ಬೆಂಗಳೂರು/ಪಲ್ಲೆಕಿಲೆ: ಸಣ್ಣಪುಟ್ಟ ಗಾಯದ ಸಮಸ್ಯೆ ಎದುರಿಸಿದ್ದ ಕನ್ನಡಿಗ ಹಾಗೂ ವಿಕೆಟ್ ಕೀಪರ್&ಬ್ಯಾಟರ್ ಕೆಎಲ್ ರಾಹುಲ್ ಫಿಟ್ನೆಸ್ ಬಗ್ಗೆ ಬೆಂಗಳೂರಿನ ಎನ್ಸಿಎ ಸಂಪೂರ್ಣ ತೃಪ್ತಿ ಹೊಂದಿದ್ದು, ಏಷ್ಯಾಕಪ್ಗಾಗಿ ಶ್ರೀಲಂಕಾದಲ್ಲಿರುವ ಭಾರತ ತಂಡವನ್ನು ಕೂಡಿಕೊಳ್ಳಲು ಹಸಿರು ನಿಶಾನೆ ತೋರಿದೆ. ಇದರಿಂದ ಕೆಎಲ್ ರಾಹುಲ್ ಅವರನ್ನು ವಿಶ್ವಕಪ್ ತಂಡಕ್ಕೂ ಸೇರ್ಪಡೆಗೊಳಿಸುವುದು ಬಹುತೇಕ ಖಚಿತಗೊಂಡಿದೆ. ವಿಶ್ವಕಪ್ ಟೂರ್ನಿಗೆ ಆತಿಥೇಯ ಭಾರತ ತಂಡ ಮಂಗಳವಾರ ಅಧಿಕೃತವಾಗಿ ಪ್ರಕಟಗೊಳ್ಳಲಿದ್ದರೂ, ಅದಕ್ಕೆ ಮೊದಲೇ ತಂಡ ಬಹುತೇಕ ಅಂತಿಮಗೊಂಡಂತಾಗಿದೆ.
ಪೂರ್ಣ ಫಿಟ್ನೆಸ್ ಕಂಡುಕೊಳ್ಳದ ಕಾರಣ ಏಷ್ಯಾಕಪ್ನ ಮೊದಲ 2 ಪಂದ್ಯಗಳಿಗೆ ಅಲಭ್ಯರೆನಿಸಿದ್ದ ರಾಹುಲ್, ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು. ಇದೀಗ ಅವರು ಎನ್ಸಿಎಯಲ್ಲಿ ನೆಟ್ಸ್&ಡ್ರಿಲ್ನಲ್ಲಿ ಪಾಲ್ಗೊಂಡು ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಹೀಗಾಗಿ ಭಾರತಕ್ಕೆ ಸೂಪರ್-4 ಹಂತದ ಪಂದ್ಯಗಳಿಗೆ ಲಭ್ಯರಾಗಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಈಗಾಗಲೆ ಶ್ರೀಲಂಕಾ ತಲುಪಿದ್ದು, ನಾಯಕ ರೋಹಿತ್ ಶರ್ಮ ಮತ್ತು ಕೋಚ್ ರಾಹುಲ್ ದ್ರಾವಿಡ್ ಜತೆಗೆ ಚರ್ಚಿಸಿ ವಿಶ್ವಕಪ್ ತಂಡವನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.
ಸ್ಯಾಮ್ಸನ್, ತಿಲಕ್, ಪ್ರಸಿದ್ಧ ಕೃಷ್ಣಗೆ ನಿರಾಸೆ?
ಏಷ್ಯಾಕಪ್ಗೆ ಭಾರತ ಒಟ್ಟು 18 ಆಟಗಾರರ ತಂಡವನ್ನು ಆರಿಸಿದೆ. ಈ ಪೈಕಿ ರಾಹುಲ್ಗೆ ಮೀಸಲು ಆಟಗಾರರಾಗಿ ಸಂಜು ಸ್ಯಾಮ್ಸನ್ ಹೋಗಿದ್ದಾರೆ. ಆದರೆ ಈಗ ರಾಹುಲ್ ಫಿಟ್ ಆಗಿರುವುದರಿಂದ ಸ್ಯಾಮ್ಸನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಬಾಗಿಲು ಮುಚ್ಚಿದಂತಾಗಿದೆ. ಇನ್ನು ತಿಲಕ್ ವರ್ಮ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ 17ರ ಬಳಗದಲ್ಲಿದ್ದರೂ, ವಿಶ್ವಕಪ್ಗೆ 15 ಆಟಗಾರ ತಂಡವನ್ನಷ್ಟೇ ಆರಿಸಬೇಕಾಗಿರುವುದರಿಂದ ಇವರಿಬ್ಬರು ಹೊರಬೀಳಲಿದ್ದಾರೆ. ಸೂರ್ಯಕುಮಾರ್ ಅನುಭವಕ್ಕೆ ಭಾರತ ಆದ್ಯತೆ ನೀಡಲಿರುವುದರಿಂದ ತಿಲಕ್ ವರ್ಮಗೆ ವಿಶ್ವಕಪ್ ತಂಡ ಸೇರುವ ಅವಕಾಶ ಕೈತಪ್ಪಲಿದೆ. ಇನ್ನು ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಕೂಡ ಮಾಡಬಲ್ಲವರಾಗಿರುವುದರಿಂದ ವಿಶ್ವಕಪ್ ತಂಡದ 4ನೇ ವೇಗಿಯ ಸ್ಥಾನ ಪ್ರಸಿದ್ಧ ಕೃಷ್ಣ ಕೈತಪ್ಪಲಿದೆ ಎನ್ನಲಾಗಿದೆ.
ವಿಶ್ವಕಪ್ಗೆ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಮೊಹಮದ್ ಶಮಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಇಶಾನ್ ಕಿಶನ್ (2ನೇ ವಿ.ಕೀ), ಸೂರ್ಯಕುಮಾರ್ ಯಾದವ್.
VIDEO| ಅಮಿತಾಭ್ ಬಚ್ಚನ್ ಸ್ಟೈಲ್ನಲ್ಲಿ ಮಿಂಚಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್! ವಿಡಿಯೋ ವೈರಲ್…