ಕೊಪ್ಪಳ: ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯದ ಬಗ್ಗೆ ಆಶಾ ಕಾರ್ಯಕರ್ತೆಯರು ಹೆಚ್ಚು ಕಾಳಜಿವಹಿಸಬೇಕು ಎಂದು ಎಂಎಲ್ಸಿ ಹೇಮಲತಾ ನಾಯಕ ಸಲಹೆ ನೀಡಿದರು.
ಸಂಕ್ರಾಂತಿ ನಿಮಿತ್ತ ನಗರದ ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ ನಿವಾಸದಲ್ಲಿ ಭಾನುವಾರ ವಿವಿಧ ಕ್ಷೇತ್ರಗಳ ಸೇವಾ ಕಾರ್ಯಕತೆರ್ಯರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಪಡೆದ ಮಹಿಳೆಯರು ಜಂಕ್ ಫುಡ್ ಅತಿಯಾಗಿ ಸೇವಿಸುವುದರಿಂದ ಹುಟ್ಟುವ ಮಗುವಿನ ಮೇಲೆ ತೀವ್ರ ಪರಿಣಾಮವಾಗುತ್ತಿದೆ. ಸರ್ಕಾರದ ಸಮೀಕ್ಷೆಯೊಂದರ ಪ್ರಕಾರ ಕೆಲ ಗರ್ಭಿಣಿಯರು ಆರೋಗ್ಯವಾಗಿದ್ದರೂ ಮಕ್ಕಳು ಪೌಷ್ಟಿಕ ಕೊರತೆಯಿಂದ ಬಳಲುವುದು ಕಂಡುಬಂದಿದೆ. ಇದಕ್ಕೆ ಕಾರಣ ಹುಡುಕಿದಾಗ ಹೆಚ್ಚಾಗಿ ಜಂಕ್ ಆಹಾರ ಸೇವನೆ ಎಂಬುದು ಗೊತ್ತಾಯಿತು. ಆದ್ದರಿಂದ ಆಶಾ ಕಾರ್ಯಕರ್ತೆಯರು ಗರ್ಭಿಣಿಯರು, ಬಾಣಂತಿಯರ ಜತೆ ನಿರಂತರ ಸಂಪರ್ಕದಲ್ಲಿದ್ದು, ಬಗೆಬಗೆಯ ಹಣ್ಣು, ತರಕಾರಿ, ಮೀನು, ಮೊಟ್ಟೆ ಸೇರಿ ಪೌಷ್ಟಿಕ ಆಹಾರ ಸೇವನೆ ಹಾಗೂ ಜಂಕ್ಫುಡ್ ತ್ಯಜಿಸುವಂತೆ ತಿಳಿಹೇಳಬೇಕು ಎಂದರು.
ಪ್ರಮುಖರಾದ ಲಕ್ಷೀದೇವಿ, ಸರೋಜಾ ಬಾಕಳೆ, ಸಿ.ವಿ.ಚಂದ್ರಶೇಖರ ಮಾತನಾಡಿದರು. ಪ್ರಮುಖರಾದ ವಾಣಿಶ್ರೀ ಮಠದ, ಡಾ.ರಾಧಾ ಕುಲಕರ್ಣಿ, ಮಹಾಲಕ್ಷ್ಮೀ ಕಂದಾರಿ, ದಾಕ್ಷಾಯಣಿ ಹಡಗಲಿ, ವೀಣಾ ಒಳಗುಂದಿ, ಶಿಲ್ಪಾ ಕುಕನೂರ, ಕೃತಿಕಾ ಬಸವರಾಜ ಇತರರಿದ್ದರು.