ಕಾರವಾರ: ಸದ್ಯಕ್ಕೆ ಕರ್ನಾಟಕದಲ್ಲಿ ಮೋಡ ಬಿತ್ತನೆಯ ಯೋಜನೆ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೆಗೌಡ ಹೇಳಿದರು.
ಭಾರಿ ಮಳೆಯಿಂದ ಕುಮಟಾ ಬೆಟ್ಕುಳಿಯಲ್ಲಿ ಮೃತಪಟ್ಟ ಇಬ್ಬರ ಕುಟುಂಬಗಳಿಗೆ ಪರಿಹಾರ ವಿತರಿಸಿ ಅವರು ಮಾತನಾಡಿದರು. “ರಾಜ್ಯದಾದ್ಯಂತ ಮುಂಗಾರು ಮಾರುತ ವಿಸ್ತರಣೆಯಾಗುತ್ತಿದೆ. ಮುಂದೆ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜುಲೈ 15 ಅಥವಾ 20 ರವರೆಗೆ ಕಾದು ನಂತರ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಬರ ಪೀಡಿತ ಪ್ರದೇಶಗಳಲ್ಲಿ ಮೋಡ ಬಿತ್ತನೆ ಬಗ್ಗೆ ಚಿಂತಿಸಲಾಗುವುದು.
ರಾಜ್ಯದ ಕರಾವಳಿಯಲ್ಲಿ ಮಳೆಯಿಂದ ಜೂನ್ ನಿಂದ ಇದುವರೆಗೆ 21 ಜನ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ತಕ್ಷಣ ಪರಿಹಾರ ವಿತರಿಸಲಾಗುತ್ತಿದೆ. ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಸಲುವಾಗಿ ಜಿಲ್ಲೆಗೆ ಭೇಟಿ ನೀಡಿದ್ದೇನೆ. ಹೆದ್ದಾರಿ ಕಾಮಗಾರಿಯಿಂದ ಕರಾವಳಿಯಲ್ಲಿ ಕೃತಕ ನೆರೆ, ಭೂ ಕುಸಿತ ಸೃಷ್ಟಿಯಾಗುತ್ತಿರುವುದು ಗಮನಕ್ಕಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗಳ ಜತೆ ಬೆಂಗಳೂರಿನಲ್ಲಿ ಎನ್ ಎಚ್ ಎಐ ಅಧಿಕಾರಿಗಳನ್ನು ಕರಸಿ ಸಭೆ ನಡೆಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಇದುವರೆಗೆ 1 ಸಾವಿರ ಎಕರೆ ಬೆಳೆ ನಷ್ಟವಾಗಿದೆ. ಆ ರೈತರಿಗೆ ತಕ್ಷಣ ಪರಿಹಾರ ವಿತರಿಸಲು ಕ್ರಮ ವಹಿಸಲಾಗಿದೆ ಎಂದರು.