More

    ಶುಕ್ರವಾರ ಇಂಡೋ ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ

    ದಾವಣಗೆರೆ: ನಗರದ ನಮನ ಅಕಾಡೆಮಿ ಹಾಗೂ ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಆ್ಯಂಡ್ ಲೀಶರ್ ಅಕಾಡೆಮಿ ಸಹಯೋಗದಲ್ಲಿ ನಗರದ ಎಸ್‌ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಸಭಾಂಗಣದಲ್ಲಿ ಮೇ 24ರಂದು ಸಂಜೆ 6 ಗಂಟೆಗೆ ಇಂಡೋ-ಶ್ರೀಲಂಕಾ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ನಡೆಯಲಿದೆ.
    ಸುಮಾರು 1.45 ತಾಸುಗಳ ಕಾಲ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ನಮನ ಅಕಾಡೆಮಿ ಗೌರವಾಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಡಾ. ಶಾಮನೂರು ಶಿವಶಂಕರಪ್ಪ,  ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ, ಶ್ರೀಲಂಕಾದ ಬೆಸಿಲಿಕ ಸ್ಪೋರ್ಟ್ಸ್ ಆ್ಯಂಡ್ ಲೀಶರ್ ಅಕಾಡೆಮಿ ಅಧ್ಯಕ್ಷ ರೋಷನ್ ಸಿಲ್ವಾ, ನಮನ ಅಕಾಡೆಮಿ ಅಧ್ಯಕ್ಷ ಕೆ.ಎನ್.ಗೋಪಲಕೃಷ್ಣ ಭಾಗವಹಿಸುವರು. ದಾವಣಗೆರೆ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ವ್ಯಂಗ್ಯಚಿತ್ರ ಕಲಾವಿದ ಡಾ. ಎಚ್.ಬಿ.ಮಂಜುನಾಥ ಅವರಿಗೆ ನಮನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
    ಶ್ರೀಲಂಕಾದ ಮಾಲಿ ಡ್ಯಾನ್ಸಿಂಗ್ ಅಕಾಡೆಮಿಯ 20 ಕಲಾವಿದರು ಸಾಂಪ್ರದಾಯಕ, ಜಾನಪದ ಹಾಗೂ ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸುವರು. ನಮನ ಅಕಾಡೆಮಿಯ ತಂಡದವರು ಮಣ್ಣಿನ ಸವಕಳಿ, ಕಲುಷಿತ ನೀರು ಕುರಿತಂತೆ ಸಂದೇಶಾತ್ಮಕ ಲಘು ಶಾಸ್ತ್ರೀಯ ನೃತ್ಯ, ಸ್ತ್ರೀ ಶೋಷಣೆ ಕುರಿತಾದ ನೃತ್ಯ ಹಾಗೂ ತತ್ವ ಪದ- ಜಾನಪದ ಶೈಲಿ ಮಿಶ್ರಣದ ನೃತ್ಯವನ್ನು ಪ್ರದರ್ಶಿಸಲಿರುವುದಾಗಿ ನಮನ ಅಕಾಡೆಮಿಯ ಕಾರ್ಯದರ್ಶಿ ಡಿ.ಕೆ.ಮಾಧವಿ ವಿವರಣೆ ನೀಡಿದರು.
    ರಾಣೆಬೆನ್ನೂರಿನ ಶ್ರೀ ಶಾರದಾ ನೃತ್ಯಾಲಯ ಹಾಗೂ ಶ್ರೀ ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆ, ಹರಿಹರದ ಸಂಕರ್ಷಣ ಭರತನಾಟ್ಯ ಶಾಲೆ, ದಾವಣಗೆರೆಯ ಗಾನಲಹರಿ ತಂಡಗಳಿಂದ ಪ್ರದರ್ಶನ ನಡೆಯಲಿದೆ. ಸ್ಥಳೀಯವಾಗಿ 78 ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
    ಇದು ಎರಡನೆಯ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದೆ, ಕಳೆದ ವರ್ಷ ವಿಯೆಟ್ನಾಂ ದೇಶದಲ್ಲಿ ಅಲ್ಲಿನ ಯೋಗ ಒಕ್ಕೂಟದೊಂದಿಗೆ ಯೋಗಾಸನ ಸ್ಪರ್ಧೆ, ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಂಘಟಿಸಲಾಗಿತ್ತು ಎಂದು ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಕೆ.ಎನ್. ಗೋಪಾಲಕೃಷ್ಣ, ಆರ್.ಎಚ್. ನಾಗಭೂಷಣ್, ಕಿರಣ್ ರವಿನಾರಾಯಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts