೀಡಿದ್ದು, ಸರ್ವೆ ನಂಬರ್ 2ರಲ್ಲಿ 1 ಎಕರೆ 30 ಕುಂಟೆ ಜಾಗ ನೊಂದಣಿ ಮಾಡಲಾಗಿತ್ತು.
ಆದರೆ ಸದ್ಯ ಕಾಲೇಜು ನಿರ್ಮಾಣ ಮಾಡಿರುವುದು ಮಾತ್ರ ಸ.ನಂ 2/5 ರ 30 ಕುಂಟೆ ಜಾಗದಲ್ಲಿ. ಈ ಜಾಗದ ಬದಲಿಗೆ ಪರ್ಯಾಯ ಜಾಗ ನೀಡುತ್ತೇವೆ ಎಂದು ಅಂದಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹೇಳಿದ್ದರು. ಆದರೆ ಈವರೆಗೂ ಪರಿಹಾರವಾಗಲಿ, ಬದಲಿ ಜಾಗವಾಗ ಅಥವಾ ಹಣ, ಯಾವುದನ್ನೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿಲ್ಲ. ಹೀಗಾಗಿ ಭೂ ಮಾಲೀಕರು, ಕಾಲೇಜಿಗೆ ಬೀಗ ಜಡಿದು ಹಿರಿಯ ಅಧಿಕಾರಿಗಳು ಬರಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಪಿಯು ಕಾಲೇಜಿಗೆ ಬೀಗ ಜಡಿದ ಹಿನ್ನೆಲೆ ತರಗತಿಯಿಂದ ಹೊರಗೆ ಕುಳಿತೇ ಕಾಲೇಜು ವಿದ್ಯಾರ್ಥಿಗಳು ಪಾಠ ಪ್ರವಚನ ಕೇಳಿಸಿಕೊಳ್ಳುತ್ತಿದ್ದಾರೆ. ಸದ್ಯ, ಸ್ಥಳಕ್ಕೆ ಉನ್ನತ ಅಧಿಕಾರಿಗಳು ಆಗಮಿಸಬೇಕೆಂದು ಜಮೀನು ಮಾಲೀಕರ ಆಗ್ರಹ ಮಾಡುತ್ತಿದ್ದಾರೆ.