ಬೆಂಗಳೂರು: ಅಂದು ಮಳೆ, ಅದರ ನಡುವೆಯೂ ಅದು ಸುಮಾರು ಮೂರು ಗಂಟೆಗಳ ಕನ್ನಡ ಕಾರ್ಯಕ್ರಮ. ನೂರೈವತ್ತಕ್ಕೂ ಅಧಿಕ ಮಂದಿ ನೆರೆದಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡದ ನಾದ, ಸಂಭ್ರಮ, ಸಡಗರ ಮೇಳೈಸಿತ್ತು. ಅಷ್ಟಕ್ಕೇ ಸೀಮಿತವಾಗಿರದೆ, ನಿರಂತರವಾಗಿ ಕನ್ನಡ ಕಲಿಯುವ ಹಾಗೂ ಬಳಸುವ ಕುರಿತಂತೆ ನೆರೆದಿದ್ದವರು ಪ್ರತಿಜ್ಞೆ ಮಾಡುವ ಮೂಲಕ ಕನ್ನಡ ಕಂಕಣವನ್ನು ತೊಟ್ಟರು.
ಹೀಗೊಂದು ಕಾರ್ಯಕ್ರಮ ಕಂಡುಬಂದಿದ್ದು ಬೆಂಗಳೂರಿನ ಕನಕಪುರ ರಸ್ತೆಯ ಜರಗನಹಳ್ಳಿಯಲ್ಲಿ. ಕನಕಪುರ ರಸ್ತೆಯ ‘ಕನ್ನಡ ಬಳಗ’ ಪ್ರತಿ ತಿಂಗಳು ‘ಕನ್ನಡ ಕಂಕಣ’ ಎಂಬ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದು, ಫೆಬ್ರವರಿಯ ಕಾರ್ಯಕ್ರಮ ಜರಗನಹಳ್ಳಿಯ ಉದ್ಯಾನವನದಲ್ಲಿ ಫೆ. 20ರ ಶನಿವಾರ ನಡೆಯಿತು. ಬಳಗದ ಅಧ್ಯಕ್ಷೆ ಭಾರ್ಗವಿ ಹೇಮಂತ್ ವಿಭಿನ್ನವಾದ ವೇದಿಕೆ ಒದಗಿಸಿ ಕಾರ್ಯಕ್ರಮಕ್ಕೆ ಬುನಾದಿ ಹಾಕಿಕೊಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮುಖ್ಯಅತಿಥಿಯಾಗಿ ಭಾಗವಹಿಸಿದ್ದು, ಪ್ರಾಧಿಕಾರದ ವತಿಯಿಂದ ಆಚರಿಸುತ್ತಿರುವ ಕನ್ನಡ ಕಾಯಕ ವರ್ಷ ಕಾರ್ಯಕ್ರಮದ ಅಡಿಯಲ್ಲಿ ಕನ್ನಡಪರವಾದ ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ ಎಂದರು. ಹಾಗೆಯೇ ಕನ್ನಡ ಕಂಕಣವು ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿ ಎಂದು ಆಶಿಸಿದರು. ಹಿರಿಯ ಸಾಹಿತಿ ಜರಗನಹಳ್ಳಿ ಶಿವಶಂಕರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಇದೊಂದು ಅಪರೂಪದ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ನಾಡಿನ ಎಲ್ಲೆಡೆ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಪರ ಹಿರಿಯ ಹೋರಾಟಗಾರ ರಾ.ನಂ. ಚಂದ್ರಶೇಖರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕನ್ನಡ ಕಂಕಣ ಕಾರ್ಯಕ್ರಮದ ಇತಿಹಾಸ ಮತ್ತು ಆಶಯಗಳನ್ನು ವಿವರಿಸಿದರು. ಈ ಹಿಂದೆ ಇದೇ ಮಾದರಿಯಲ್ಲಿ ನಡೆದ ‘ಉದ್ಯಾನವನದಲ್ಲಿ ಕನ್ನಡ’ ಸೇರಿ ಹಲವು ಕಾರ್ಯಕ್ರಮಗಳನ್ನು ಸ್ಮರಿಸಿಕೊಂಡರು.
ಪ್ರತಿ ತಿಂಗಳು ಕನ್ನಡ ಬಳಗದಿಂದ ಸಾಧಕರಿಗೆ ನೀಡಲಾಗುವ ಅಪ್ರತಿಮ ಕನ್ನಡಿಗ ಹಾಗೂ ಉದಯೋನ್ಮುಖ ಕನ್ನಡಿಗ ಪ್ರಶಸ್ತಿ ವಿತರಿಸುವ ಕಾರ್ಯಕ್ರಮಕ್ಕೆ ಇದೇ ಸಮಯದಲ್ಲಿ ಚಾಲನೆ ನೀಡಲಾಯಿತು. ಸಾಧಕರಾದ ಅಲೀಮ್, ಜ್ಞಾನ್ ಮಧು, ಲಲ್ಲೂ, ನಿಶಾ ಅವರು ಅಪ್ರತಿಮ ಕನ್ನಡಿಗ ಪ್ರಶಸ್ತಿಗೆ ಹಾಗೂ ಅನುಪಮ, ಶ್ರೀನಾಥ್ ಅವರು ಉದಯೋನ್ಮುಖ ಕನ್ನಡಿಗ ಪ್ರಶಸ್ತಿಗೆ ಭಾಜನರಾದರು. ಲೇಖಕ ಮಂಜುನಾಥ್ ಹಾಲುವಾಗಿಲು ಅವರ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ