ಪಡುಬಿದ್ರಿ: ಎರಡು ವರ್ಷಗಳಿಂದ ತಾಮ್ರಕ್ಕೆ ಚಿನ್ನ ಲೇಪಿಸಿದ ನಕಲಿ ಚಿನ್ನದ ಆಭರಣಗಳನ್ನೇ ಪಡುಬಿದ್ರಿ ಆಸುಪಾಸಿನ ಮೂರು ಬ್ಯಾಂಕುಗಳಲ್ಲಿ ಅಡವಿಟ್ಟು 29.94 ಲಕ್ಷ ರೂ. ಪಂಗನಾಮ ಹಾಕಿದ ಪಡುಬಿದ್ರಿ ಕಂಚಿನಡ್ಕ ರಾಘವೇಂದ್ರ ಮಠದ ಬಳಿಯ ರಾಜೀವ್-ಸ್ನೇಹಲತಾ ದಂಪತಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜೀವ್ನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದು, ಆತನಿಗೆ ಮಾ.7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪತ್ನಿ ಸ್ನೇಹಲತಾಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ವಿವಿಧ ಬ್ಯಾಂಕ್ಗಳಿಗೆ ದಂಪತಿಯಿಂದ 29.94 ಲಕ್ಷ ರೂ. ಪಂಗನಾಮ
ಪಡುಬಿದ್ರಿಯ ಸೌತ್ ಕೆನರಾ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ. ಆಪರೇಟಿವ್ ಬ್ಯಾಂಕ್ನ ಪಡುಬಿದ್ರಿ ಶಾಖೆಯಲ್ಲಿ 2022 ಸೆ. 1ರಿಂದ ಫೆ. 26, 2024ರವರೆಗೆ ಈ ದಂಪತಿ 180 ಗ್ರಾಂ ನಕಲಿ ಚಿನ್ನವನ್ನಿಟ್ಟು 8.08 ಲಕ್ಷ ರೂ. ಪಡೆದುಕೊಂಡಿದ್ದಾರೆ. ಪಡುಬಿದ್ರಿ ವ್ಯವಸಾಯಿಕ ಸಹಕಾರಿ ಸಂಘದ ಪಡುಬಿದ್ರಿ ಶಾಖೆಯಿಂದ ಆರೋಪಿಗಳು 2 ವರ್ಷಗಳ ಅವಧಿಯಲ್ಲಿ 231 ಗ್ರಾಂ ಹಾಗೂ 188 ಗ್ರಾಂ ನಕಲಿ ಚಿನ್ನವನ್ನು ಅಡವಿಟ್ಟು 19 ಲಕ್ಷ ರೂ. ಸಾಲ ಪಡೆದಿದ್ದಾರೆ. ಉಚ್ಚಿಲದ ಎಸ್ಸಿಡಿಸಿಸಿ ಬ್ಯಾಂಕ್ ಶಾಖೆಯಿಂದ ಮಾರ್ಚ್ 2023ರಿಂದ ಫೆ. 26, 2024ರ ಅವಧಿಯಲ್ಲಿ 72ಗ್ರಾಂ ಚಿನ್ನ ಅಡವಿಟ್ಟು 2.86ಲಕ್ಷ ರೂ. ಪಡೆದಿದ್ದರು.
ಬಡ್ಡಿಕಟ್ಟಲೂ ತಲೆಹಾಕದ ದಂಪತಿ
ಸಾಲ ಪಡೆದಿರುವ ಈ ದಂಪತಿ ಬಡ್ಡಿ ಕಟ್ಟಲೂ ಸಹಿತ ಬ್ಯಾಂಕುಗಳತ್ತ ಮುಖ ಮಾಡಿರಲಿಲ್ಲ. ಬಳಿಕ ಬ್ಯಾಂಕಿನವರು ಕೂಲಂಕಷ ಪರಿಶೀಲನೆ ನಡೆಸಿದಾಗ ಮೋಸದ ಅರಿವಾಗಿದೆ. ಇದರ ಹಿಂದೆ ದೊಡ್ಡಜಾಲವೇ ಇರಬಹುದೆಂಬ ಶಂಕೆಯನ್ನು ಪೊಲೀಸರ ವ್ಯಕ್ತಪಡಿಸಿದ್ದಾರೆ.