ಬೆಂಗಳೂರು: ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಚಿತ್ರವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಪ್ರದರ್ಶನವಾಗುತ್ತಿದೆ. ಈ ಮಧ್ಯೆ, ಕಾಲಿವುಡ್ನ ಜನಪ್ರಿಯ ನಟ ಕಮಲ್ ಹಾಸನ್, ರಿಷಭ್ ಶೆಟ್ರಿಗೆ ಫೋನ್ ಮಾಡಿರುವ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ: ಹಣದ ವಿಚಾರವಾಗಿ ಬೆದರಿಕೆ ಹಾಕಿ ಕೆಟ್ಟದಾಗಿ ನಿಂದನೆ: ಹಾಸ್ಯ ಕಲಾವಿದೆ ನಯನಾ ವಿರುದ್ಧ ದೂರು ದಾಖಲು
ಇಷ್ಟಕ್ಕೂ ಕಮಲ್ ಹಾಸನ್ ಯಾಕೆ ಪೋನ್ ಮಾಡಿರಬಹುದು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಮೂಲಗಳ ಪ್ರಕಾರ, ‘ಕಾಂತಾರ’ ಚಿತ್ರವನ್ನು ಕಮಲ್ ನೋಡಿದ್ದಾರಂತೆ. ನೋಡಿ ಖುಷಿಯಾದ ಅವರು, ರಿಷಭ್ಗೆ ಫೊನ್ ಹಚ್ಚಿದ್ದಾರೆ. ಚಿತ್ರ ಬಹಳ ಚೆನ್ನಾಗಿ ಮಾಡಿದ್ದೀರಾ ಎಂದು ಹೊಗಳುವುದರ ಜತೆಗೆ, ರಿಷಭ್ರ ಕಥೆ ಹೇಳುವ ಕಲೆ ಬಹಲ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರಂತೆ.
ಇದಕ್ಕೂ ಮೊದಲು, ರಜನಿಕಾಂತ್ ಸಹ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದರು. ಅದಾಗಿ ಕೆಲವೇ ದಿನಗಳ ನಂತರ ಅವರನ್ನು ಅವರ ಚೆನ್ನೈ ಮನೆಗೆ ಹುಡುಕಿಕೊಂಡು ಹೋಗಿದ್ದರು ರಿಷಭ್ ಶೆಟ್ಟಿ. ಈ ಸಂದರ್ಭದಲ್ಲಿ ಶೆಟ್ರಿಗೆ ಆಶೀರ್ವಾದ ಮಾಡುವುದಷ್ಟೇ ಅಲ್ಲ, ಚಿನ್ನದ ಸರ ಹಾಕಿ ಕಳುಹಿಸಿದ್ದರು. ಈಗ ಕಮಲ್ ಹಾಸನ್ ಸಹ ಮೆಚ್ಚಿ ಮಾತನಾಡಿದ್ದಾರೆ. ಅದಲ್ಲದೆ ಸುದೀಪ್, ಪ್ರಭಾಸ್, ಕಂಗನಾ ರಣಾವತ್ ಸೇರಿದಂತೆ ಹಲವರು ‘ಕಾಂತಾರ’ ಮೂಡಿಬಂದಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
‘ಕಾಂತಾರ’ ಚಿತ್ರವು ಜಗತ್ತಿನಾದ್ಯಂತ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದ್ದು, ಈ ಪೈಕಿ ಭಾರತದಲ್ಲೇ 900 ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿದೆ ಎಂದು ಹೇಳಲಾಗುತ್ತಿದೆ/ ಭಾರತವಷ್ಟೇ ಅಲ್ಲ, ಆಸ್ಟ್ರೇಲಿಯಾ, ಯುಕೆ, ಕೆನಡಾ, ಯುಎಇ, ಅಮೆರಿಕಾ ಮುಂತಾದ ಕಡೆಗಳಲ್ಲೂ ಚಿತ್ರ ಯಶಸ್ವಿ 50 ದಿನಗಳನ್ನು ಮುಗಿಸಿದೆ.
ಇದನ್ನೂ ಓದಿ: ಇಷ್ಟು ವರ್ಷಗಳಲ್ಲಿ ಇಂಥ ಪಾತ್ರವನ್ನೇ ಮಾಡಿರಲಿಲ್ಲವಂತೆ ಗಣೇಶ್ … ಯಾವುದು ಆ ಪಾತ್ರ?
‘ಕಾಂತಾರ’ ಚಿತ್ರವನ್ನು ಹೊಂಬಾಳೆ ಫಿಲಂಸ್ನ ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಮುಂತಾದವರು ಅಭಿನಯಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.