| ಬೆಂಕಿ ಬಸಣ್ಣ ನ್ಯೂ ಯಾರ್ಕ್
ಬೆಂಗಳೂರು: 6ನೇ ನಾವಿಕೋತ್ಸವ ವಿಶ್ವ ಕನ್ನಡ ಸಮ್ಮೇಳನವು ಆಫ್ರಿಕಾ ಖಂಡದ ಕೀನ್ಯಾ ದೇಶದ ರಾಜಧಾನಿಯಾದ ನೈರೋಬಿಯಲ್ಲಿ ಸೆಪ್ಟೆಂಬರ್ 9 ಮತ್ತು 10ನೇ ತಾರೀಕು ನಡೆಯಲಿದೆ. ಅಮೆರಿಕದಲ್ಲಿರುವ ನಾವಿಕ ( ನಾವು ವಿಶ್ವ ಕನ್ನಡಿಗರು ) ಸಂಸ್ಥೆಯು ಕನ್ನಡ ಸಾಂಸ್ಕೃತಿಕ ಸಂಘ ನೈರೋಬಿ ಇವರ ಆಶ್ರಯದಲ್ಲಿ ಜಂಟಿಯಾಗಿ ಈ ಸಮ್ಮೇಳನವನ್ನು ಆಯೋಜಿಸುತ್ತಿವೆ.
“ನಾವಿಕ ಸಂಸ್ಥೆಯು ಬೆಸ ವರ್ಷಗಳಲ್ಲಿ ಅಮೆರಿಕಾದಲ್ಲಿಯೂ ಮತ್ತು ಸಮ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಸಮ್ಮೇಳನಗಳನ್ನು ನಡೆಸುತ್ತಾ ಬಂದಿದೆ. ಆದರೆ, ಇದೇ ಮೊದಲ ಬಾರಿಗೆ ಆಫ್ರಿಕಾ ಖಂಡದಲ್ಲಿ ಬೃಹತ್ ನಾವಿಕೋತ್ಸವ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ” ಎಂದು ನಾವಿಕ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ್ ರಾವ್ ತಿಳಿಸಿದ್ದಾರೆ.
“ಈ ಸಮ್ಮೇಳನವನ್ನು ನೈರೋಬಿಯ ಜೈನ್ ಭವನದಲ್ಲಿ ನಡೆಸಲಾಗುತ್ತಿದ್ದು ಅಮೆರಿಕದಿಂದ ಮತ್ತು ಕರ್ನಾಟಕದಿಂದ ಬರುತ್ತಿರುವ ಕನ್ನಡಿಗರಿಗೆ ವಸತಿ, ಊಟ, ವಿಹಾರ, ಮನೋರಂಜನೆ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ” ಎಂದು ಕೀನ್ಯಾ ಕನ್ನಡ ಸಾಂಸ್ಕೃತಿಕ ಸಂಘದ ಮುಖ್ಯಸ್ಥರಾದ ರವಿಕಿರಣ್ ಬೆಳವಾಡಿ ತಿಳಿಸಿದ್ದಾರೆ.
ಈ ನಾವಿಕೋತ್ಸವದ ಸಹ-ಸಂಚಾಲಕರಾಗಿ ಶಿವಕುಮಾರ್, ಡಾಕ್ಟರ್ ಅನು ಭಟ್, ಕಿನ್ಯಾದ ಶ್ರೀವತ್ಸ ಪ್ರಸಾದ್ ಮತ್ತು ಸಲಹೆಗಾರರಾಗಿ ವಲ್ಲಿಶಾ ಶಾಸ್ತ್ರಿ ಸೇವೆ ಸಲ್ಲಿಸುತ್ತಿದ್ದಾರೆ.
ಸೆಪ್ಟೆಂಬರ್ ನಾಲ್ಕನೇ ತಾರೀಖಿನ ಸಂಜೆ ಅಮೆರಿಕಾ ಮತ್ತು ಕರ್ನಾಟಕದಿಂದ ಬರುವ ಅತಿಥಿಗಳಿಗಾಗಿ “ಕರೋಗ” ಎಂಬ ಭರ್ಜರಿ ಔತಣಕೂಟವನ್ನು ಕೀನ್ಯಾದ ಕನ್ನಡಿಗರು ಆಯೋಜಿಸಿದ್ದಾರೆ.
ಹೊರದೇಶಗಳಿಂದ ಬರುವ ಅತಿಥಿಗಳಿಗಾಗಿ ಸಪ್ಟೆಂಬರ್ 5 ರಿಂದ 9ನೇ ತಾರೀಖಿನವರೆಗೆ ಆಫ್ರಿಕನ್ ಸಫಾರಿ ಟೂರ್ ಪ್ಯಾಕೇಜ್ ವ್ಯವಸ್ಥೆ ಮಾಡಲಾಗಿದೆ. ಈ ಆಫ್ರಿಕನ್ ಸಫಾರಿಯಲ್ಲಿ ಮಸೈಮಾರ, ಒಲ್ಪಜೇಟ, ನೈವಾಷ ಸರೋವರ ಪ್ರದೇಶಗಳಲ್ಲಿರುವ ಸಾವಿರಾರು ಕಾಡು ಪ್ರಾಣಿಗಳನ್ನು ಅತಿ ಸಮೀಪದಿಂದ ನೋಡುವ ಸುವರ್ಣ ಅವಕಾಶವನ್ನು ಒದಗಿಸಲಾಗಿದೆ.
“ವಿನೋದ- ವಿಹಾರ- ವಿನಿಮಯ” ಎಂಬ ಘೋಷಣೆಯೊಂದಿಗೆ ನಡೆಯಲಿರುವ ಎರಡು ದಿವಸಗಳ ಈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಂಗೀತ, ನೃತ್ಯ, ನಾಟಕ, ಕನ್ನಡ ಕಲಿ, ಯಕ್ಷಗಾನ ಹೀಗೆ ಅನೇಕ ಕಾರ್ಯಕ್ರಮಗಳ ರಸದೌತಣವನ್ನು ಉಣಬಡಿಸಲಾಗುವುದು.
ಸೆಪ್ಟೆಂಬರ್ 10, ಭಾನುವಾರ ಮುಂಜಾನೆ ನಮ್ಮ ಕರ್ನಾಟಕದ ಚರಿತ್ರೆ, ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅಮೋಘ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಈ ನಾವಿಕೋತ್ಸವ ಸಮ್ಮೇಳನದಲ್ಲಿ ವುಮೆನ್ಸ್ ಫೋರಮ್ , ಎಜುಕೇಶನ ಫೋರಮ್, ಯೂಥ್ ಫೋರಮ್, ಮೆಡಿಕಲ್ ಫೋರಮ್ ಮುಂತಾದವುಗಳನ್ನು ಆಯೋಜಿಸಲಾಗುತ್ತಿದೆ.
ಬಿಸಿನೆಸ್ ಫೋರಮ್:
ಆಫ್ರಿಕಾದಲ್ಲಿ ಹಣ ಹೂಡಿಕೆ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿಯ ಅವಕಾಶಗಳನ್ನು ಕೇಂದ್ರವಾಗಿಸಿರಿಕೊಂಡು ತಜ್ಞರಿಂದ ಸಂವಾದ ನಡೆಸಲಾಗುವುದೆಂದು ಬಿಸಿನೆಸ್-ಫೋರಮ್ನ ಚೇರ್ಮನ್ ಬೆಂಕಿ ಬಸಣ್ಣ ತಿಳಿಸಿದ್ದಾರೆ. ಈ ಬಿಸಿನೆಸ್ ಫೋರಮ್ ಕಮಿಟಿಯಲ್ಲಿ ಕೀನ್ಯಾ ದೇಶದ ಜಯತೀರ್ಥ ಕರ್ಜಗಿ, ಬಾಲಾಜಿ ಬೆಂಗಳೂರು ಮತ್ತು ಆಲ್ಫ್ರೆಡ್ ಮತ್ತು ಅಮೆರಿಕದ ಶಿವಕುಮಾರ್, ಅಶೋಕ್ ಕಟ್ಟಿಮನಿ ಸದಸ್ಯರಾಗಿದ್ದಾರೆ.
ವಿಶೇಷ ಆಕರ್ಷಣೆಗಳು :
ಈ ನಾವೀಕೋತ್ಸವದಲ್ಲಿ ಮನೋಮೂರ್ತಿ ಅವರ ಮ್ಯೂಸಿಕಲ್ ನೈಟ್, ನಡೆದಾಡುವ ವಯೋಲಿನಿಸ್ಟ್ ಅನೀಶ್, ಕುದ್ರೋಳಿ ಗಣೇಶ ಅವರಿಂದ ಮ್ಯಾಜಿಕ್ ಶೋ, ರಂಗಧ್ವನಿ ತಂಡದಿಂದ ನಾಟಕ ಜೊತೆಗೆ ಕೀನ್ಯಾ ಮತ್ತು ಅಮೇರಿಕಾ ಕನ್ನಡಿಗರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮನೋಮೂರ್ತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ಮ್ಯೂಸಿಕಲ್ ನೈಟ್ನಲ್ಲಿ ಪ್ರಖ್ಯಾತ ಗಾಯಕರಾದ ಹೇಮಂತ್ ಕುಮಾರ್, ಚಿನ್ಮಯ್ ಅತ್ರೆಯಸ್, ಮಾನಸ ಹೊಳ್ಳ, ಅನುರಾಧ ಭಟ್ ಮತ್ತು ಚೇತನ್ ಸೊಸ್ಕಾ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಸಿಹಿ ಕಹಿ ಚಂದ್ರು ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬರುತ್ತಿರುವ ಅಡುಗೆಭಟ್ಟರಿಂದ “ಬೊಂಬಾಟ್ ಭೋಜನ” ನಡೆಯಲಿದೆ.
ಸ್ಮರಣ ಸಂಚಿಕೆ
ಈ ನಾವಿಕೋತ್ಸವದ ಪ್ರಯುಕ್ತ ಸ್ಮರಣ ಸಂಚಿಕೆಯನ್ನು ಹೊರ ತರುತ್ತಲಿದ್ದು ಕನ್ನಡ ಅಭಿಮಾನಿಗಳಿಂದ ಲೇಖನ, ಸಣ್ಣ ಕಥೆ, ಕವನ, ಪ್ರಬಂಧ, ನಗೆಹನಿ, ವ್ಯಂಗ್ಯ ಚಿತ್ರಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಲೇಖನಗಳನ್ನು [email protected] ಗೆ ಕಳಿಸಬೇಕಾಗಿ ವಿನಂತಿ.